ಮೈಸೂರು: ಮೈಸೂರು– ಬೆಂಗಳೂರು ದಶಪಥ ಯೋಜನೆ ನಿಮ್ಮದಲ್ಲ. ಯಾವಾಗಲೋ ಜಾರಿಯಾದ ಯೋಜನೆಯನ್ನು ನನ್ನದು ಎಂದರೆ ಹೇಗೆ? ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ತಮ್ಮದೇ ಪಕ್ಷದ ಸಂಸದ ಪ್ರತಾಪ ಸಿಂಹ ಅವರಿಗೆ ಚಾಟಿ ಬೀಸಿದ್ದಾರೆ.
ಮೈಸೂರಿನಲ್ಲಿ ಮಾತಮಾಡಿದ ಅವರು ನಾನು ಸಂಸದನಾಗಿದ್ದ ಅವಧಿಯಲ್ಲಿ ಈ ಯೋಜನೆಗೆ ಡಿಪಿಆರ್ ತಯಾರಾಗಿತ್ತು. ಆ ವೇಳೆ ನಾನು ಹಾಗೂ ಸಂಸದರಾಗಿದ್ದ ಆರ್.ಧ್ರುವನಾರಾಯಣ, ರಮ್ಯಾ ಮತ್ತು ಡಿ.ಕೆ.ಸುರೇಶ್ ಇದಕ್ಕೆ ಸಂಬಂಧಿಸಿದ್ದ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಅಂದು ತಯಾರಾಗಿದ್ದ ಯೋಜನೆ ಇಂದು ಕಾರ್ಯರೂಪಕ್ಕೆ ಬಂದಿದೆ. ನೀನು ಈಗ ಬಂದು ಎಲ್ಲವನ್ನೂ ನಾನೇ ಮಾಡಿದ್ದು ಅಂದರೆ ಹೇಗೆ’ ಎಂದು ಪ್ರಶ್ನಿಸಿದರು.
ಹಿಂದಿನ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರ ಶ್ರಮವೂ ಇದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಪಾತ್ರವೂ ಇದೆ. 2013ರಲ್ಲೇ ಈ ಯೋಜನೆ ಚಾಲ್ತಿಗೆ ಬಂದಿತ್ತು. ಬೇರೆಯವರು ಹೆತ್ತು, ಹೊತ್ತು ಬೆಳೆಸಿದ ಮಗುವೊಂದು ಶಾಲೆಗೆ ಹೋಗುವಾಗ, ಆ ಮಗು ನನ್ನದು ಎಂದರೆ ಹೇಗೆ? ಎಂದು ಲೇವಡಿ ಮಾಡಿದರು.
ದಶಪಥ ರಸ್ತೆ ವಿಚಾರದಲ್ಲಿ ಮಂಡ್ಯದ ಸಂಸದೆ ಸುಮಲತಾ ಹೇಳಿದ್ದು ಸರಿಯಾಗಿಯೇ ಇದೆ. 10–12 ವರ್ಷಗಳಷ್ಟು ಹಿಂದಿನ ಯೋಜನೆ ಇದಾಗಿದ್ದು, ನಾನೇ ಮಾಡಿದ್ದೇನೆ ಎಂದು ಎಷ್ಟು ದಿನ ಸುಳ್ಳು ಹೇಳುತ್ತೀರಾ? ನೀವು ಏನಾದರೂ ಹೊಸ ಯೋಜನೆ ತಂದಿದ್ದರೆ ಜನರಿಗೆ ತಿಳಿಸಿ ಎಂದರು.