ರಾಜಕೀಯ

ಪರಿಷತ್ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಯಾಗಿ ಲಕ್ಷ್ಮಣ್ ಸವದಿ ಕಣಕ್ಕಿಳಿಸುವ ಸಾಧ್ಯತೆ

Lingaraj Badiger

ಬೆಂಗಳೂರು: ಫೆಬ್ರವರಿ 17 ರಂದು ನಡೆಯಲಿರುವ ವಿಧಾನ ಪರಿಷತ್ ಉಪಚುನಾವಣೆಗೆ ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಪಕ್ಷದ ಮೂಲಗಳ ಪ್ರಕಾರ, ಸವದಿ ಅವರ ಹೆಸರನ್ನು ರಾಜ್ಯದ ಪಕ್ಷದ ಮುಖಂಡರು ಪರಿಷತ್ ಸ್ಥಾನಕ್ಕೆ ಅಂತಿಮಗೊಳಿಸಿದ್ದಾರೆ. ಸವದಿ ಸಂಪುಟದಲ್ಲಿ ಮುಂದುವರಿಯಲು ಅವರು ಆರು ತಿಂಗಳೊಳಗೆ ಮೇಲ್ಮನೆಯ ಸದಸ್ಯರಾಗಬೇಕಾಗಿದೆ. 
 
ವಿಧಾನಸಭೆ ಇಲ್ಲವೇ ವಿಧಾನ ಪರಿಷತ್ ಸದಸ್ಯರಾಗದೆ ಸಂಪುಟದಲ್ಲಿ ಸಚಿವರಾಗಿರುವ ಸವದಿ ಅವರ ಆರು ತಿಂಗಳ ಅವಧಿ ಬರುವ ಫೆ. 20 ರಂದು ಕೊನೆಗೊಳ್ಳಲಿದೆ.

ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಕರ್ನಾಟಕ ವಿಧಾನಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್ ಸದಸ್ಯ ರಿಜ್ವಾನ್ ಅರ್ಷದ್ ಅವರಿಂದ ಖಾಲಿಯಾಗಿರುವ ಸ್ಥಾನಕ್ಕೆ ವಿಧಾನಸಭೆ ಉಪಚುನಾವಣೆ ನಡೆಯುತ್ತಿದೆ.

ವಿಧಾನಸಭೆ ಅಥವಾ ಪರಿಷತ್ತಿನ ಸದಸ್ಯರಲ್ಲದಿದ್ದರೂ, ಲಕ್ಷ್ಮಣ ಸವದಿ ಅವರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಂಡ ಮುಖ್ಯಮಂತ್ರಿ ಬಿ ಎಸ್ ಯಡಿಯುರಪ್ಪ ಉಪಚುನಾವಣೆಗೆ ಸವದಿಯವರನ್ನು ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಬಗ್ಗೆ ಬುಧವಾರ ಸುಳಿವು ನೀಡಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡು ರಾವ್ ಅವರು ಪಕ್ಷದ ಅಭ್ಯರ್ಥಿಯನ್ನು ಪರಿಷತ್ ಉಪಚುನಾವಣೆಗಳಿಗೆ ಕಣಕ್ಕಿಳಿಸುವ ಯಾವುದೇ ಸಾಧ್ಯತೆಗಳನ್ನು ಈಗಾಗಲೇ ತಳ್ಳಿಹಾಕಿದ್ದಾರೆ.

224 ಸದಸ್ಯ ಬಲದ ಕರ್ನಾಟಕ ವಿಧಾನಸಭೆಯಲ್ಲಿ ಕೇವಲ 34 ಸದಸ್ಯರನ್ನು ಹೊಂದಿರುವ ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಸಾಧ್ಯತೆ ಇಲ್ಲ.

SCROLL FOR NEXT