ರಾಜಕೀಯ

ತಳಮಟ್ಟದಿಂದ ಪಕ್ಷ ವಿಸ್ತರಣೆ, ಸಾಂಪ್ರದಾಯಿಕ ಮತದಾರರ ಸೆಳೆತ: ಡಿ.ಕೆ. ಶಿವಕುಮಾರ್ ಮುಂದಿನ ಬಹುದೊಡ್ಡ ಸವಾಲು

Sumana Upadhyaya

ಬೆಂಗಳೂರು: ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರಾಗಿ ಡಿ ಕೆ ಶಿವಕುಮಾರ್ ಗುರುವಾರ ಅಧಿಕಾರ ಸ್ವೀಕರಿಸುತ್ತಿದ್ದಾರೆ. ಅವರ ನೇಮಕಾತಿ ಮಾಡಿ ಮೂರು ತಿಂಗಳಾಗಿದೆ. ಆದರೆ ಕೊರೋನಾ ಲಾಕ್ ಡೌನ್ ಹಿನ್ನೆಲೆಯಲ್ಲಿ ಸಮಾರಂಭ ಮಾಡಲು ಸಾಧ್ಯವಾಗಿರಲಿಲ್ಲ. ರಾಜ್ಯ ಸರ್ಕಾರದಿಂದ ಇಷ್ಟು ದಿನ ಅನುಮತಿ ಸಿಕ್ಕಿರಲಿಲ್ಲ. ಇಂದು ಬಹುದೊಡ್ಡ ಕಾರ್ಯಕ್ರಮ ನಡೆಸುವ ಸಿದ್ದತೆಯಲ್ಲಿ ಕರ್ನಾಟಕ ಕಾಂಗ್ರೆಸ್ ಇದೆ.

ಕೆಪಿಸಿಸಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪರಿಸ್ಥಿತಿಯೇನು ಅಷ್ಟು ಅನುಕೂಲಕರವಾಗಿಲ್ಲ. ಕಳೆದು ಹೋದ ಅಧಿಕಾರವನ್ನು ಮರಳಿ ತರುವುದು, ಕಾಂಗ್ರೆಸ್ ನ ಸಾಂಪ್ರದಾಯಿಕ ಮತದಾರರನ್ನು ಸೆಳೆಯುವುದು, ತಳಮಟ್ಟದಿಂದ ಪಕ್ಷ ಸಂಘಟನೆ ಡಿ ಕೆ ಶಿವಕುಮಾರ್ ಅವರ ಮುಂದಿರುವ ಸದ್ಯದ ಬಹುದೊಡ್ಡ ಸವಾಲಾಗಿದೆ.

ಕೆಪಿಸಿಸಿ ಅಧ್ಯಕ್ಷರಾಗಿ, ವಿರೋಧ ಪಕ್ಷದ ಪ್ರಮುಖ ನಾಯಕನಾಗಿ ಸರ್ಕಾರವನ್ನು ಎಚ್ಚರಿಸುವುದು, ಸರ್ಕಾರದ ಲೋಪದೋಷಗಳನ್ನು ಹೇಳುವ ಕೆಲಸದಲ್ಲಿ ಡಿ ಕೆ ಶಿವಕುಮಾರ್ ಈಗಾಗಲೇ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಪಕ್ಷದ ಕಾರ್ಯಕರ್ತರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಸಾಮೂಹಿಕ ನಾಯಕತ್ವದ ಸೂಚನೆಯನ್ನು ಡಿ ಕೆ ಶಿವಕುಮಾರ್ ನೀಡುತ್ತಿದ್ದಾರೆ. ಈ ಎಲ್ಲಾ ಗುಣಗಳು, ಚುನಾವಣೆಯಲ್ಲಿ ಗೆಲ್ಲಲು ಬೇಕಾದ ತಂತ್ರಗಳು. ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್ ನ ರಾಜ್ಯ ನಾಯಕತ್ವದಲ್ಲಿ ಇಷ್ಟು ದಿನ ಈ ಎಲ್ಲಾ ಗುಣಗಳು ಕಣ್ಮರೆಯಾಗಿತ್ತು ಎನ್ನಬಹುದು.

ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿ ಗುರುತಿಸಿಕೊಂಡಿರುವ ಡಿ ಕೆ ಶಿವಕುಮಾರ್ ಅವರನ್ನು ಚಾಲಕರ ಸೀಟಿನಲ್ಲಿ ಕುಳ್ಳಿರಿಸಿ ರಾಜ್ಯದಲ್ಲಿನ ಒಕ್ಕಲಿಗ ಸಮುದಾಯದ ಮತಗಳನ್ನು ಸೆಳೆಯುವುದು ಕಾಂಗ್ರೆಸ್ ಹೈಕಮಾಂಡ್ ನ ಮುಖ್ಯ ತಂತ್ರವಾಗಿದೆ.

1999ರಲ್ಲಿ ಒಕ್ಕಲಿಗ ಸಮುದಾಯದ ನಾಯಕ ಎಸ್ ಎಂ ಕೃಷ್ಣ ಅವರ ಉಸ್ತುವಾರಿಯಲ್ಲಿ ಕಾಂಗ್ರೆಸ್ ಗೆಲುವು ಕಂಡ ನಂತರ ಎರಡು ದಶಕಗಳ ಬಳಿಕ ಅದೇ ಸಮುದಾಯದಿಂದ ರಾಜ್ಯ ನಾಯಕರಾಗಿದ್ದಾರೆ ಡಿ ಕೆ ಶಿವಕುಮಾರ್. ಎಸ್ ಬಂಗಾರಪ್ಪ ಅವರ ಸಂಪುಟದಲ್ಲಿ ಕೆಲಸ ಮಾಡಿದ್ದರೂ ಕೂಡ ಡಿ ಕೆ ಶಿವಕುಮಾರ್ ರಾಜ್ಯ ರಾಜಕೀಯದಲ್ಲಿ ಮುನ್ನೆಲೆಗೆ ಬಂದಿದ್ದು ಎಸ್ ಎಂ ಕೃಷ್ಣ ಕಾಲದಲ್ಲಿ.

SCROLL FOR NEXT