ರಾಜಕೀಯ

ರಾಜಕೀಯ ಕಾರ್ಯಕ್ರಮದಲ್ಲಿ ಸುರೇಶ್ ಅಂಗಡಿ ಪುತ್ರಿ ಭಾಗಿ: ಉಪ ಚುನಾವಣೆ ಸ್ಪರ್ಧೆಗೆ ಪೂರ್ವ ತಯಾರಿ?

Shilpa D

ಬೆಳಗಾವಿ: ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿ. ಸುರೇಶ ಅಂಗಡಿ ಅವರ ಪುತ್ರಿ ಮತ್ತು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರ ಸೊಸೆ ಶ್ರದ್ಧಾ ಶೆಟ್ಟರ್‌ ಅವರು ಇದೇ ಮೊದಲ ಬಾರಿಗೆ ಬಿಜೆಪಿಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಮುಖಂಡರೊಂದಿಗೆ ವೇದಿಕೆ ಹಂಚಿಕೊಂಡರು.

ಎಪಿಎಂಸಿ ಆವರಣದಲ್ಲಿ ಪಕ್ಷದಿಂದ ಆಯೋಜಿಸಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜನ್ಮ ದಿನಾಚರಣೆ ಮತ್ತು ಕೃಷಿ ಸಮ್ಮಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹೊಸ್ತಿಲಲ್ಲಿ ನಡೆದಿರುವ ಈ ಬೆಳವಣಿಗೆಗೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಅಂಗಡಿ ಕುಟುಂಬದವರಿಗೆ ಟಿಕೆಟ್ ನೀಡಲಾಗುತ್ತದೆಯೇ ಎನ್ನುವ ಸುದ್ದಿಗಳು ರೆಕ್ಕೆಪುಕ್ಕ ಪಡೆದುಕೊಂಡಿವೆ.

ಪಕ್ಷದ ಆಯೋಜಿಸಿದ್ದ ರೈತರ ಸನ್ಮಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಕ್ಕೆ ಖುಷಿಯಾಗಿದೆ. ಕಾರ್ಯಕರ್ತರು ಮತ್ತು ಮುಖಂಡರು ಮನೆಗೂ ಆಗಾಗ ಭೇಟಿ ನೀಡುತ್ತಿರುತ್ತಾರೆ. ಆ ಸಂಪರ್ಕವನ್ನು ಇನ್ನೂ ಬೆಳೆಸಿಕೊಳ್ಳುತ್ತಾ ಹೋಗುತ್ತೇವೆ’ ಎಂದರು. ‘ಉಪ ಚುನಾವಣೆಯಲ್ಲಿ ಸ್ಪರ್ಧಿಸುವಿರಾ’ ಎಂಬ ಪ್ರಶ್ನೆಗೆ ‘ಆ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ’ ಎಂದರು. ‘

ಬಿಜೆಪಿ ಪಟ್ಟಿಯಲ್ಲಿ ಸ್ಥಳೀಯ ವೈದ್ಯರ ಹೆಸರು ಕೇಳಿ ಬರುತ್ತಿದೆ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಸಿದ್ಧ ವೈದ್ಯ ಗಿರೀಶ್ ಸೊನ್ವಾಲ್ಕರ್ ಆಸಕ್ತಿ ಹೊಂದಿದ್ದಾರೆ. ವಕೀಲ ಎಂ ಬಿ ಜಿರ್ಲಿ, ನವದೆಹಲಿಯ ರಾಜ್ಯ ಸರ್ಕಾರದ ಪ್ರತಿನಿಧಿ, ಶಂಕರ್‌ಗೌಡ ಪಾಟೀಲ್ ಮತ್ತು ಇತರರು ಪ್ರಮುಖ ಆಕಾಂಕ್ಷಿಗಳಾಗಿದ್ದಾರೆ.

ಲಿಂಗಾಯತ ಸಮುದಾಯದ ಪ್ರಮುಖ ವ್ಯಕ್ತಿಯನ್ನು ಕಣಕ್ಕಿಳಿಸಲು ಪಕ್ಷ ಚಿಂತಿಸುತ್ತಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಸುರೇಶ್ ಅಂಗಡಿ ಕುಟುಂಬಸ್ಥರಿಗೆ ಟಿಕೆಟ್ ನೀಡುವ ಬಗ್ಗೆ ಇನ್ನೂ ಖಚಿತ ಮಾಹಿತಿಯಿಲ್ಲ, ಡಾ. ಗಿರೀಶ್ ಸೋನಾವಾಲ್ಕರ್ ಅವರನ್ನು ಕಣಕ್ಕಿಳಿಸಲು ಹಲವು ಬಿಜೆಪಿ ನಾಯಕರು ಮುಂದಾಗಿದ್ದಾರೆ. ಜಾರಕಿಹೊಳಿ  ಸಹೋದರರ ಬೆಂಬಲವೂ ಕೂಡ ಇವರಿಗಿದೆ, ಆದರೆ ಅಂತಿಮ ನಿರ್ಧಾವನ್ನು ಬಿಜೆಪಿ ಹೈಕಮಾಂಡ್ ಕೈಗೊಳ್ಳಬೇಕಿದೆ.

SCROLL FOR NEXT