ರಾಜಕೀಯ

ಧರ್ಮೇಗೌಡರ ಆತ್ಮಹತ್ಯೆಗೆ ವೈಯಕ್ತಿಕ ಕಾರಣವೋ ರಾಜಕಾರಣವೋ ಗೊತ್ತಿಲ್ಲ: ಡಿ.ಕೆ. ಶಿವಕುಮಾರ್

Raghavendra Adiga

ಬೆಂಗಳೂರು: ಉಪಸಭಾಪತಿ ಧರ್ಮೇಗೌಡರ ಆತ್ಮಹತ್ಯೆ ವೈಯಕ್ತಿಕ ಕಾರಣವೋ ರಾಜಕಾರಣವೋ ಗೊತ್ತಿಲ್ಲ. ಆಗಬಾರದ್ದು ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಧರ್ಮೇಗೌಡರ ಸಾವಿನ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಶಿವಕುಮಾರ್, ಧರ್ಮೇಗೌಡ ಆತ್ಮಹತ್ಯೆ ನಂಬಲಿಕ್ಕೆ ಸಾಧ್ಯವಿಲ್ಲ. ಡೆತ್ ನೋಟ್‌ ಸಾರಾಂಶ ಏನು ಎಂಬುದು ಇನ್ನೂ ತಿಳಿದಿಲ್ಲ. ಬಹಳ ಸೂಕ್ಷ್ಮ ವ್ಯಕ್ತಿಯಾಗಿದ್ದ ಧರ್ಮೆಗೌಡ ಏತಕ್ಕಾಗಿ ಧೈರ್ಯ ಕಳೆದುಕೊಂಡು ಎಂಬುದನ್ನು ಅರ್ಥ ಮಾಡಿಕೊಳ್ಳಲು ಆಗುತ್ತಿಲ್ಲ. ಧರ್ಮೇಗೌಡರ ಸಾವು ಸಹಜವಾಗಿಯೇ ಕುಮಾರಸ್ವಾಮಿಗೆ ನೋವು ತಂದಿದೆ. ಜೆಡಿಎಸ್ ಪಕ್ಷಕ್ಕೆ ಆಘಾತವಾಗಿರುತ್ತದೆ. ಹೀಗಾಗಿ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸುವುದು ಸರಿಯಲ್ಲ ಎಂದರು.

ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ, ಸಾವಿನಲ್ಲಿ ಯಾರೂ ರಾಜಕೀಯ‌ ಮಾಡಬಾರದು. ಧರ್ಮೇಗೌಡರು ಏಕೆ ಆತ್ಮಹತ್ಯೆಯಂತಹ ತೀರ್ಮಾನ ತೆಗೆದುಕೊಂಡರು ಎಂಬ ಬಗ್ಗೆ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕು ಜನರಿಗೆ ಸತ್ಯದ ಅರಿವಾಗಬೇಕು ಎಂದು ಆಗ್ರಹಿಸಿದರು.

ಧರ್ಮೇಗೌಡರ ಕುಟುಂಬ ಜನಪರ ಕಾಳಜಿಗೆ ಬದ್ಧವಾಗಿತ್ತು. ಅವರ ಹಠಾತ್ ನಿಧನ ದಿಗ್ಭ್ರಮೆ ಮೂಡಿಸಿದೆ. ಈ ರೀತಿಯಾಗಿ ಅವರು ಅಗಲುತ್ತಾರೆ ಎಂಬುದು ಗೊತ್ತಿರಲಿಲ್ಲ. ಆ ಭಗವಂತ ಅವರ ಆತ್ಮಕ್ಕೆ ಶಾಂತಿ ಕೊಡಲಿ ಅವರ ಕುಟುಂಬಕ್ಕೆ ದುಃಖ‌ತಡೆಯುವ ಶಕ್ತಿ ನೀಡಲಿ ಎಂದು ಖಂಡ್ರೆ ಸಂತಾಪ ವ್ಯಕ್ತಪಡಿಸಿದರು.

SCROLL FOR NEXT