ರಾಜಕೀಯ

ರೈತ ಸಂಘದೊಂದಿಗೆ ಸೇರಿ ಹೋರಾಟ: ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿರುವುದಕ್ಕೆ ಸಾಕ್ಷಿ- ಕೆ.ಎಸ್.ಈಶ್ವರಪ್ಪ

Manjula VN

ಚಿತ್ರದುರ್ಗ: ರಾಜ್ಯದಲ್ಲಿ ಕಾಂಗ್ರೆಸ್ ಶಕ್ತಿಹೀನವಾಗಿದೆ ಎನ್ನುವುದಕ್ಕೆ ರೈತ ಸಂಘದ ಜೊತೆ ಸೇರಿ ಹೋರಾಟ ಮಾಡುತ್ತೇವೆ ಎನ್ನುವ ಸಿದ್ದರಾಮಯ್ಯ ಹೇಳಿಕೆಯೇ ಸಾಕ್ಷಿ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ಚಿತ್ರದುರ್ಗದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಗೆ ಸ್ವತಂತ್ರವಾಗಿ ಹೋರಾಡುವ ಶಕ್ತಿ ಇದ್ದಿದ್ದರೆ ರೈತ ಸಂಘವನ್ನು ಯಾಕೆ ಸೇರಿಸಿಕೊಳ್ಳಬೇಕಿತ್ತು, ಅವರು ಹತಾಶರಾಗಿದ್ದಾರೆ. ಲೋಕಸಭೆಯಲ್ಲಿ ಒಂದೇ ಸ್ಥಾನ ಗೆದ್ದಿದ್ದು, ಅಧಿಕಾರ ಕಳೆದುಕೊಂಡಿದ್ದು, ಎಲ್ಲವೂ ಇದಕ್ಕೆ ಉದಾಹರಣೆಯಾಗಿವೆ. ಈ ಕಾರಣಕ್ಕೆ ಜೀವ ಪಡೆದುಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹರಿಹಾಯ್ದರು.

ಕಾಂಗ್ರೆಸ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ವಿಪಕ್ಷ ನಾಯಕರ ನಡುವೆ ಪೈಪೋಟಿ ನಡೆಯುತ್ತಿದೆ. ನಾನು ನಾಯಕ ಆಗಬೇಕು, ನಾನು ಮುಖಂಡ ಆಗಬೇಕು ಎಂಬ ಪೈಪೋಟಿ ನಡೆಯುತ್ತಿದೆ. ರಾಜಕೀಯವಾಗಿ ಏನಾದರೂ ಆಪಾದನೆ ಮಾಡಿದರೆ ನಾಯಕರಾಗುತ್ತೇವೆ ಎಂಬ ಉದ್ದೇಶ ಹೊಂದಿದ್ದಾರೆ. ಅಲ್ಲದೆ ಹೋರಾಟ ಮಾಡುತ್ತಿದ್ದೇನೆ ಎಂದು ಸೋನಿಯಾ ಗಾಂಧಿ ಅವರನ್ನು ತೃಪ್ತಿಪಡಿಸಬೇಕು ಅದಕ್ಕಾಗಿ ಹೀಗೆ ಮಾತನಾಡುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಜೀವಂತವಾಗಿದ್ದೇವೆ ಎಂದು ತೋರಿಸಬೇಕಿತ್ತು. ಅದಕ್ಕಾಗಿ ಹೀಗೆ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ಕಾಂಗ್ರೆಸ್ಸಿನವರು ಈ ಪರಿಸ್ಥಿತಿಯಲ್ಲಿ ಪಕ್ಷಭೇದ ಮರೆತು ಸರ್ಕಾರಕ್ಕೆ ಬೆಂಬಲ ಕೊಡಬೇಕಾಗಿತ್ತು. ಜನ ಸಂಕಷ್ಟದಲ್ಲಿದ್ದಾರೆ, ರಾಜಕೀಯ ಮಾಡಬಾರದು ಎಂದು ಸಹಕಾರ ಕೊಡುವುದು ಬಿಟ್ಟು, ಹುಳುಕು ಹುಡುಕುತ್ತಿದ್ದಾರೆ. ಇದನ್ನು ಜನ ಗಮನಿಸುತ್ತಾರೆ. ಇಂತಹ ಸಂದರ್ಭದಲ್ಲೂ ರಾಜಕಾರಣ ಮಾಡುತ್ತಾರೆ ಎಂದು ಜನ ಸಿದ್ದರಾಮಯ್ಯ ಅವರಿಗೆ ಛೀಮಾರಿ ಹಾಕುತ್ತಾರೆ ಎಂದು ಈಶ್ವರಪ್ಪ ಹೇಳಿದರು.

SCROLL FOR NEXT