ರಾಜಕೀಯ

ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸರ್ಕಾರ ಉತ್ತಮ ಸಾಧನೆ ಮಾಡಿದೆ: ಕೆ.ಎಸ್.ಈಶ್ವರಪ್ಪ

Manjula VN

ಬೆಂಗಳೂರು: ಮುಖ್ಯಮಂತ್ರಿಯಾಗಿ ಎರಡು ವರ್ಷ ಪೂರ್ಣಗೊಳಿಸುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕೇವಲ ಗೊಂದಲದಲ್ಲಿಯೇ ಆಡಳಿತ ನಡೆಸುವಂತಾಗಿದೆ. ಜುಲೈ 26ಕ್ಕೆ ಮುಖ್ಯಮಂತ್ರಿ ಯಡಿಯೂರಪ್ಪ ಸರ್ಕಾರಕ್ಕೆ ಎರಡು ವರ್ಷ ತುಂಬುತ್ತಿದೆ. ಒಂದೆಡೆ ಸವಾಲುಗಳು, ಮತ್ತೊಂದೆಡೆ ಗೊಂದಲಗಳು ಯಡಿಯೂರಪ್ಪ ಆಡಳಿತವನ್ನು ಸಂಪೂರ್ಣ ಆವರಿಸಿವೆ. 

ಈ ಎಲ್ಲಾ ಬೆಳವಣಿಗೆ ನಡುವಲ್ಲೇ ದಿ ನ್ಯೂ ಇಂಡಿಯನ್ ಎಕ್ಸ್'ಪ್ರೆಸ್ ನಡೆಸಿದ ಸಂದರ್ಶನದಲ್ಲಿ ಮಾತನಾಡಿರುವ ಬಿಜೆಪಿ ಹಿರಿಯ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು, ಈ ಎಲ್ಲಾ ಗೊಂದಲಗಳೂ ಶೀಘ್ರದಲ್ಲೇ ದೂರಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ರಾಜಕೀಯ ಅನಿಶ್ಚಿತತೆಯ ಮಧ್ಯೆ ನಿಮ್ಮ ಸರ್ಕಾರ ಎರಡು ವರ್ಷ ಅಧಿಕಾರವನ್ನು ಪೂರೈಸುತ್ತಿದೆ...?
ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಸರ್ಕಾರ ಉತ್ತಮ ಸಾಧನೆಯನ್ನು ಮಾಡಿದೆ. ಕೋವಿಡ್ ಸಾಂಕ್ರಾಮಿಕ ರೋಗವನ್ನು ಉತ್ತಮವಾಗಿ ನಿಭಾಯಿಸಿದೆ. ಸೋಂಕಿನ ವಿರುದ್ಧ ದಿಟ್ಟ ಹೋರಾಟ ನಡೆಸಲು ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಟಾಸ್ಕ್ ಫೋರ್ಸ್ ರಚನೆ ಮಾಡಿದ್ದೇವೆ. ಎಲ್ಲಾ ರಂಗದಲ್ಲೂ ಸರ್ಕಾರ ಉತ್ತಮವಾಗಿ ಕೆಲಸ ಮಾಡಿದೆ.

ನಾಯಕತ್ವದ ವಿಚಾರದ ಹಲವು ತಿಂಗಳುಗಳಿಂದಲೂ ಸಾಕಷ್ಟು ಗೊಂದಲವನ್ನು ಸೃಷ್ಟಿಸುತ್ತಿದೆ. ಇದು ರಾಜ್ಯದ ಆಡಳಿತದ ಮೇಲೆ ಪರಿಣಾಮ ಬೀರುತ್ತಿಲ್ಲವೇ?
2018ರ ಚುನಾವಣೆಯಲ್ಲಿ ನಾವು ಬಹುಮತ ಪಡೆದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಜನರು ಆಡಳಿತ ನಡೆಸುವಂತೆ ನಮ್ಮನ್ನು ಕೇಳಿಕೊಂಡರು. ಆದರೆ, ನಮಗೆ ಬಹುಮತ ನೀಡಲಿಲ್ಲ. ಇದು ನಮಗೆ ಹಿನ್ನಡೆಯನ್ನುಂಟು ಮಾಡಿತ್ತು. ಕೇಂದ್ರದ ನಾಯಕರು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿದರು. ಇದೀಗ ಪಕ್ಷದಲ್ಲಿ ಯಾವುದೇ ರೀತಿಯ ಸಮಸ್ಯೆಗಳೂ ಇಲ್ಲ.

ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಏನು ಹೇಳುತ್ತೀರಾ? 
ಇದು ಕೇಂದ್ರೀಯ ನಾಯಕತ್ವ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಿಟ್ಟ ವಿಚಾರ. ಇಬ್ಬರು ಯಾವುದೇ ರೀತಿಯ ನಿರ್ಧಾರ ತೆಗೆದುಕೊಂಡರೂ ಅದಕ್ಕೆ ನಾವು ತಲೆಬಾಗುತ್ತೇವೆ.

ಈ ಅಸ್ಪಷ್ಟತೆಯ ಪರಿಸ್ಥಿತಿ ಯಾವಾಗ ಕೊನೆಗೊಳ್ಳುತ್ತದೆ? 
ಈ ವಾರಾಂತ್ಯದೊಳಗೆ ಹೈಕಮಾಂಡ್ ನಿಂತ ನಿರ್ದೇಶನಗಳು ಬರಲಿವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರೇ ಸ್ಪಷ್ಟವಾಗಿ ಹೇಳಿದ್ದಾರೆ. ಹೈಕಮಾಂಡ್ ನಿರ್ದೇಶನದಂತೆ ಅವರು ನಡೆದುಕೊಳ್ಳಲಿದ್ದಾರೆ. ಶೀಘ್ರದಲ್ಲೇ ಈ ಎಲ್ಲಾ ಗೊಂದಲಗಳು ದೂರಾಗಲಿದೆ. 

ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ? 
ಕೇಂದ್ರದ ನಾಯಕರು ಯಾರನ್ನು ಆಯ್ಕೆ ಮಾಡುತ್ತಾರೋ ಅವರು. ಇದರಲ್ಲಿ ಯಾವುದೇ ಪ್ರಶ್ನೆಗಳೂ ಎದುರಾಗುವುದಿಲ್ಲ.

ಬಿಜೆಪಿ ಹೊಸ ಮುಖದ ನಾಯಕನ ಹುಡುಕಾಟ ನಡೆಸಿದ್ದು, ವಿಫಲಗೊಂಡಿದೆ ಎಂದು ವಿರೋಧ ಪಕ್ಷಗಳು ಹೇಳುತ್ತಿವೆ. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಏನು? 
ಅವರ ವೈಫಲ್ಯಗಳನ್ನು ಮುಚ್ಚಿಹಾಕಲು ಕಾಂಗ್ರೆಸ್ ಇಂತಹ ಆರೋಪಗಳನ್ನು ಮಾಡುತ್ತಲೇ ಇರುತ್ತದೆ. ಚುನಾವಣೆಯಲ್ಲಿ ಅವರ ಕಾರ್ಯಕ್ಷಮತೆಯನ್ನು ಜನರು ಮರೆತುಬಿಡುತ್ತಾರೆಂದು ಆಶಿಸುತ್ತಿದೆ. 2018ರ ವಿಧಾನಸಭಾ ಚುನಾವಣೆಯಲ್ಲಿ ಯಾವ ಕಾರಣಕ್ಕೆ ಸೋತರು, ರಾಜ್ಯದ 28 ಲೋಕಸಭಾ ಸ್ಥಾನಗಳಲ್ಲಿ ಕೇವಲ ಒಂದು ಸ್ಥಾನದಲ್ಲಿ ಮಾತ್ರವೇ ಏಕೆ ಗೆದ್ದರು ಎಂಬುದನ್ನು ಇನ್ನೂ ಜನರಿಗೆ ತಿಳಿಸಿಲ್ಲ ಎಂದು ಹೇಳಿದ್ದಾರೆ. 

SCROLL FOR NEXT