ರಾಜಕೀಯ

ಪ್ರಧಾನಿ ಮೋದಿಯ ಜನತಾ ಕರ್ಫ್ಯೂ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದೇನು?

Lingaraj Badiger

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜನತಾ ಕರ್ಫ್ಯೂ ಕರೆಯನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ತೀವ್ರವಾಗಿ ಟೀಕಿಸಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಮೋದಿಯವರು ಕೇವಲ ಭಾಷಣ ಮಾಡಿದ್ದಾರೆ. ಅವರ ಭಾಷಣದಲ್ಲಿ ಏನೇನೂ ಸತ್ವ ಇಲ್ಲ. ಕೊರೊನಾ ತಡೆಗೆ ಮೋದಿಯವರು ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳುವ ಬಗ್ಗೆ ಹೇಳಿಲ್ಲ. ಪರಿಹಾರ ಏನೂ ಸೂಚಿಸಿಲ್ಲ. ಕೇಂದ್ರದಿಂದ ಕೈಗೊಳ್ಳುವ ತುರ್ತು ಕ್ರಮಗಳ ಕುರಿತು ಬೆಳಕು ಚೆಲ್ಲಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಬೇರೆ ದೇಶಗಳು ಕೊರೋನಾ ತಡೆಗೆ ಸಾಕಷ್ಟು ಹಣ ಬಿಡುಗಡೆ ಮಾಡುತ್ತಿವೆ. ಆದರೆ ಕೇಂದ್ರ ಸರ್ಕಾರ ಯಾವುದೇ ಪ್ಯಾಕೇಜ್ ಕೊಟ್ಟಿಲ್ಲ. ಬರೇ ಭಾಷಣ ಮಾಡುವುದರಿಂದ ಕೊರೋನಾ ಸಮಸ್ಯೆ ಸ್ಥಗಿತಗೊಳ್ಳೂವುದಿಲ್ಲ ಎಂದು ಟೀಕಿಸಿದರು.

ಜನತಾ ಕರ್ಫ್ಯೂ ಅಂದರೇನು?
ಈಗಾಗಲೇ ಜನ ಮನೆಯಲ್ಲೇ ಇದ್ದಾರೆ. ಈ ರೀತಿಯ ಕರ್ಫ್ಯೂ ಈಗಾಗಲೇ ರಾಜ್ಯದಲ್ಲಿ ಜಾರಿ ಇದೆ. ಇದನ್ನೇ ಮೋದಿಯವರು ವಿಶೇಷವಾಗಿ ಹೇಳುವುದೇನು ಇಲ್ಲ. ಈ ಬಗ್ಗೆ ಜನರಿಗೆ ಈಗಾಗಲೇ ಗೊತ್ತಿದೆ ಎಂದು ತಿಳಿಸಿದರು.

ಮಾಸ್ಕ್ ಹಾಕಿ ಬಂದ ಸಿದ್ದರಾಮಯ್ಯ
ಸಿದ್ದರಾಮಯ್ಯ ಇಂದು ಮಾಸ್ಕ್ ಧರಿಸಿ ವಿಧಾನಸೌಧಕ್ಕೆ ಆಗಮಿಸಿದರು. ಇಂದು ಮೊದಲ ಬಾರಿಗೆ ಮಾಸ್ಕ್ ಹಾಕಿಕೊಂಡು ಸಿದ್ದರಾಮಯ್ಯ ಶಕ್ತಿಸೌಧಕ್ಕೆ ಆಗಮಿಸಿದ್ದು ವಿಶೇಷವಾಗಿತ್ತು. ಆದರೆ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದರು.

ಇನ್ನು ಇಂದೂ ಕೂಡ ಸಿದ್ದರಾಮಯ್ಯ ಅವರು ಥರ್ಮಲ್ ಸ್ಕ್ರೀನಿಂಗ್ ಮಾಡಿಸಿಕೊಂಡರು. ಈ ವೇಳೆ 93.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ. 

ನಿರ್ಭಯ ಹಂತಕರ ಗಲ್ಲಿಗೆ ಸ್ವಾಗತ 
ನಿರ್ಭಯ ಹತ್ಯಾಚಾರಿಗಳಿಗೆ ಗಲ್ಲಿಗೇರಿಸಿರುವುದನ್ನು ಸಿದ್ದರಾಮಯ್ಯ ಸ್ವಾಗತಿಸಿದರು. ಕೊನೆಗೂ ನ್ಯಾಯ ಸಿಕ್ಕಿದೆ. ಅತ್ಯಾಚಾರ ಯಾರೇ ಮಾಡಿದ್ದರೂ ಅವರಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ತಡವಾದರೂ ನಿರ್ಭಯ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ಇದನ್ನು ನಾನು ಸ್ವಾಗತ ಮಾಡುತ್ತೇನೆ ಎಂದರು.

SCROLL FOR NEXT