ರಾಜಕೀಯ

ಡ್ರಗ್ಸ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ: ವಿಪಕ್ಷ ನಾಯಕ ಸಿದ್ದರಾಮಯ್ಯ

Srinivasamurthy VN

ಬೆಂಗಳೂರು: ಡ್ರಗ್ಸ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸುವುದು ಸೂಕ್ತ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಕುಮಾರಕೃಪಾದಲ್ಲಿಂದು ತಮ್ಮನ್ನು ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದ ಅವರು, ಡ್ರಗ್ಸ್ ಹಗರಣದಲ್ಲಿ ಪೊಲೀಸರು ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದು, ಪ್ರಮುಖ ಆರೋಪಿಗಳನ್ನು ಬಂಧಿಸಿದಂತೆ ಸರ್ಕಾರ ಒತ್ತಡ ಹೇರುತ್ತಿದೆ. ಆದ್ದರಿಂದ ಇಡೀ ಹಗರಣವನ್ನು ನ್ಯಾಯಾಂಗ  ತನಿಖೆಗೆ ವಹಿಸುವುದು ಸೂಕ್ತ ಎಂದು ತಿಳಿಸಿದ್ದಾರೆ.

'ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳ ಬಂಧನ ಆಗಿಲ್ಲ. ಈ ಕುರಿತಾಗಿ ಪೊಲೀಸರಲ್ಲಿ ವಿಚಾರಿಸಿದ್ದೇನೆ. ಕೆಲವರನ್ನು ಆರೆಸ್ಟ್ ಮಾಡಿಲ್ಲ ಯಾಕೆ ಎಂದು ಕೇಳಿದೆ. ಅವರು ತಲೆ ಮರೆಸಿಕೊಂಡಿದ್ದಾರೆ ಎಂದು ಹೇಳಿದರು. ಇದನ್ನೆಲ್ಲಾ ಗಮನಿಸಿದರೆ ಪೊಲೀಸರ ಮೇಲೆ ಸರ್ಕಾರ ಒತ್ತಡನೂ ಇರಬಹುದು. ಇಲ್ಲ  ಎಂದು ಹೇಳುವುದಿಲ್ಲ ಎಂದು ಅನುಮಾನ ವ್ಯಕ್ತಪಡಿಸಿದರು. ಪ್ರಕರಣದಲ್ಲಿ ಪೊಲೀಸರ ವಿಫಲತೆ ಅನ್ನುವುದಕ್ಕಿಂತ ಪೊಲೀಸರು ಸರ್ಕಾರದ ಕೈಗೊಂಬೆ ತರ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಪೊಲೀಸರಲ್ಲಿ ನಂಬಿಕೆ ಇಲ್ಲ,. ಸರ್ಕಾರದ ಅಧಿಕಾರ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.  ಪ್ರಕರಣದ ಸತ್ಯಾಸತ್ಯತೆ ಹೊರಬರುವ ನಿಟ್ಟಿನಲ್ಲಿ ಸಿಟ್ಟಿಂಗ್ ಜಡ್ಜ್ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಲಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಹುಟ್ಟುಹಬ್ಬ.ಅವರಿಗೆ ನಾನು ಶುಭಾಶಯ ಕೋರುತ್ತೇನೆ. ಹುಟ್ಟುಹಬ್ಬಕ್ಕೆ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಪತ್ರಿಕೆಗಳಿಗೆ ಪುಟಗಟ್ಟಲೆ ಜಾಹಿರಾತು ನೀಡಲಾಗಿದೆ. ಮೋದಿಯವರು ಭಾರಿ ಸಾಧನೆ ಮಾಡಿದ್ದಾರೆ ಎಂದು ಜಾಹಿರಾತಿನಲ್ಲಿ ಬಿಂಬಿಸಲಾಗಿದೆ ಎಂದು ಅವರು  ಲೇವಡಿ ಮಾಡಿದರು.

ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧವೂ ಕಿಡಿಕಾರಿದ ಸಿದ್ದರಾಮಯ್ಯ ಅವರು, ಸರ್ಕಾರಿ ವೈದ್ಯಾಧಿಕಾರಿಗಳ ಜೊತೆಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪುತ್ರ ಸಭೆಯ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಬಿವೈ ವಿಜಯೇಂದ್ರ ವೈದ್ಯಾಧಿಕಾರಿಗಳ ಜೊತೆಗೆ ಹೇಗೆ ಸಭೆ ನಡೆಸುತ್ತಾರೆ. ಬಿಜೆಪಿ ಪಕ್ಷದಲ್ಲಿ ಬೇರೆ ಉಪಾಧ್ಯಕ್ಷರು ಇಲ್ವಾ? ಅವರಿಗೆ ಸಭೆ ನಡೆಸುವ ಅಧಿಕಾರ ಇದ್ಯಾ ಎಂದು ಪ್ರಶ್ನಿಸಿದರು. ಆಯಾ ಇಲಾಖೆಗೆ ಸೇರಿದ ಸಚಿವರು ಸಭೆ ನಡೆಸಲು ನಮ್ಮ ಕೈಯಲ್ಲಿ ಸಾಧ್ಯವಿಲ್ಲ ನೀವೇ ಮಾಡಿ ಎಂದು ಹೇಳಿದ್ದಾರಾ ಎಂದು  ಪ್ರಶ್ನಿಸಿದರು.

SCROLL FOR NEXT