ರಾಜಕೀಯ

ಡಿಕೆಶಿ ಪದಗ್ರಹಣ ದೇಶಕ್ಕೆ ಬಹಳ ಮುಖ್ಯ: ಆಶೋಕ್ ತಿರುಗೇಟು

Srinivas Rao BV

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸರ್ಕಾರದ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಅವರ ಪದಗ್ರಹಣಕ್ಕೆ ಸರ್ಕಾರ ಅಡ್ಡಿ ಮಾಡಿಲ್ಲ ಎಂದು ಕಂದಾಯ ಸಚಿವ ಆರ್ ಆಶೋಕ್ ಸ್ಪಷ್ಟಪಡಿಸಿದ್ದಾರೆ. 

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಡಿ.ಕೆ ಶಿವಕುಮಾರ್ ಅವರಿಗೂ ಸರ್ಕಾರಕ್ಕೂ ಎಣ್ಣೆ ಸಿಗೇಕಾಯಿ ಇದ್ದ ಹಾಗೆ ಹೀಗಾಗಿ ಅವರು ವೃಥಾ ಹುರುಳಿಲ್ಲದ ಆರೋಪ ಮಾಡುತ್ತಿದ್ದಾರೆ. 

ಅವರು ದೊಡ್ಡ ಪ್ರಮಾಣದಲ್ಲಿ ಕಾರ್ಯಕ್ರಮ ಮಾಡಬೇಕಾದರೆ ನಿಯಮಗಳನ್ನು ಬದಲಾವಣೆ ಮಾಡಬೇಕು. ಅವರ ಪದಗ್ರಹಣ ದೇಶಕ್ಕೆ ರಾಜ್ಯಕ್ಕೆ ಬಹಳ ಮುಖ್ಯ ಎಂದು ವ್ಯಂಗ್ಯವಾಗಿ ತಿರುಗೇಟು ನೀಡಿದ್ದಾರೆ. ಪರಿಷತ್ ಗೆ ಈಗಷ್ಟೇ ಚುನಾವಣೆ ಘೋಷಣೆ ಆಗಿದೆ. ಕೇಂದ್ರ ಮತ್ತು ರಾಜ್ಯದ ನಾಯಕರು ಚರ್ಚೆ ಮಾಡಿದ ನಂತರ ಅಭ್ಯರ್ಥಿ ಗಳ ಹೆಸರು ಪ್ರಕಟಿಸಲಾಗುತ್ತದೆ. ಈಗಾಗಲೇ ಯಡಿಯೂರಪ್ಪ ಕೆಲವರಿಗೆ ಮಾತು ಕೊಟ್ಟಿದ್ದು ಅದನ್ನು ಅವರು ಪಾಲನೆ ಮಾಡುತ್ತಾರೆ ಮಾತು ತಪ್ಪುವುದಿಲ್ಲ ಎಂದರು. ವರಿಷ್ಟ ನಾಯಕರ ಚರ್ಚೆ ನಂತರ ಪರಿಷತ್ ಚುನಾವಣೆಗೆ ಅಭ್ಯರ್ಥಿ ಹೆಸರು ಹೆಸರು ಪ್ರಕಟಿಸಲಾಗುವುದು ರಾಜ್ಯಸಭೆಗೆ ಪಕ್ಷದ ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡಿದಂತೆ ಪರಿಷತ್ ಚುನಾವನೆಯಲ್ಲೂ ಅವಕಾಶ ಮಾಡಿಕೊಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. 

ಕಾಂಗ್ರೆಸ್ ನಂತೆ ಕುಟುಂಬ ರಾಜ ಕಾರಣಕ್ಕೆ ಮಣೆ ಹಾಕುವುದಿಲ್ಲ ಹೀಗಾಗಿ ಕಾಂಗ್ರೆಸ್ ನಲ್ಲಿ ಈಗಾಗಲೇ ಬಂಡಾಯದ ಬಿಸಿ ಶುರುವಾಗಿದೆ.ಬಿಜೆಪಿಯಲ್ಲಿ ಕಾರ್ಯಕರ್ತರಿಗೆ ಅವಕಾಶ ನೀಡಲಾಗಿದೆ ಎಂದು ಸಚಿವರು ಹೇಳಿದರು.
 

SCROLL FOR NEXT