ರಾಜಕೀಯ

ಮತ್ತಷ್ಟು ಸೂಪರ್ ಪವರ್ ಆಗಲಿದೆ ಬೆಂಗಳೂರು: ಇದೇ ಮೊದಲ ಬಾರಿ ನಗರದ 8 ಶಾಸಕರಿಗೆ ಮಂತ್ರಿ ಸ್ಥಾನ?

Manjula VN

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಹೆಚ್ಚು ಪ್ರಭಾವ ಬೀರುತ್ತಿರುವ ಸಿಲಿಕಾನ್ ಸಿಟಿ ಮುಂದಿನ ದಿನಗಳಲ್ಲಿ ಮತ್ತಷ್ಟು ಸೂಪರ್ ಪವರ್ ಆಗಲಿದೆ. ನೀಡಿದ ಭರವಸೆಯಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಮುನಿರತ್ನ ಅವರನ್ನು ಸಚಿವ ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಂಡಿದ್ದೇ ಆದರೆ, ಇದೇ ಮೊದಲ ರಾಜ್ಯ ಸಚಿವ ಸಂಪುಟದಲ್ಲಿ ಬೆಂಗಳೂರಿನಿಂದ 8 ಮಂದಿ ಮಂತ್ರಿಗಳು ಸ್ಥಾನ ಪಡೆದುಕೊಂಡಂತಾಗುತ್ತದೆ. 

28 ಮಂದಿ ಬಿಜೆಪಿ ಶಾಸಕರು ಪೈಕಿ ಬೆಂಗಳೂರು ನಗರ ವೊಂದರಲ್ಲಿಯೇ 15 ಮಂದಿ ಶಾಸಕರಿದ್ದಾರೆ. 2008ರಲ್ಲಿ 17 ಮಂದಿ ಇದ್ದ ಶಾಸಕರ ಸಂಖ್ಯೆ 2013ರಲ್ಲಿ 12ಕ್ಕೆ ಇಳಿದಿತ್ತು. 2018ರಲ್ಲಿ 11ಕ್ಕೆ ತಲುಪಿತ್ತು. ಇದಾದ ಬಳಿಕ ಕಾಂಗ್ರೆಸ್ ನಲ್ಲಿದ್ದ ಕೆಲ ಶಾಸಕರು ಬಿಜೆಪಿಗೆ ಸೇರ್ಪಡೆಗೊಂಡಿದ್ದು. ಬಳಿಕ 2019ರಲ್ಲಿ ಉಪಚುನಾವಣೆ ನಡೆದು ಬಿಜೆಪಿಗೆ ಮತ್ತೆ 3 ಸ್ಥಾನಗಳು ಸೇರ್ಪಡೆಗೊಂಡವು. ಇದರಂತೆ ರಾಜರಾಜೇಶ್ವರಿ ನಗರದಲ್ಲಿ ಇತ್ತೀಚೆಗಷ್ಟೇ ನಡೆದ ಉಪಚುನಾವಣೆಯಲ್ಲಿ ಮುನಿರತ್ನ ಅವರೂ ಕೂಡ ಗೆಲುವು ಸಾಧಿಸಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ಬಿಜೆಪಿ ಶಾಸಕರ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. 

ಈಗಾಗಲೇ ರಾಜ್ಯ ಸಚಿವ ಸಂಪುಟದಲ್ಲಿ 7 ಮಂದಿ ಬೆಂಗಳೂರು ನಗರದ ಶಾಸಕರಿದ್ದಾರೆ. ಕಳೆದ ವರ್ಷ ನಡೆದ ಉಪಚುನಾವಣೆ ಬಳಿಕ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಹಾಗೂ ಗೋಪಾಲಯ್ಯ ಅವರಿಗೆ ಸಚಿವ ಸ್ಥಾನ ನೀಡಲಾಗಿತ್ತು. ಪ್ರಾಮಾಣಿಕ ನಾಯಕರಾದ ಅಶ್ವತ್ಥ್ ನಾರಾಯಣ್, ಸುರೇಶ್ ಕುಮಾರ್, ವಿ ಸೋಮಣ್ಣ ಹಾಗೂ ಆರ್.ಅಶೋಕ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ. ನಗರದಲ್ಲಿ 8 ಮಂದಿ ಶಾಸಕರಿಗೆ ಸಚಿವ ಸ್ಥಾನ ನೀಡಿದ್ದರೂ ಕೂಡ ಮುಖ್ಯಮಂತ್ರಿಗಳು ಬೆಂಗಳೂರು ಅಭಿವೃದ್ಧಿ ಖಾತೆಯನ್ನು ತಮ್ಮೊಂದಿಗೆ ಇಟ್ಟುಕೊಳ್ಳುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ. 

