ರಾಜಕೀಯ

ಎಂಪಿ ರಾಜಕೀಯ ಬಿಕ್ಕಟ್ಟು: ಸಿಂಧಿಯಾಗೆ ರಾಜ್ಯದ 'ರೆಸಾರ್ಟ್ ರಾಜಕೀಯ' ಪರಿಣಿತ ಬಿಜೆಪಿ ನಾಯಕರ ಸಾಥ್

Shilpa D

ಬೆಂಗಳೂರು: ಮಧ್ಯಪ್ರದೇಶದ ಕೈ ಶಾಸಕರನ್ನು ಬೆಂಗಳೂರಿಗೆ ಶಿಫ್ಟ್ ಮಾಡುವ ವಿಚಾರದಲ್ಲಿ ಬಿಜೆಪಿ ಹೈಕಮಾಂಡ್ ಎಚ್ಚರಿಕೆಯ ಅಸ್ತ್ರ ಪ್ರಯೋಗಿಸಿದೆ.  ಕರ್ನಾಟಕದ ರೆಸಾರ್ಟ್ ರಾಜಕೀಯ ಪರಿಣಿತರನ್ನು ಕೈ ಶಾಸಕರ ಕಾವಲಿಗೆ ನಿಲ್ಲಿಸಿದೆ.

ಕೇವಲ ಒಂದಲ್ಲ, ಎರಡಲ್ಲ ಮೂವರು ಶಾಸಕರಿಗೆ ಮಧ್ಯಪ್ರದೇಶ ಕೈ ಶಾಸಕರ ಜವಾಬ್ದಾರಿ ವಹಿಸಿದೆ, ಅದರಲ್ಲೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಕೂಡ ಒಬ್ಬರು.

ಕನಿಷ್ಠ 20 ದಿನಗಳ ಹಿಂದೆಯೇ ಮಧ್ಯಪ್ರದೇಶದಲ್ಲಿ ಕಮಲ್ ನಾಥ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಉರುಳಿಸಲು  ಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.  ಅದರಂತೆ ಮೊದಲಿಗೆ ಎಂಪಿಯ ನಾಲ್ಕು ಶಾಸಕರು ಬೆಂಗಳೂರಿಗೆ ಬಂದಿಳಿದಿದ್ದರು.

ಕಾಂಗ್ರೆಸ್ ಶಾಸಕರ ಕಾವಲಿಗೆ ಇರಿಸಲು ಗೃಹ ಸಚಿವ ಅಮಿತ್ ಶಾ ಅವರ ಮೊದಲ ಆಯ್ಕೆ ಅರವಿಂದ ಲಿಂಬಾವಳಿ ಆಗಿದ್ದರು. ಅದಾದ ನಂತರ ಡಿಸಿಎಂ ಅಶ್ವತ್ಥ ನಾರಾಯಣ ಹಾಗೂ ಸಿಟಿ ರವಿ ಅವರನ್ನು ನಿಯೋಜಿಸಲಾಗಿದೆ.

ಮಹಾದೇವಪುರ ಶಾಸಕ ಅರವಿಂದ ಲಿಂಬಾವಳಿ ಅವರನ್ನು ಫೆಬ್ರವರಿ ಎರಡನೇ ವಾರದಲ್ಲಿ ನವದೆಹಲಿಗೆ ಕರೆಸಿ ಪ್ಲಾನ್ ಬಗ್ಗೆ ತಿಳಿಸಲಾಗಿತ್ತು. ಅದಾದ ನಂತರ ಲಿಂಬಾವಳಿ, ರವಿ ಮತ್ತು ನಾರಾಯಣ್ ಅವರ ಸಹಾಯ ಪಡೆದಿದ್ದಾರೆ.

ಈ ಹಿಂದೆ ತಾವು ಮಾಡಿದ ಕೆಲಸಕ್ಕೆ ಬೇರೆಯವರು ಲಾಭ ಪಡೆದುಕೊಂಡಿದ್ದಾರೆ ಎಂದು ಅಮಿತ್ ಶಾಗೆ ಹೇಳಿದ ಲಿಂಬಾವಳಿ ಈ ಸಲ ಜವಾಬ್ದಾರಿಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದರು ಎಂದು ಬಿಜೆಪಿ ಶಾಸಸಕರೊಬ್ಬರು ತಿಳಿಸಿದ್ದಾರೆ. 

ಲಿಂಬಾವಳಿ ಅವರ ಕಾವಲಿನಲ್ಲಿದ್ದ ಇಬ್ಬರು ಶಾಸಕರು ಭೂಪಾಲ್ ಗೆ ವಾಪಸ್ ತೆರಳಿದಾಗ ಆಪರೇಷನ್ ಸಾಧ್ಯವಿಲ್ಲ ಎಂದು ಪರಿಗಣಿಸಲಾಗಿತ್ತು,  ಆದರೆ ಬಂಡಾಯ ಶಾಸಕರ ಮವೊಲಿಸಲು ಲಿಂಬಾವಳಿ ಯಶಸ್ವಿಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಶಾಸಕರು ಬೆಂಗಳೂರಿಗೆ ಬರಲು ಸಾಧ್ಯವಾಯಿತು.

ಮಾರ್ಚ್ 9 ರಂದು10 ಶಾಸಕರು  ಬೆಂಗಳೂರಿಗೆ ಆಗಮಿಸಿದ್ದರು  ಮಂಗಳವಾರ ಅವರ ಸಂಖ್ಯೆ ಒಟ್ಟು 19 ಆಗಿದೆ. ಕಳೆದ ಒಂದು ವಾರದಿಂದ ಲಿಂಬಾವಳಿ ಕಾಂಗ್ರೆಸ್ ಶಾಸಕರ ವಾಸ್ತವ್ಯ ಸೇರಿದಂತೆ ಎಲ್ಲಾ ರೀತಿಯ ಅಗತ್ಯಗಳನ್ನು ಪೂರೈಸುತ್ತಿದ್ದಾರೆ. 

ಮಧ್ಯ ಪ್ರದೇಶ ಶಾಸಕರನ್ನು ಬೆಂಗಳೂರಿಗೆ ಕರೆ ತರಲು ಲಿಂಬಾವಳಿ ತಮ್ಮ ಬಾವ ಮೈದುನ ಹಾಗೂ  ಸಿವಿ ರಾಮನ್ ನಗರ ಶಾಸಕ ಎಸ್. ರಘು ಅವರ ಸಹಾಯ ಪಡೆದಿದ್ದಾರೆ, ಅವರ ನಂಬಿಕಸ್ಥ ಸ್ನೇಹಿತರ ಹೆೊಟೇಲ್ ನಲ್ಲಿ ಶಾಸಕರ ವಾಸ್ತವ್ಯಕ್ಕೆ ಏರ್ಪಾಟು ಮಾಡಿದ್ದಾರೆ. ಮಾರ್ಚ್ 26ರ ನಂತರ ಒಳಗೆ ಶಾಸಕರು ಭೂಪಾಲ್ ಗೆ ತೆರಳಲಿದ್ದಾರೆ ಎಂದು ಹೇಳಲಾಗಿದೆ. 
 

SCROLL FOR NEXT