ರಾಜಕೀಯ

ಉಮೇಶ್ ಕತ್ತಿಯವರೊಬ್ಬರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಚಾಟಿ

Raghavendra Adiga

ಬೆಂಗಳೂರು ಉಮೇಶ್ ಕತ್ತಿಯವರ ಪ್ರಯತ್ನ ವಿಫಲವಾಗಲಿದೆ. ಎಲ್ಲರಿಗೂ ಮುಖ್ಯಮಂತ್ರಿ ಆಗಬೇಕೆಂಬ ಆಸೆಯಿದೆ. ಮುಖ್ಯಮಂತ್ರಿ ಸ್ಥಾನಕ್ಕೆ ಕತ್ತಿಯವರು ಕನಸು ಕಾಣಬೇಕಷ್ಟೇ ಎಂದು ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರು ಉಮೇಶ್ ಕತ್ತಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಬಗ್ಗೆ ತಾವು ಅಸಮಾಧಾನ ವ್ಯಕ್ತಪಡಿಸಿಲ್ಲ. ಯಾರಿಗೆ ಅಸಮಾಧಾನ ಇದೆ ಎಂಬುದನ್ನು ಅವರೇ ಹೇಳಬೇಕು. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಾವು ಬೆಂಬಲಿಸಬೇಕು. ಅವರ ಸರ್ಕಾರವನ್ನು ಉಳಿಸಬೇಕು. ಅಸ್ಥಿರತೆ ತರುವ ಮಾತು ನಾವು ಆಡಬಾರದು ಎಂದು ತಿರುಗೇಟು ನೀಡಿದರು.

ಅತೃಪ್ತರು ಬಿಜೆಪಿಗೆ ಬರದಿದ್ದರೆ ಸರ್ಕಾರ ರಚನೆಯಾಗುತ್ತಿತ್ತಾ ?. ಯಾರು ಸರ್ಕಾರದ ವಿರುದ್ಧ ಮಾತನಾಡುತ್ತಿದ್ದಾರೆ ಅವರು ಸ್ವಲ್ಪ ತಾಳ್ಮೆ ವಹಿಸಬೇಕು. ಉಮೇಶ್ ಕತ್ತಿಯವರೊಬ್ಬರಿಂದಲೇ ಸರ್ಕಾರ ಅಸ್ತಿತ್ವಕ್ಕೆ ಬಂದಿಲ್ಲ. ಸರ್ಕಾರ ಕೆಡವಲು ಯಾಕೆ ಪ್ರಯತ್ನ ಮಾಡಬೇಕು. ನಿಮ್ಮ ಬಾಯಿಯಿಂದ ಯಾಕೆ ಇಂತಹ ಮಾತು ಬರಬೇಕು ಎಂದು ಹರಿಹಾಯ್ದರು.

ಕೇಂದ್ರದ ನಾಯಕರನ್ನು ಕತ್ತಿ ಭೇಟಿ ಮಾಡಿದ್ದಾರೆ. ಕತ್ತಿಯವರು ಮಂತ್ರಿ ಆದರೆ ನಮಗೂ ಸಂತೋಷ, ಆದರೆ ಅವರು ಸ್ವಲ್ಪ ದಿನ ಕಾಯಬೇಕು,ಯಾಕೆ ಹೀಗೆ ಮಾಡುತ್ತಾರೆ ಎಂಬುದು ಅರ್ಥವಾಗುತ್ತಿಲ್ಲ. ಕೇಂದ್ರದ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಕತ್ತಿಯವರಿಗೆ ಮುಖ್ಯಮಂತ್ರಿ ಆಗುವ ಆಸೆ ಇರಬಹುದು ಎಂದು ಉಮೇಶ್ ಕತ್ತಿ ವಿರುದ್ಧ ಕಟ್ಟಾ ವಾಗ್ದಾಳಿ ನಡೆಸಿದರು.

ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೇಗೆ ಮತ್ತು ಯಾರ ಆಶೀರ್ವಾದದಿಂದ ಈ ಸ್ಥಾನಕ್ಕೆ ಏರಿದ್ದಾರೆ ಎಂಬುದನ್ನು ತಿಳಿದಿಕೊಳ್ಳಲಿ, ಅವರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪಿಲ್ಲ. ಆದರೆ ಅದಕ್ಕೆ ಕಾಯಬೇಕು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಹೇಗೆ ಬಂತು ಎಂಬುದನ್ನು ಮರೆಯಬಾರದು. ಹೊರಗಿನಿಂದ ಕೆಲವು ಶಾಸಕರು ಬಂದಿದ್ದರಿಂದ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

ಒಂದು ವರ್ಷದ ಅವಧಿಯಲ್ಲಿ ದೇಶ ಸಾಕಷ್ಟು ಏಳು ಬೀಳು ಕಂಡಿದೆ. ಕೊರೊನಾದಿಂದ ಇಡೀ ದೇಶ ತೊಂದರೆಗೊಳಗಾಗಿದೆ. ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ಕೋವಿಡ್ ಸೋಂಕನ್ನು ಯಶಸ್ವಿಯಾಗಿ ನಿಯಂತ್ರಿಸುತ್ತಿದೆ. ಇದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕಟ್ಟಾ ಸುಬ್ರಮಣ್ಯ ನಾಯ್ಡು ಹೇಳಿದರು.

SCROLL FOR NEXT