ಈಗಾಗಲೇ ಸಚಿವ ಸ್ಥಾನದಲ್ಲಿರುವ ನಾಲ್ವರೊಂದಿಗೆ ಮತ್ತು ಮತ್ತೆ ನಾಲ್ವರನ್ನು ಸಂಪುಟಕ್ಕೆ ಸೇರ್ಪಡೆಗೊಳಿಸಿಕೊಳ್ಳಲು ಯಡಿಯೂರಪ್ಪ ಅವರು ನಿರ್ಧರಿಸಿದ್ದು, ಇದು ಪಕ್ಷದಲ್ಲಿ ಕೆಲ ಮನಸ್ತಾಪಗಳಿಗೆ ದಾರಿ ಮಾಡಿಕೊಡಬಹುದು ಎಂದು ಬಿಜೆಪಿ ಮೂಲಗಳು ಮಾಹಿತಿ ನೀಡಿವೆ. 

2013 ಮತ್ತು 2018 ರಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ ಬೆಂಗಳೂರಿನಿಂದ 5-6 ಮಂದಿಗೆ ಸಚಿವ ಸ್ಥಾನ ನೀಡಿದ್ದರು. ಆದರೆ ಎಲ್ಲರೂ ಒಂದೇ ಸಮಯದಲ್ಲಿ ಇರಲಿಲ್ಲ. ತಮ್ಮ ಸಂಪುಟದಲ್ಲಿ ರಾಮಲಿಂಗರೆಡ್ಡಿ, ಕೆ.ಜೆ.ಜಾರ್ಜ್, ರೋಶನ್ ಬೇಗ್, ಕೃಷ್ಣ ಬೈರೆಗೌಡ, ದಿನೇಶ್ ಗುಂಡುರಾವ್, ಎಂ.ಕೃಷ್ಣಪ್ಪ ಮತ್ತು ಎಂ ಆರ್ ಸೀತಾರಂ ಅವರಿಗೆ ಸ್ಥಾನ ನೀಡಿದ್ದರು. 

ಬೆಂಗಳೂರು ನಗರದಲ್ಲಿನ 8 ಮಂದಿ ಶಾಸಕರಿಗೇ ಸಚಿವ ಸ್ಥಾನ ನೀಡುವುದರಿಂದ ಉತ್ತರ ಕರ್ನಾಟಕದ ನಾಯಕರಲ್ಲಿ ಅಸಮಾಧಾನ ಮೂಡಬಹುದು ಎಂದು ಹೇಳಲಾಗುತ್ತಿದೆ. 

ಈ ಹಿಂದೆ ನೀಡಿದ್ದ ಭರವಸೆಗಳಿಂದಾಗಿ ಕಾಂಗ್ರೆಸ್ ನಿಂದ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿಯವರು ಹೇಳಿದ್ದಾರೆ.

ಬಿಜೆಪಿಯ ಹಿರಿಯ ಮುಖಂಡರೊಬ್ಬರು ಮಾತನಾಡಿ, ರಾಜ್ಯ ರಾಜಕೀಯ ಪರಿಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ಇದು ಒಂದೇ ಪಕ್ಷದ ಸರ್ಕಾರದಂತೆ ತೋರುತ್ತದೆಯಾದರೂ, ವಾಸ್ತವವಾಗಿ ಪಕ್ಷದಲ್ಲಿ ಅರ್ಧದಷ್ಟು ಜನರು ವಿರೋಧ ಪಕ್ಷದ ಬಂಡಾಯ ನಾಯಕರಿದ್ದಾರೆಂದು ತಿಳಿಸಿದ್ದಾರೆ. 

SCROLL FOR NEXT