ರಾಜಕೀಯ

ದೆಹಲಿ ಆಯ್ತು.. ಈಗ ಪ್ರಶಾಂತ್ ಕಿಶೋರ್ ಕಣ್ಣು ಕರ್ನಾಟಕ ಚುನಾವಣೆ ಮೇಲೆ..!

Srinivasamurthy VN

ಬೆಂಗಳೂರು: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ನೇತೃತ್ವ ಆಮ್ ಆದ್ಮಿ ಪಕ್ಷದೊಂದಿಗೆ ಕೆಲಸ ಮಾಡಿದ್ದ ಖ್ಯಾತ ರಾಜಕೀಯ ತಜ್ಞ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ಸಂಸ್ಛೆ ಇದೀಗ ಮುಂಬರುವ ಕರ್ನಾಟಕ ವಿಧಾನಸಭೆ ಚುನಾವಣೆಯತ್ತ ಗಮನ ಕೇಂದ್ರೀಕರಿಸಿದೆ ಎನ್ನಲಾಗಿದೆ.

ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಮುಂಬರುವ 2023ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಐಪ್ಯಾಕ್ ಸಂಸ್ಥೆ ಕರ್ನಾಟಕದಲ್ಲಿ ತನ್ನ ಕಾರ್ಯತಂತ್ರ ಹೆಣೆಯಲಿದೆ ಎಂದು ಹೇಳಿದೆ.

ಇಷ್ಟಕ್ಕೂ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಅವರ ಐ-ಪ್ಯಾಕ್ ಸಂಸ್ಛೆ ಯಾವ ಪಕ್ಷಕ್ಕಾಗೆ ಕೆಲಸ ಮಾಡಲಿದೆ ಎಂಬ ಪ್ರಶ್ನೆಗೆ ಉತ್ತರ ಜೆಡಿಎಸ್.. ಹೌದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರ ಜ್ಯಾತ್ಯಾತೀತ ಜನತಾದಳ ಪಕ್ಷದ ಪರವಾಗಿ ಐಪ್ಯಾಕ್ ಸಂಸ್ಥೆ ಕೆಲಸ ಮಾಡಲಿದೆಯಂತೆ. ಈ ಕುರಿತಂತೆ ಸ್ವತಃ ಕುಮಾರಸ್ವಾಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪರ ರಣತಂತ್ರ ಹೆಣೆಯಲಿದ್ದಾರೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿರುವ ಹೆಚ್​ಡಿಕೆ, 'ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್​ ಪರ ಚುನಾವಣಾ ರಣತಂತ್ರ ಹೆಣೆಯುವಂತೆ ಪ್ರಶಾಂತ್​ ಕಿಶೋರ್​ ಜೊತೆಗೆ ಪ್ರಾಥಮಿಕ ಹಂತದ ಮಾತುಕತೆ ನಡೆಸಲಾಗಿದೆ. ಈ ಚರ್ಚೆ ಫಲ ನೀಡಿದರೆ, 2023ರ ವೇಳೆಗೆ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್​ ಕಿಶೋರ್​ ಜೆಡಿಎಸ್​ ಪರ ಚುನಾವಣೆಯಲ್ಲಿ ಕೆಲಸ ಮಾಡುವುದು ಬಹುತೇಕ ಖಚಿತ' ಎಂದು ತಿಳಿಸಿದ್ದಾರೆ.

'ಐ-ಪ್ಯಾಕ್' ಎಂಬ ಖಾಸಗಿ ಚುನಾವಣಾ ಪ್ರಚಾರ ಸಂಸ್ಥೆಯನ್ನು ನಡೆಸುತ್ತಿರುವ ಪ್ರಶಾಂತ್​ ಕಿಶೋರ್​ ಈ ಹಿಂದೆ 2014 ಮತ್ತು 2019ರಲ್ಲಿ ಕೇಂದ್ರದಲ್ಲಿ ಬಿಜೆಪಿ ಪರ ಕೆಲಸ ಮಾಡಿದ್ದರು. ಈ ಎರಡೂ ಚುನಾವಣೆಯಲ್ಲಿ ಬಿಜೆಪಿ ಅಖಂಡ ಗೆಲುವು ಸಾಧಿಸಿತ್ತು. ಇದಾದ ಬಳಿಕ ಪ್ರಶಾಂತ್ ಕಿಶೋರ್ ಬಿಹಾರದಲ್ಲಿ ಜೆಡಿಯು ಜೊತೆ ಕೈ ಜೋಡಿಸಿದ್ದರು. ಅಲ್ಲಿಯೂ ಮತ್ತೆ ನಿತೀಶ್ ಕುಮಾರ್ ಅವರು ಅಧಿಕಾರದ ಗದ್ದುಗೆ ಏರಿದ್ದರು. ಬಳಿಕ ಇತ್ತೀಚೆಗೆ ಮುಕ್ತಾಯಗೊಂಡ ದೆಹಲಿ ಚುನಾವಣೆಯಲ್ಲೂ ಸಹ ಪ್ರಶಾಂತ್​ ಕಿಶೋರ್​ ಅವರ ಐ ಪ್ಯಾಕ್​ ಸಂಸ್ಥೆ ಆಮ್​ ಆದ್ಮಿ ಪಕ್ಷದ ಪರ ಕೆಲಸ ಮಾಡುವ ಮೂಲಕ ಎಎಪಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು.

SCROLL FOR NEXT