ರಾಜಕೀಯ

ಶಿರಾ, ಆರ್.ಆರ್.ನಗರ ಎರಡೂ ಕ್ಷೇತ್ರದಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ: ನಳಿನ್ ಕುಮಾರ್ ಕಟೀಲ್

Manjula VN

ಬೆಂಗಳೂರು: ಶಿರಾ ಹಾಗೂ ರಾಜರಾಜೇಶ್ವರಿ ನಗರ ಎರಡೂ ಕ್ಷೇತ್ರಗಳಲ್ಲಿಯೂ ಬಿಜೆಪಿ ಗೆಲವು ಸಾಧಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಹೇಳಿದ್ದಾರೆ. 

ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ನಳಿನ್ ಕುಮಾರ್ ಕಟೀಲ್ ಅವರು ಉಪ ಚುನಾವಣೆ ಸಿದ್ಧತೆಗಳ ಕುರಿತು ಮಾತನಾಡಿದ್ದಾರೆ. 

ಈ ಉಪಚುನಾವಣೆ ಬಿಜೆಪಿಗೆ ಎಷ್ಟು ಮುಖ್ಯ? ಚುನಾವಣಾ ಫಲಿತಾಂಶ ಸರ್ಕಾರದ ಮೇಲೆ ಪರಿಣಾಮ ಬೀರಲಿದೆಯೇ? 
ರಾಜಕೀಯ ಪಕ್ಷವಾಗಿ ಎಲ್ಲಾ ಚುನಾವಣೆಗಳೂ ನಮಗೆ ಮುಖ್ಯವೇ. ನಮ್ಮ ಪಕ್ಷ ಅಧಿಕಾರದಲ್ಲಿದ್ದು, ಎಲ್ಲಾ ಕ್ಷೇತ್ರದಲ್ಲಿಯೂ ನಾವು ಗೆಲುವು ಸಾಧಿಸಲೇಬೇಕಿದೆ. ಎರಡು ವಿಧಾನಸಬಾ ಕ್ಷೇತ್ರಗಳಲ್ಲಿಯೂ ಗೆಲ್ಲಲು ಪರಿಶ್ರಮಪಡಲಾಗುತ್ತದೆ. 

ಜನರಿಂದ ಮತ ಪಡೆಯಲು ಬಿಜೆಪಿ ಯಾವೆಲ್ಲಾ ಸಮಸ್ಯೆಗಳನ್ನು ಎದುರಿಸಲಿದೆ? 
ಪ್ರತಿಪಕ್ಷಗಳು ಭೂ ಸುಧಾರಣೆ ಮತ್ತು ಎಪಿಎಂಸಿ ಕಾಯ್ದೆಗೆ ತರಲಾಗಿರುವ ತಿದ್ದುಪಡಿಗಳನ್ನು ರೈತ ವಿರೋಧಿ ಎಂದು ಹೇಳುತ್ತಿವೆ. ಇದನ್ನೇ ದೊಡ್ಡ ಸಮಸ್ಯೆಯಾಗಿ ಮಾಡುತ್ತಿವೆ. ರೈತರ ಹಿತದೃಷ್ಟಿಯಿಂದ ಎಪಿಎಂಸಿ ಮತ್ತು ಇತರೆ ಕಾಯ್ದೆಗಳಿಗೆ ತರಲಾಗಿರುವ ತಿದ್ದುಪಡಿಗಳನ್ನುತರಲಾಗಿದೆ. ರೈತರು ಬಿಜೆಪಿ ಜೊತೆಗಿದ್ದಾರೆ. ಅಭಿವೃದ್ಧಿ ಎಂಬ ಮಂತ್ರದೊಂದಿಗೆ ನಾವು ಜನರ ಬಳಿ ಹೋಗುತ್ತೇವೆ. ಸರ್ಕಾರ ಕೈಗೆತ್ತಿಕೊಂಡಿರುವ ಅಭಿವೃದ್ಧಿಗಳ ಬಗ್ಗೆ ನಾವು ಜನರೊಂದಿಗೆ ಮಾತನಾಡುತ್ತೇವೆ. ಕೇಂದ್ರದಲ್ಲಿ ಮೋದಿ ಸರ್ಕಾರ ಹಾಗೂ ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಮಾಡಿರುವ ಅಭಿವೃದ್ಧಿ ಕೆಲಸವನ್ನು ನೋಡುವಂತೆ ಮನವಿ ಮಾಡಿಕೊಳ್ಳುತ್ತೇವೆ. 

