ರಾಜಕೀಯ

ತಮ್ಮದು ಪಕ್ಷ ಪೂಜೆ, ವ್ಯಕ್ತಿ ಪೂಜೆಯಲ್ಲ: ಡಿಕೆ ಶಿವಕುಮಾರ್

Lingaraj Badiger

ಬೆಂಗಳೂರು: ತಮ್ಮದು ಪಕ್ಷ ಪೂಜೆಯೇ ಹೊರತು ವ್ಯಕ್ತಿ ಪೂಜೆಯಲ್ಲ. ಅಧಿಕಾರಕ್ಕಾಗಿ ಗುಂಪು ಕಟ್ಟಿಕೊಂಡು ಓಡಾಡುವ ರಾಜಕಾರಣಿ ತಾವಲ್ಲ ಎಂದು ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಬಗ್ಗೆ ಯಾರು, ಯಾರು ಏನೇನು ಹೇಳಿಕೆ ಕೊಡುತ್ತಿದ್ದಾರೆ. ಮಾಧ್ಯಮಗಳಲ್ಲಿ ಏನು ವರದಿಯಾಗುತ್ತಿದೆ ಎಂಬ ಎಲ್ಲಾ ಸಂಗತಿಗಳನ್ನು ಗಮನಿಸುತ್ತಿದ್ದೇನೆ ಎಂದು ಮಾರ್ಮಿಕವಾಗಿ ನುಡಿದರು.

ಬಿಜೆಪಿಯವರಿಗೆ ಮಹದಾಯಿ, ಕಾವೇರಿ, ಕೃಷ್ಣಾ ನದಿ ನೀರಿನ ವಿಚಾರಗಳು ಬೇಕಿಲ್ಲ. ಅವರಿಗೆ  ಕ್ಷೇತ್ರದ ಅಭಿವೃದ್ಧಿಗಿಂತ ರಾಜಕಾರಣವೇ ಮುಖ್ಯವಾಗಿದೆ. ಪ್ರತಿಪಕ್ಷ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯೂ ಬೇಕಾಗಿಲ್ಲ. ಮೈತ್ರಿ ಸರ್ಕಾರದ ಅವಧಿಯಲ್ಲಿ ಮಂಜೂರು ಮಾಡಿದ ಕೆಲಸವನ್ನು ನಿಲ್ಲಿಸಲು ಅಧಿಕಾರಿಗಳಿಗೆ ಸೂಚನೆ ಕೊಡುತ್ತಿದ್ದಾರೆ. ಇದಕ್ಕೆಲ್ಲ ಪಕ್ಷ ಹೇಗೆ ಎಲ್ಲಿ ಉತ್ತರಿಸಬೇಕೆಂಬ ಬಗ್ಗೆಯೂ ಚರ್ಚಿಸಲಾಗುವುದು ಎಂದರು.

ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳ ಅಭಿವೃದ್ಧಿಯನ್ನು ಬಿಜೆಪಿ ನಿಲ್ಲಿಸುತ್ತಿದ್ದು, ಈ ಬಗ್ಗೆ ಎಲ್ಲರೂ ಒಟ್ಟಾಗಿ ಕೂತು ಚರ್ಚಿಸಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಾಗುವುದು ಎಂದರು.

SCROLL FOR NEXT