ರಾಜಕೀಯ

ಕೋವಿಡ್'ನಿಂದ 30 ಸಾವಿರ ಜನರಲ್ಲ 3 ಲಕ್ಷ ಜನರು ಸಾವನ್ನಪ್ಪಿದ್ದಾರೆ: ಡಿ.ಕೆ.ಶಿವಕುಮಾರ್ ಆರೋಪ

Manjula VN

ಬೆಂಗಳೂರು: ಸರ್ಕಾರ ಹೇಳುತ್ತಿರುವಂತೆ ರಾಜ್ಯದಲ್ಲಿ ಕೋವಿಡ್ ನಿಂದ 30 ಸಾವಿರ ಜನರು ಸತ್ತಿಲ್ಲ. 3 ಲಕ್ಷ ಜನರು ಸಾವನ್ನಪ್ಪಿದ್ದಾರೆಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಹೇಳಿದ್ದಾರೆ.

ಶನಿವಾರ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸೂಚನೆಯಂತೆ ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್ ನಾಯಕರೊಂದಿಗಿನ ಝೂಮ್ ಸಭೆ ಬಳಿಕ ಡಿಕೆ.ಶಿವಕುಮಾರ್ ಅವರು ಮಾತನಾಡಿದರು. 

ರಾಜ್ಯದಾದ್ಯಂತ ಕೊರೋನಾ ಅವಧಿಯಲ್ಲಿ 3 ಲಕ್ಷ ಜನರು ಮೃತಪಟ್ಟಿದ್ದರೆ, ರಾಜ್ಯ ಸರ್ಕಾರ 30 ಸಾವಿರ ಸಾವಿನ ಲೆಕ್ಕ ನೀಡುತ್ತಿದೆ. ಹೀಗಾಗಿ ಈ ಅಭಿಯಾನದ ವೇಳೆ ಕೊರೋನಾದಿಂದ ಉಂಟಾದ ನಿಖರ ಸಾವು-ನೋವಿನ ಪ್ರಮಾಣ ಅರಿಯಲು ಹಾಗೂ ಕೊರೋನಾದಿಂದ ಸಾವು, ಆರ್ಥಿಕ ಸಂಕಷ್ಟ ಎದುರಿಸುತ್ತಿರುವವರ ಮನೆಗಳಿಗೆ ಭೇಟಿ ನೀಡಿ ಸಾಂತ್ವನ ಹೇಳುವ ಹಾಗೂ ಸಮಸ್ಯೆ ಆಲಿಸುವ ಪ್ರಯತ್ನ ಮಾಡಲಾಗುತ್ತದೆ ಎಂದು ಹೇಳಿದರು. 

ಕಾಂಗ್ರೆಸ್ ಹೈಕಮಾಂಡ್ ಜನಸಂಪರ್ಕ ಅಭಿಯಾನ ಯಾವ ರೀತಿ ನಡೆಯಬೇಕು ಎಂಬ ಬಗ್ಗೆ ಮಾರ್ಗಸೂಚಿ ನೀಡಿದೆ. ಈ ಬಗ್ಗೆ ಶನಿವಾರದ ಸಭೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸೂಚನೆ ನೀಡಿದ್ದಾರೆ. ಪ್ರತಿ ಬ್ಲಾಕ್ ಮಟ್ಟದಲ್ಲಿ 10 ಮಂದಿ ಸದಸ್ಯರ ತಂಡ ರಚಿಸಿ ಒಂದು ತಿಂಗಳ ಕಾಲ ನೊಂದವರ ಪ್ರತಿ ಮನೆಗೆ ಭೇಟಿ ನೀಡಿ ವರದಿ ಸಿದ್ಧಪಡಿಸಬೇಕು. ಸಮಸ್ಯೆ ಎದುರಿಸುತ್ತಿರುವವರಿಗೆ ಸ್ಥಳೀಯ ಸಮಸ್ಯೆ ಕೈಲಾದ ಸಹಾಯ ಮಾಡಬೇಕೆಂದು ಸೂಚಿಸಿದ್ದೇವೆಂದು ತಿಳಿಸಿದ್ದಾರೆ. 

ಸಭೆಯಲ್ಲಿ ಮಾತನಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೊರೋನಾ ಮೂರನೇ ಅಲೆಯ ಭೀತಿ ಶುರುವಾಗಿದ್ದು, ಮತ್ತೆ ಜನರ ನೆರವಿಗೆ ಟೊಂಕ ಕಟ್ಟಿ ನಿಲ್ಲಬೇಕು. ಸರ್ಕಾರ ಆರಂಭಿಸಿದ ಲಸಿಕೆ ಅಭಿಯಾನ ನಿಂತಲ್ಲೇ ಇದೆ. ಆದರೆ, ನಮ್ಮ ಪಕ್ಷದ ಹಲವಾರು ಶಾಸಕರು ಜನರಿಗೆ ಉಚಿತವಾಗಿ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಅಗತ್ಯಕ್ಕೆ ಅನುಗುಣವಾಗಿ ಲಸಿಕೆ ನೀಡಿ ಜನರನ್ನು ಕೊರೋನಾ ಮುಕ್ತ ಮಾಡುವ ಕಾರ್ಯವನ್ನು ಸರ್ಕಾರ ಮಾಡಬೇಕು. ಈ ವಿಷಯದಲ್ಲಿ ಪಕ್ಷದ ವತಿಯಿಂದಲೂ ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದಿದ್ದಾರೆ. 

SCROLL FOR NEXT