ರಾಜಕೀಯ

ಯೋಗೇಶ್ವರ್ ಪಕ್ಷಕ್ಕೆ ಆಮದು ಸರಕು, ಸಚಿವ ಸ್ಥಾನದಿಂದ ಕಿತ್ತೊಗೆಯಿರಿ: ನಿಮ್ಮ ಜೊತೆ ನಾವಿದ್ದೇವೆ ಸಿಎಂಗೆ ಶಾಸಕರ ಬೆಂಬಲ

Shilpa D

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಸಚಿವ ಸಿಪಿ ಯೋಗೇಶ್ವರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತ ಪಡಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ 18 ಶಾಸಕರು ಸಿಎಂ ಬೆನ್ನಿಗೆ ನಿಂತಿದ್ದಾರೆ.

ಭಾನುವಾರ ಮಧ್ಯಾಹ್ನ ಶಾಸಕ ಎಂಪಿ ರೇಣುಕಾಚಾರ್ಯ ಅವರ ನೇತೃತ್ವದಲ್ಲಿಸಿಎಂ ನಿವಾಸಕ್ಕೆ ಭೇಟಿ ನೀಡಿದ 18 ಶಾಸಕರು ಸಿಎಂ ಜೊತೆ ಕೋವಿಡ್ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದರು, ಯೋಗೇಶ್ವರ್ ವಾಗ್ದಾಳಿ ಹಿನ್ನೆಲೆಯಲ್ಲಿ ಶಾಸಕರು ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವುದು ಸ್ಪಷ್ಟವಾಗಿದೆ.

ಯೋಗೇಶ್ವರ್ ಪಕ್ಷಕ್ಕೆ ಆಮದು ಸರಕು, ಅವರ ಮೇಲೆ ಪಕ್ಷ ಅವಲಂಬಿತವಾಗಿಲ್ಲ, ಮುಖ್ಯಮಂತ್ರಿಯನ್ನು ಬದಲಾವಣೆ ಮಾಡಲು ಅವರು ಯಾರು, ಏನೇ ಆದರೂ ನಾವು ಯಡಿಯೂರಪ್ಪ ಅವರ ಪರವಾಗಿರುತ್ತೇವೆ ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ. 

ನಾಯಕತ್ವ ಬದಲಾವಣೆ ಮಾಡಬೇಕೆಂಬ ಚರ್ಚೆ ಮುನ್ನೆಲೆಗೆ ಬಂದಿರುವ ಸಂದರ್ಭದಲ್ಲಿ 18 ಶಾಸಕರು ಸಿಎಂ ಅವರನ್ನು ಭೇಟಿ ಮಾಡಿರುವುದು ಮಹತ್ವ ಪಡೆದುಕೊಂಡಿದೆ,  ಆದರೆ ಸದ್ಯ ಆತುರ ಬೇಡ, ಕೋವಿಡ್ ಇರುವ ಕಾರಣ ಕೆಲ ಸಮಯದವರೆಗೂ ಕಾದು ನೋಡುವಂತೆ ಸಿಎಂ ಶಾಸಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಈಶ್ವರಪ್ಪ ಕೂಡ ರಾಜ್ಯಪಾಲರಿಗೆ ಪತ್ರ ಬರೆದಿದ್ದರು. ಆದರೆ ಅವರು ಮೂಲ ಬಿಜೆಪಿಗರು, ಆದರೆ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಸೋತಿದ್ದರೂ ಅವರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಶಾಸಕರಾದ ರಾಜುಗೌಡ, ಮಸಾಲೆ ಜಯರಾಮ್, ನಿರಂಜನ್ ಕುಮಾರ್. ಡಾ. ಶಿವರಾಜ್ ಪಾಟೀಲ್ , ವಿರೂಪಾಕ್ಷಪ್ಪ ಬಳ್ಳಾರಿ, ಎಂಪಿ ಕುಮಾರಸ್ವಾಮಿ ಮತ್ತು ಬಸವರಾಜ್ ದಡೇಸುಗೂರು ಮುಂತಾದವರು ಯಡಿಯೂರಪ್ಪ ಪರ ನಿಂತಿದ್ದಾರೆ.

SCROLL FOR NEXT