ಕೆಲ ತಿಂಗಳುಗಳಿಂದ ಸರ್ಕಾರ ಕೈಗೊಂಡಿರುವ ನೀತಿಕ್ರಮಗಳು ಪ್ರಮುಖವಾಗಿ ಕೃಷಿ ಮಸೂದೆ, ಭೂಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆಗಳಿಂದ ಜನಾಭಿಪ್ರಾಯ ಸಂಗ್ರಹವಾಗುತ್ತಿದೆಯೇ? 
ಖಂಡಿತವಾಗಿಯೂ ಇಲ್ಲ. ರೈತರಿಗೆ ಸಹಾಯಕವಾಗುವಂತಹ ಕಾಯ್ದೆ ಕುರಿತು ಕಾಂಗ್ರೆಸ್ ತಪ್ಪು ಪ್ರಚಾರ ಮಾಡುತ್ತಿದೆ. ಈ ಬಾರಿಯ ಚುನಾವಣೆ ವೇಳೆ ಇದೇ ಅವರಿಗೆ ಮುಳುವಾಗಲಿದೆ. ಕಾಯ್ದೆಗಳಿಗೆ ತರಲಾಗಿರುವ ತಿದ್ದುಪಡಿಯನ್ನು ಜನರೇ ಸ್ವಾಗತಿಸಿದ್ದಾರೆ. 

ಶಿರಾ ವಿಧಾನಸಭಾ ಕ್ಷೇತ್ರದ ಮೇಲೆ ಹೆಚ್ಚಿನ ಗಮನವೇಕೆ? 
ಈ ಕ್ಷೇತ್ರದಲ್ಲಿ ಬಿಜೆಪಿ ಈ ಹಿಂದೆ ಹೆಚ್ಚಿನ ಗಮನ ಹರಿಸಿರಲಿಲ್ಲ. ಇದು ಉಪಚುನಾವಣೆಯಾಗಿದ್ದು, ನಾವು ಗೆಲ್ಲಲೇಬೇಕಿದೆ. ಹೀಗಾಗಿಯೇ ನಾವು ಈ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಹರಿಸುತ್ತಿದ್ದೇವೆ. 

ಅಭ್ಯರ್ಥಿ ಘೋಷಣೆಯಲ್ಲಿ ಅನುಸರಿಸಲಾಗುತ್ತಿರುವ ವಿಳಂಬ ನೀತಿ ಬಿಜೆಪಿಯಲ್ಲಿ ಗೊಂದಲವಿದೆ ಎಂದು ಕಾಂಗ್ರೆಸ್ ಹೇಳುತ್ತಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯ? 
ಬಿಜೆಪಿಯಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಪಕ್ಷದಲ್ಲಿ ನಾವು ನಮ್ಮದೇ ಆದ ವ್ಯವಸ್ಥೆಯನ್ನು ಹೊಂದಿದ್ದೇವೆ. ಈ ಬಗ್ಗೆ ನಾವು ಕೆಲಸ ಮಾಡುತ್ತಿದ್ದೇವೆ. ಈಗಾಗಲೇ ನಾವು ಚುನಾವಣೆಗೆ ಸಿದ್ಧತೆಗಳನ್ನು ನಡೆಸಿದ್ದೇವೆ. ಕಾಂಗ್ರೆಸ್ ಪಕ್ಷ ಅಭ್ಯರ್ಥಿಯನ್ನು ಮೊದಲೇ ಘೋಷಣೆ ಮಾಡಿರಬಹುದು. ಆದರೆ, ನಾವು ಬುಡದಿಂದ ಕಾರ್ಯನಿರ್ವಹಿಸುತ್ತಿದ್ದೇವೆ. 

ನಾಯಕತ್ವ ಬದಲಾವಣೆ ಕುರಿತು ಊಹಾಪೋಹಗಳೇಕೆ ಏಳುತ್ತಿವೆ?
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಪ್ರಶ್ನೆಯೇ ಇಲ್ಲ. ಪಕ್ಷದಲ್ಲಿ ಈ ಬಗ್ಗೆ ಯಾವುದೇ ರೀತಿಯ ಚರ್ಚೆಗಳೂ ನಡೆದಿಲ್ಲ ಎದಿದ್ದಾರೆ. 

SCROLL FOR NEXT