ತುಮಕೂರು: ಡಿ.10ರಂದು ನಡೆಯಲಿರುವ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿರುವ ಜೆಡಿಎಸ್ ಅಭ್ಯರ್ಥಿ, ಕೆಎಎಸ್ ಮಾಜಿ ಅಧಿಕಾರಿ ಅನಿಲ್ ಕುಮಾರ್ ಆರ್ ಪರ ಪ್ರಚಾರ ಮಾಜಿ ಪ್ರಧಾನಮಂತ್ರಿ ಎಚ್.ಡಿ.ದೇವೇಗೌಡ ಅವರು ಶುಕ್ರವಾರ ಪ್ರಚಾರ ಆರಂಭಿಸಿದ್ದಾರೆ.
ಗುಬ್ಬಿ ಪಟ್ಟಣ ಹೊರ ವಲಯದ ಹೇರೂರು ಗ್ರಾಮದ ಶ್ರೀಬಾಲಾಜಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಆಯೋಜಿಸಿದ್ದ ವಿಧಾನಪರಿಷತ್ ಚುನಾವಣಾ ಪ್ರಚಾರ ಸಬೆಯಲ್ಲಿ ಮಾತನಾಡಿ ಅಹಿಂದ ಸಮುದಾಯಕ್ಕೆ ರಾಜಕೀಯ ಶಕ್ತಿ ತುಂಬಿದ ಜೆಡಿಎಸ್ ಎಂದಿಗೂ ಶಕ್ತಿ ಕುಂದಲ್ಲ. ರಾಜ್ಯದಲ್ಲಿ ಮತ್ತೆ ಹೋರಾಟದ ಮೂಲಕ ಪಕ್ಷದ ಸದೃಢಗೊಳಿಸುತ್ತೇನೆಂದು ಹೇಳಿದರು.
ಇದೇ ವೇಳೆ ಒಕ್ಕಲಿಗ ಸಮುದಾಯವನ್ನು ಉಪಪಂಗಡಗಳ ಹೆಸರಿನಲ್ಲಿ ವಿಭಜಿಸಬೇಡಿ ಎಂದು ಮನವಿ ಮಾಡಿದ ಅವರು, ಪಟ್ಟಭದ್ರ ಹಿತಾಸಕ್ತಿಗಳು ಅದರಿಂದ ಲಾಭ ಗಳಿಸಲು ಯತ್ನಿಸುತ್ತಿವೆ. ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಹೊರತಾಗಿ ಎಲ್ಲಾ ಒಕ್ಕಲಿಗ ಪಂಗಡದವರೂ ನಾಯಕರಾಗಲು ನಾನು ಸಹಾಯ ಮಾಡಿದ್ದೇನೆ ಎಂದು ಅವರು ಕೆಲವ ನಾಯಕರ ಹೆಸರುಗಳನ್ನು ಹೇಳಿದರು.
ಇದನ್ನೂ ಓದಿ: ಬಿಜೆಪಿ-ಜೆಡಿಎಸ್ ಮೈತ್ರಿ ಕುರಿತು ಬಿಎಸ್ವೈ, ಹೆಚ್ಡಿಕೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ: ಸಿಎಂ ಬೊಮ್ಮಾಯಿ
ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಹಿಂದುಳಿದ ವರ್ಗದ ಮುಖಂಡರಾದ ಆರ್.ಎಲ್.ಜಾಲಪ್ಪ ಹಾಗೂ ತುಮಕೂರಿನಲ್ಲಿ ದಿವಂಗತ ಸಿ.ಎನ್.ಭಾಸ್ಕರಪ್ಪ ಅವರಿಗೆ ಸಹಾಯ ಮಾಡಿದರೂ ಪ್ರತಿಸ್ಪರ್ಧಿಗಳಿಂದ ಜಾತಿವಾದಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ದೇವೇಗೌಡರಿಗೆ 89 ವರ್ಷವೆಂದು ಯೋಚಿಸಬೇಡಿ. ಇಡೀ ರಾಜ್ಯದಲ್ಲಿ ಹೋರಾಟ ಮಾಡಿ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುತ್ತೇನೆ. ಪಕ್ಷದ ಕಾರ್ಯಕರ್ತರೇ ನನ್ನ ಶಕ್ತಿ. ಪಕ್ಷವನ್ನು ಅವಹೇಳನ ಮಾಡುವವರಿಗೆ ತಕ್ಕ ಪಾಠ ಕಲಿಸಬೇಕು. ಕೈ ಮುಗಿದು ಕೇಳಿಕೊಳ್ಳುತ್ತೇನೆ ಪಕ್ಷದ ಅಭ್ಯರ್ಥಿ ಅನಿಲ್ ಅವರನ್ನು ಗೆಲ್ಲಿಸಿ, ಪಕ್ಷವನ್ನು ಉಳಿಸಿ. ನಮ್ಮ ಸಮಾಜನ್ನು ಒಡೆದು ನಮ್ಮ ಶಕ್ತಿ ನಾಶ ಮಾಡಲು ಹೊರಟಿದ್ದಾರೆ. ನನ್ನ ಸಮಾಜ ಒಡೆಯುತ್ತಿರುವುದಕ್ಕೆ ನೋವಿದೆ. ನಾನು ಜೀವಂತವಾಗಿರುವವರೆಗೂ ಅದು ಆಗಬಾರದು ಎಂದು ತಿಳಿಸಿದರು.