ರಾಜಕೀಯ

ಬಸನಗೌಡ ಪಾಟೀಲ್ ಯತ್ನಾಳ್, ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳುವ ತರಾತುರಿಯಲ್ಲಿ ಹೈಕಮಾಂಡ್ ಇಲ್ಲ: ಡಿ.ವಿ. ಸದಾನಂದ ಗೌಡ 

Sumana Upadhyaya

ಬಸವಕಲ್ಯಾಣ(ಬೀದರ್): ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ ಕ್ರಮ ಕೈಗೊಳ್ಳಲು ಪಕ್ಷದ ಹೈಕಮಾಂಡ್ ತರಾತುರಿಯಲ್ಲಿ ಇಲ್ಲ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಡಿ ವಿ ಸದಾನಂದ ಗೌಡ ಹೇಳಿದ್ದಾರೆ.

ನಿನ್ನೆ ಬಸವಕಲ್ಯಾಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಪರವಾಗಿ ಪ್ರಚಾರ ನಡೆಸಿದ ಸದಾನಂದ ಗೌಡ ಅವರು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿನಿಧಿ ಜೊತೆಗೆ ಮಾತನಾಡಿ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಶಾಸಕ ಯತ್ನಾಳ್ ಪದೇ ಪದೇ ವಾಗ್ದಾಳಿ ಏಕೆ ನಡೆಸುತ್ತಿದ್ದಾರೆ ಎಂದು ಹೈಕಮಾಂಡ್ ತಿಳಿದುಕೊಳ್ಳಲಿದೆ. ಈಶ್ವರಪ್ಪನವರು ರಾಜ್ಯಪಾಲರಿಗೆ ಪತ್ರ ಬರೆದದ್ದರ ಹಿಂದಿನ ಉದ್ದೇಶವೇನು ಎಂದು ಸಹ ಪರಾಮರ್ಶಿಸಲಿದೆ ಎಂದಿದ್ದಾರೆ.

ಸದಾನಂದ ಗೌಡರ ಹೇಳಿಕೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರ ಹೇಳಿಕೆಗೆ ವಿರುದ್ಧವಾಗಿದೆ. ಕೇಂದ್ರ ನಾಯಕರು ಖಂಡಿತವಾಗಿಯೂ ಯತ್ನಾಳ್ ವಿರುದ್ಧ ಕ್ರಮ ಕೈಗೊಳ್ಳುತ್ತದೆ ಎಂದಿದ್ದರು.

ಪಕ್ಷದಲ್ಲಿ ಶಿಸ್ತು ಕಾಪಾಡುವುದು ಮಾತ್ರವಲ್ಲದೆ, ನಾಯಕರು 2023ರ ಸಾರ್ವತ್ರಿಕ ಚುನಾವಣೆಯಲ್ಲಿ ಗೆಲ್ಲಲು ಗಮನ ಹರಿಸುತ್ತಿದ್ದಾರೆ. ನಾಯಕರ ಮಧ್ಯೆ ಹೊಂದಾಣಿಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಸದಾನಂದ ಗೌಡ ಹೇಳಿದ್ದಾರೆ. ಕೇಂದ್ರ ನಾಯಕರು ಪ್ರಸ್ತಾಪ ಮುಂದಿಟ್ಟರೆ ನೀವು ಕೂಡ ಮುಂದಿನ ಬಾರಿ ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದೀರಾ ಎಂದು ಕೇಳಿದಾಗ, ಋಣಾತ್ಮಕ ರೀತಿಯಲ್ಲಿ ಉತ್ತರಿಸಿದರು.

ಬೆಳಗಾವಿ ಲೋಕಸಭಾ ಕ್ಷೇತ್ರ, ಮಸ್ಕಿ ಹಾಗೂ ಬಸವಕಲ್ಯಾಣ ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಪ್ರಚಂಡ ಜಯಸಾಧಿಸಲಿದ್ದಾರೆ. ಮೋದಿ ಮತ್ತು ಯಡಿಯೂರಪ್ಪ ಸರ್ಕಾರದ ಮೇಲೆ ಜನರಿಗೆ ನಂಬಿಕೆಯಿದೆ ಎಂದಿದ್ದಾರೆ. 

SCROLL FOR NEXT