ರಾಜಕೀಯ

ಸ್ವಾಭಿಮಾನದ ಗೆಲುವಿಗೆ ಒಂದು ವರ್ಷ: ಸುಮಲತಾ ಕೃತಜ್ಞತೆ

Lingaraj Badiger

ಬೆಂಗಳೂರು: ಕನ್ನಡದ ಹಿರಿಯ ನಟಿ, ಸಂಸದೆ ಸುಮಲತಾ ಅಂಬರೀಶ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಾಧಿಸಿದ ಗೆಲುವಿಗೆ ಮೇ 23ಕ್ಕೆ ಒಂದು ವರ್ಷ ತುಂಬಿದೆ. ಈ ಸಂದರ್ಭದಲ್ಲಿ ಅವರು ನಾಡಿನ ಜನತೆಗೆ ಕೃತಜ್ಞತೆ ಅರ್ಪಿಸಿದ್ದಾರೆ.

ಭಾರತೀಯ ರಾಜಕೀಯ ರಂಗದಲ್ಲೇ ಸಂಚಲನ ಮೂಡಿಸಿದ್ದ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ತಾವು ನನ್ನನ್ನು ಗೆಲ್ಲಿಸಿ ಮೇ 23ಕ್ಕೆ ಒಂದು ವರ್ಷ ಪೂರೈಸಿದೆ. ಈ ಅಭೂತಪೂರ್ವ ಗೆಲುವಿಗೆ ಕಾರಣರಾದ ಎಲ್ಲರಿಗೂ ಕೃತಜ್ಞತೆ ಅರ್ಪಿಸುವೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಡ್ಯ ಲೋಕಸಭಾ ಕ್ಷೇತ್ರ ಭಾರಿ ರಣರಂಗಕ್ಕೆ ಕಾರಣವಾಗಿತ್ತು. ಆದರೂ ತಾವು ನಿರಾತಂಕವಾಗಿ ನನ್ನನ್ನು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಸಿದಿರಿ. ಮೊದಲ ಬಾರಿಗೆ ಚುನಾವಣಾ ಅಖಾಡಕ್ಕೆ ಇಳಿದಿದ್ದ ನನ್ನನ್ನು ನಿರೀಕ್ಷೆಗೂ ಮೀರಿ ಗೆಲ್ಲಿಸಿದಿರಿ. ಇದು ತಮ್ಮೆಲ್ಲರ ಗೆಲುವು ಎಂದು ಹೇಳಲು ಹೆಮ್ಮೆಯಿದೆ ಎಂದಿದ್ದಾರೆ.

ಸಂಸದೆಯಾದ ಬಳಿಕ ಮಂಡ್ಯ ಕ್ಷೇತ್ರಕ್ಕೆ ಅನೇಕ ಕೆಲಸ ಕಾರ್ಯಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಚಿಂತನೆಯಿದೆ ಎಂದು ಸುಮಲತಾ ಅಂಬರೀಷ್ ಹೇಳಿಕೊಂಡಿದ್ದಾರೆ.

ಇದೇ ವೇಳೆ ಕೊರೋನಾ ಸಂಕಷ್ಟದ ಈ ಸಂದರ್ಭದಲ್ಲಿ ಪ್ರತಿಯೊಬ್ಬರೂ ಸಾಮಾಜಿಕ ಅಂತರ ಕಾಯ್ದುಕೊಂಡು ಸೋಂಕು ಹರಡದ ರೀತಿ ಜವಾಬ್ದಾರಿಯುತವಾಗಿ ವರ್ತಿಸುವಂತೆ ಮನವಿ ಮಾಡಿದ್ದಾರೆ. 

SCROLL FOR NEXT