ರಾಜಕೀಯ

ಸಿಎಂ ಸ್ಥಾನಕ್ಕಷ್ಟೇ ಯಡಿಯೂರಪ್ಪ ರಾಜೀನಾಮೆ ನೀಡಿದ್ದಾರೆ, ರಾಷ್ಟ್ರ, ರಾಜ್ಯ ರಾಜಕಾರಣಕ್ಕಲ್ಲ: ಸಚಿವ ಸುಧಾಕರ್

Manjula VN

ಬೆಂಗಳೂರು: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದಾರೆ, ರಾಷ್ಟ್ರ, ರಾಜ್ಯ ರಾಜಕಾರಣಕೆಕ ನೀಡಿಲ್ಲ ಎಂದು ಸಚಿವ ಸುಧಾಕರ್ ಅವರು ಸೋಮವಾರ ಹೇಳಿದ್ದಾರೆ. 

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಯಡಿಯೂರಪ್ಪ ಅವರು ಅಂತಿಮವಾಗಿ ನಿರ್ಣಯ ಕೈಗೊಂಡಿದ್ದಾರೆ. ಹೈಕಮಾಂಡ್ ಸಲಹೆಯಂತೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷದ ಸಿಪಾಯಿ, ನಿಷ್ಠಾವಂತ ಕಾರ್ಯಕರ್ತರೆಂದು ಮತ್ತೊಮ್ಮೆ ಸಾಬೀತು ಪಡಿಸಿದ್ದಾರೆ. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕಷ್ಟೇ ರಾಜೀನಾಮೆ ನೀಡಿದ್ದಾರೆ, ರಾಷ್ಟ್ರ, ರಾಜ್ಯ ರಾಜಕಾರಣಕ್ಕೆ ರಾಜೀನಾಮೆ ನೀಡಿಲ್ಲ ಎಂದು ಹೇಳಿದ್ದಾರೆ. 

ಜನಪರ ಕಾಳಜಿಯನ್ನು ಮತ್ತಷ್ಟು ಬಲದಿಂದ ಪ್ರತಿಪಾದಿಸಲು ಪಕ್ಷದ ಆಶಯ ಮತ್ತು ಸಿದ್ಧಾಂತದ ಅಡಿಯಲ್ಲಿ ಪಕ್ಷದ ಲಕ್ಷಾಂತರ ಕಾರ್ಯಕರ್ತರ ಸಹಕಾರಕ್ಕೆ, ಬೆಂಬಲಕ್ಕೆ ನಿಂತು ನಮಗೆಲ್ಲರಿಗೂ ಮಾರ್ಗದರ್ಶನ, ನಾಯಕತ್ವವನ್ನು ನೀಡಲಿದ್ದಾರೆ. ಅವರ ನಾಯಕತ್ವದಲ್ಲಿ ನಂಬಿಕೆಯಿಟ್ಟು ಭಾರತ ಜನತಾ ಪಕ್ಷದ ಆಶಯ ಮತ್ತು ಸಿದ್ಧಾಂತಗಳನ್ನು ಒಪ್ಪಿಕೊಂಡು ಬಂದಿದ್ದೇವೆ. ಯಡಿಯೂರಪ್ಪ ಅವರ ರಾಜೀನಾಮೆ ನಿಜಕ್ಕೂ ಆಶ್ಚರ್ಯ ಹಾಗೂ ನಿರಾಸೆಯನ್ನುಂಟು ಮಾಡಿದೆ. ಆದರೆ, ಪಕ್ಷ ದೊಡ್ಡದು. ನಾವೆಲ್ಲರೂ ಒಂದು ತಂಡವಾಗಿ ರಾಜ್ಯವನ್ನು ಮುನ್ನಡೆಸಬೇಕಿದೆ. 

ಯಡಿಯೂರಪ್ಪ ನಾಯಕತ್ವ ಅಡಿಯಲ್ಲಿ ಕೋವಿಡ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವ ಅವಕಾಶ ಸಿಕ್ಕಿದೆ. 2 ಬಾರಿ ರಾಜ್ಯದಲ್ಲಿ ಎದುರಾದ ನೆರೆಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವುದು ವೈಯಕ್ತಿಕವಾಗಿ ನೋವು ತಂದಿದೆ. ಪಕ್ಷದ ಸಿದ್ಧಾಂತದ ಮೇಲೆ ನಂಬಿಕೆಯಿದೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ನೀಡಿದ ನಿರ್ಧಾರದಂತೆ ನಡೆದುಕೊಳ್ಳುತ್ತೇವೆಂದು ತಿಳಿಸಿದ್ದಾರೆ. 

SCROLL FOR NEXT