ರಾಜಕೀಯ

ಸಹೋದರ ಎಚ್‌ಡಿಕೆ ಪ್ರತಿಸ್ಪರ್ಧಿ ಸಿದ್ದರಾಮಯ್ಯ ಪರ ರೇವಣ್ಣ ಬ್ಯಾಟಿಂಗ್!

Nagaraja AB

ಹಾಸನ: ಮಾಜಿ ಮುಖ್ಯಮಂತ್ರಿ ಎಚ್ .ಡಿ. ಕುಮಾರಸ್ವಾಮಿ ಮತ್ತು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅನೇಕ ವಿಚಾರಗಳಲ್ಲಿ ಪರಸ್ಪರ ಕೆಸರೆರಾಚಟದಲ್ಲಿ ತೊಡಗಿರುವಂತೆಯೇ, ಕುಮಾರಸ್ವಾಮಿ ಸಹೋದರ ಹೆಚ್. ಡಿ. ರೇವಣ್ಣ ಬಹಿರಂಗವಾಗಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಹೆಚ್. ಡಿ. ರೇವಣ್ಣ, ವಿಧಾನಭೆ ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ, ರಾಜ್ಯದಲ್ಲಿನ ಪರಿಸ್ಥಿತಿ ಪರಾಮರ್ಶಿಸುವ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಐಎಎಸ್ ಅಧಿಕಾರಿಗಳು ಮತ್ತು ಜಿಲ್ಲಾ ಅಧಿಕಾರಿಗಳಿಗಳೊಂದಿಗೆ ಮಾತನಾಡುವ ಅಧಿಕಾರವಿದೆ. ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಸಿದ್ದರಾಮಯ್ಯ ನಡುವಿನ ಸಮಸ್ಯೆಗಳು ರಾಜಕೀಯ ಬಣ್ಣ ಪಡೆದಿರುವುದು ಮತ್ತು ಉಭಯ ನಾಯಕರ ಅಧಿಕಾರ ಪ್ರಶ್ನಿಸುತ್ತಿರುವುದು ದುರಾದೃಷ್ಟಕರ ಎಂದರು.

ಸಾಮಾನ್ಯವಾಗಿ ಪ್ರತಿಪಕ್ಷ ನಾಯಕರು ಸಾರ್ವಜನಿಕ ಲೆಕ್ಕ ಸಮಿತಿ ಮುಖ್ಯಸ್ಥರಾಗಿದ್ದು, ಸ್ಪಷ್ಟನೆಗಾಗಿ ಯಾವುದೇ ಅಧಿಕಾರಿಗೆ 
ಸಮನ್ಸ್ ನೀಡುವ ಅಧಿಕಾರ ಹೊಂದಿರುತ್ತಾರೆ.ಆದ್ದರಿಂದ ಏಕೆ ವಿಪಕ್ಷ ನಾಯಕರು ಐಐಎಸ್ ಅಧಿಕಾರಿಗಳೊಂದಿಗೆ ಮಾತನಾಡಬಾರದು. ಅಧಿಕಾರಿಗಳಿಂದ ಮಾಹಿತಿ ಪಡೆಯುವುದರಲ್ಲಿ ತಪ್ಪೇನಿದೆ ಎಂದು ಪ್ರಶ್ನಿಸಿದರು.ಪ್ರಜಾಸತಾತ್ಮಕ ವ್ಯವಸ್ಥೆಯಲ್ಲಿ ಯಾವುದೇ ನಾಯಕರ ಅಧಿಕಾರವನ್ನು ನಿರ್ಬಂಧಿಸುವುದು  ನ್ಯಾಯ ಸಮ್ಮತವಲ್ಲ ಎಂದು ರೇವಣ್ಣ ಹೇಳಿದರು.

ರಾಜ್ಯದಲ್ಲಿ ಕೋವಿಡ್-19 ಸಾಂಕ್ರಾಮಿಕವನ್ನು ತಡೆಯುವಲ್ಲಿ ರಾಜ್ಯ ಸರ್ಕಾರ  ವಿಫಲವಾಗಿದೆ. ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಬಿಎಸ್ ವೈ ಸಂಪುಟದ ಆರೋಗ್ಯ  ಸಚಿವರು ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪೂರ್ಣ ಅಧಿಕಾರ ನೀಡುವ ಪ್ರಧಾನಿ ನರೇಂದ್ರ ಮೋದಿ ಅವರ ನಿರ್ಧಾರ ಹಾಸ್ಯಾಸ್ಪದ ಎಂದು ಹೇಳಿದ ರೇವಣ್ಣ,  ರಾಜ್ಯದಲ್ಲಿನ ತಮ್ಮದೇ ಸರ್ಕಾರದಲ್ಲಿನ ಸಚಿವರ ಮೇಲಿನ ನಂಬಿಕೆ ಕಳೆದುಕೊಂಡು ಈ ರೀತಿ ಮಾಡಿರಬಹುದು. ಕೋವಿಡ್-19 ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾದರೆ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷದಿಂದ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

SCROLL FOR NEXT