ಬೆಳಗಾವಿ: ವಿಧಾನ ಪರಿಷತ್ ಚುನಾವಣೆಯಲ್ಲಿ ಮೊದಲನೇ ಪ್ರಾಶಸ್ತ್ಯ ಮತಗಳಲ್ಲಿಯೇ ಬಿಜೆಪಿ 15 ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಹೇಳಿಕೊಂಡು ಬಂದಿದ್ದೆ. 12 ಕಡೆ ಬಿಜೆಪಿ ಗೆದ್ದಿದೆ. ನಿಶ್ಚಿತವಾಗಿ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಮತದಾರರನ್ನು ಭೇಟಿ ಮಾಡಿ ಬಂದ ಪರಿಣಾಮ ನಮ್ಮೆಲ್ಲಾ ಮುಖಂಡರ ಓಡಾಟ, ಪರಿಶ್ರಮದಿಂದ ಬಿಜೆಪಿ ಮುನ್ನಡೆ ಸಾಧಿಸಲಿದೆ ಎಂದು ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಬೆಳಗಾವಿಯಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು ವಿಧಾನ ಪರಿಷತ್ ನಲ್ಲಿ ಬಿಜೆಪಿ ಸ್ವಂತ ಬಲದಿಂದ ಮುನ್ನಡೆ ಸಾಧಿಸಿ ಕಾರ್ಯಕಲಾಪಕ್ಕೆ ಅನುಕೂಲವಾಗಲಿದೆ. ನನ್ನ ಪ್ರಕಾರ 15 ಸೀಟು ಗೆಲ್ಲುವ ವಿಶ್ವಾಸವಿದೆ ಎಂದರು.
ಇದು ಗ್ರಾಮೀಣ ಪ್ರದೇಶದಲ್ಲಿರುವ ಚುನಾಯಿತ ಪ್ರತಿನಿಧಿಗಳು, ಪ್ರಮುಖರು ಮತದಾನ ಮಾಡುವ ಚುನಾವಣೆ. ರಾಮರಾಜ್ಯ ಕಲ್ಪನೆ ಹಿನ್ನೆಲೆಯಲ್ಲಿ ಗ್ರಾಮೀಣ ಪ್ರದೇಶದ ಮತದಾರರ ಒಲವು ಬಿಜೆಪಿ, ಪ್ರಧಾನಿ ಮೋದಿ ಹಾಗೂ ರಾಜ್ಯದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿಯವರ ಮೇಲೆ ಇದೆ. ಇದರ ಪ್ರಭಾವ ಮುಂದಿನ 2023ರ ವಿಧಾನಸಭೆ ಚುನಾವಣೆಯಲ್ಲಿ 140 ಕ್ಷೇತ್ರ ಗೆದ್ದೇ ಗೆಲ್ಲಬೇಕು ಎಂಬ ಗುರಿಯನ್ನು ಈಡೇರಿಸಲು ಮುಂದಿನ ತಿಂಗಳಿನಿಂದ ರಾಜ್ಯದಲ್ಲಿ ಪ್ರವಾಸ ಆರಂಭಿಸುತ್ತೇನೆ ಎಂದರು.
ಮಂಡ್ಯ, ಹಾಸನ ಹೀಗೆ ಮೂರ್ನಾಲ್ಕು ಜಿಲ್ಲೆಗಳಲ್ಲಿ ಬಿಜೆಪಿಯ ಸಂಘಟನೆ ಹೆಚ್ಚಾಗಬೇಕಿದೆ, ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತೇವೆ ಎಂದರು.