ರಾಜಕೀಯ

ಕೇಂದ್ರದ ಗಮನ ಚುನಾವಣೆ ಮೇಲಿದೆಯೇ ಹೊರತು ಕೊರೋನಾ ನಿಯಂತ್ರಿಸುವತ್ತ ಇಲ್ಲ: ದೇವೇಗೌಡ

Manjula VN

ಬೆಂಗಳೂರು: ಕೇಂದ್ರ ಸರ್ಕಾರದ ಗಮನ ಚುನಾವಣೆಯ ಮೇಲಿದೆಯೇ ಹೊರತು ಕೊರೋನಾ ನಿಯಂತ್ರಿಸುವಲ್ಲ ಇಲ್ಲ ಎಂದು ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡ ಅವರು ಹೇಳಿದ್ದಾರೆ. 

ಸೋಮವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ಸೋಂಕು ಹೆಚ್ಚಳಕ್ಕೆ ಪಂಚ ರಾಜ್ಯಗಳ ಚುನಾವಣೆಯೂ ಕಾರಣವಾಗಿರಬಹುದು. ಕೇಂದ್ರ ಸರ್ಕಾರ ಚುನಾವಣೆ ಬದಲು ಕೋವಿಡ್ ಕಡೆ ಗಮನ ಕೊಟ್ಟಿದ್ದರೆ ಇಷ್ಟು ದೊಡ್ಡ ಮಟ್ಟದಲ್ಲಿ ಅನಾಹುತವಾಗುತ್ತಿರಲಿಲ್ಲವೇನೋ ಎಂದು ಹೇಳಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಕೊರೋನಾ ಬಗ್ಗೆ ಹೆಚ್ಚಿನ ಗಮನ ಕೊಡಲಿಲ್ಲ. ಪ್ರಧಾನಿ ಮೋದಿಯವರು ಚುನಾವಣೆಯತ್ತ ಹೆಚ್ಚು ಗಮನ ನೀಡಿ, ಕೊರೋನಾ ಕಾರ್ಯದತ್ತ ಸ್ವಲ್ಪ ನಿರ್ಲಕ್ಷ್ಯ ತೋರಿದರು ಎಂಬ ಮಾತುಗಳು ಕೇಳಿ ಬಂದಿವೆ ಎಂದು ತಿಳಿಸಿದ್ದಾರೆ. 

ಆಮ್ಲಜನಕ ನೀಡುವುದರಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ತೋರಿದೆ ಎನ್ನುವ ವಿಚಾರ ಕುರಿತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದೇನೆ. ಕುಮಾರಸ್ವಾಮಿ ಅವರು ಕೂಡ ಹಲವು ಬಾರಿ ಮಾತನಾಡಿದ್ದಾರೆ. ಹಣಕಾಸು ಹಂಚಿಕೆಯಲ್ಲಿ ನಮಗೆ ಅನ್ಯಾಯವಾಗಿದೆ. ಚಿಕ್ಕ ರಾಜ್ಯಗಳಿಗೆ ಹೆಚ್ಚ ಹಣ ಬಿಡುಗಡೆ ಮಾಡುತ್ತಾರೆ. ನಮಗೆ ಕಡಿಮೆ ಹಣ ಬಿಡುಗಡೆ ಮಾಡುತ್ತಾರೆ. ಈ ವಿಚಾರದಲ್ಲಿ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದರು. 

ಕೊರೋನಾ ವಿಚಾರದಲ್ಲಿ ಪ್ರಧಾನಿ ಮತ್ತು ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು 12 ಸಲಹೆ ನೀಡಿದ್ದೇನೆ. ಈ ಪೈಕಿ ಕೆಲವನ್ನು ಕಾರ್ಯಗತ ಮಾಡುತ್ತಿದ್ದಾರೆಂದು ಮಾಹಿತಿ ನೀಡಿದ್ದಾರೆ. 

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ, ಚೆನ್ನಮ್ಮ ಅವರ ದಾಂಪತ್ಯ ಜೀವನಕ್ಕೆ 67ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ. ಈ ಹಿನ್ನೆಲೆಯಲ್ಲಿ ಸೋಮವಾರ ರಾಮನಗರದ ಕೇತಗಾನಹಳ್ಳಿಯಲ್ಲಿರುವ ಎಚ್. ಡಿ. ಕುಮಾರಸ್ವಾಮಿ ಅವರ ಕೃಷಿಭೂಮಿಯಲ್ಲಿ ತೆಂಗಿನ ಸಸಿನೆಟ್ಟು ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದಾರೆ.

SCROLL FOR NEXT