ರಾಜಕೀಯ

ನಿಖಿಲ್ ರಾಜಕೀಯ ಮಂಡ್ಯದಿಂದ ರಾಮನಗರಕ್ಕೆ ಶಿಫ್ಟ್: ಆಹ್ವಾನ ಪತ್ರಿಕೆ ಜೊತೆ ಜನರಿಗೆ ಎಚ್ ಡಿಕೆ ಗಿಫ್ಟ್!

Shilpa D

ಬೆಂಗಳೂರು: ಸ್ಯಾಂಡಲ್ ವುಡ್ ಯುವರಾಜ ಹಾಗೂ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರ ಸ್ವಾಮಿ ವಿವಾಹದ ಮೂಲಕ ರಾಮನಗರದಲ್ಲಿ ಮಗನ ರಾಜಕೀಯ ಭವಿಷ್ಯಕ್ಕೆ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭದ್ರ ಬುನಾದಿ ಹಾಕುತ್ತಿದ್ದಾರೆ. 

ನಿಖಿಲ್​ ಕುಮಾರಸ್ವಾಮಿ ವಿವಾಹದ ಹೆಸರಲ್ಲಿ ಜಿಲ್ಲೆಯ ಜನರನ್ನು ಭಾವನಾತ್ಮಕವಾಗಿ ಸೆಳೆಯುವ ಪ್ರಯತ್ನಕ್ಕೆ ಮುಂದಾಗಿರುವ ಮಾಜಿ ಸಿಎಂ, ಈಗಾಗಲೇ ಮದುವೆ ಆಮಂತ್ರಣ ಪತ್ರಿಕೆ ಜೊತೆಗೆ ಕ್ಷೇತ್ರದ ಜನರಿಗೆ ಸುದೀರ್ಘ ಪತ್ರವನ್ನು ಬರೆದಿದ್ದಾರೆ. ಈ ಪತ್ರದಲ್ಲಿ ರಾಮನಗರದಲ್ಲೇ ಯಾಕೆ ಮದುವೆ ಮಾಡುತ್ತಿರುವ ಬಗ್ಗೆ ವಿವರಣೆ ನೀಡಿದ್ದಾರೆ.

ಈಗ ಇದಕ್ಕೆ ಪುಷ್ಠಿ ನೀಡುವಂತೆ ಕ್ಷೇತ್ರದ ಜನರಿಗೆ ವಿವಾಹ ಆಮಂತ್ರಣ ನೀಡಲು ತಯಾರಿ ನಡೆಸಿರುವ ಅವರು, ಲಗ್ನ ಪತ್ರಿಕೆ ಜೊತೆ ಮತದಾರರಿಗೆ ಭರ್ಜರಿ ಗಿಫ್ಟ್​ ನೀಡಲು ಮುಂದಾಗಿದ್ದಾರೆ. ತಮ್ಮ ಕ್ಷೇತ್ರವಾದ ಚನ್ನಪಟ್ಟಣ ಹಾಗೂ ಪತ್ನಿ ಅನಿತಾ ಅವರ ಕ್ಷೇತ್ರವಾದ ರಾಮನಗರ ಮತದಾರರಿಗೆ ಈ ಉಡುಗೊರೆ ನೀಡಲು ಅವರು ನಿರ್ಧರಿಸಿದ್ದಾರೆ.

ರಾಮನಗರದಲ್ಲಿ ಸುಮಾರು 68 ಸಾವಿರ ಕುಟುಂಬ ಹಾಗೂ ಚನ್ನಪಟ್ಟಣದ ಸುಮಾರು 72 ಸಾವಿರ  ಕುಟುಂಬಗಳಿಗೆ ಆಮಂತ್ರಣ ಪತ್ರಿಕೆ ಜೊತೆ ಸಂಪ್ರದಾಯದಂತೆ ಗಂಡಸರಿಗೆ  ಪಂಚೆ, ಹೆಂಗಸರಿಗೆ ರೇಷ್ಮೆ ಸೀರೆ ನೀಡಲು ಅವರು ಮುಂದಾಗಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. 

ಲೋಕಸಭಾ ಚುನಾವಣೆ ಹೀನಾಯ ಸೋಲಿನ ಬಳಿಕ ಪಕ್ಷ ಸಂಘಟನೆಗೆ ಮುಂದಾಗಿರುವ ಜೆಡಿಎಸ್​ ನಾಯಕರು ಕುಮಾರಸ್ವಾಮಿಗೆ ರಾಜಕೀಯ ಕರ್ಮಭೂಮಿಯಾಗಿರುವ ರಾಮನಗರದಲ್ಲಿ ತಮ್ಮ ಅಭಿಮಾನಿಗಳ ಸಮ್ಮುಖದಲ್ಲಿ ಮಗನ ಮದುವೆ ಸಿದ್ಧತೆ ನಡೆಸಿದ್ದು, ಈ ಮೂಲಕ ಮತ್ತೆ ಜೆಡಿಎಸ್​ ಪರ್ವ ಆರಂಭಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. 
 

SCROLL FOR NEXT