ರಾಜಕೀಯ

ಸ್ಥಳೀಯರ ಆದ್ಯತೆ ಮೇರೆಗೆ ಟಿಕೆಟ್ ನೀಡಲಾಗಿದೆ: ಡಿ.ಕೆ. ಶಿವಕುಮಾರ್

Manjula VN

ಬೆಂಗಳೂರು: ಸ್ಥಳೀಯರಿಗೆ ಯಾರ ಮೇಲೆ ಒಲವಿರುತ್ತದೆಯೋ ಅಂತವರಿಗೆ ಅವಕಾಶ ಕೊಡಬೇಕು. ಕೆಲವೊಮ್ಮೆ ಈ ಪದ್ಧತಿ ಅನಿವಾರ್ಯವeಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಇಲ್ಲಿ ನಮ್ಮ ವ್ಯಯಕ್ತಿಕ ನಿರ್ಧಾರಗಳಿಗಿಂತ ಪಕ್ಷದ ಹಿತ ಮುಖ್ಯ ಎಂದು ಹೇಳಿದ್ದಾರೆ. ಅಲ್ಲದೆ, ಪರಿಷತ್ ಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಬಂಡಾಯವಾಗಿ ಸ್ಪರ್ಧಿಸುವವರನ್ನು ಪಕ್ಷದಿಂದಲೇ ಉಚ್ಛಾಟಿಸುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಹೊಸಬರಿಗೆ ಟಿಕೆಟ್ ನೀಡುವ ಪ್ರತೀತಿ ರಾಜ್ಯಸಭೆ ಚುನಾವಣೆಯಲ್ಲೂ ಉಂಟು. ಕಾಂಗ್ರೆಸ್, ಬಿಜೆಪಿ ಎಲ್ಲಾ ಪಕ್ಷಗಳೂ ಆಯಾ ಸಂದರ್ಭಕ್ಕೆ ತಕ್ಕಂತೆ ಹೊಸಬರಿಗೆ ಅವಕಾಶ ನೀಡಿವೆ. ಅದೇ ರೀತಿ ಕೆಲವರು ಹೊಸಬರಿಗೆ ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ಎಸ್ಆರ್.ಪಾಟೀಲ್ ಅವರನ್ನು ಕಡೆಗಣಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಕಡೆಗಣಿಸಲಾಗಿದೆ ಎಂಬುದು ಸರಿಯಲ್ಲ. ವರಿಷ್ಠರು ರಾಜ್ಯ ಮುಖಂಡರು ಚರ್ಚಿಸಿ ತೀರ್ಮಾನ ಕೈಗೊಂಡಿದ್ದಾರೆ. ಪಾಟೀಲರನ್ನು ಕೈಬಿಡುವ ಪ್ರಶ್ನೆಯೇ ಇಲ್ಲ. ಅವರಿಗೆ ಜವಾಬ್ದಾರಿ ನೀಡುವ ಬೇರೆ ಅಜೆಂಡಾ ಇದೆ ಎಂದರು.

ಕೆ.ಸಿ.ಕೊಂಡಯ್ಯಗೆ ಟಿಕೆಟ್ ನೀಡಿದ್ದನ್ನು ಇದೇ ವೇಳೆ ಸಮರ್ಥಿಸಿದ ಅವರು, ಕೆಲವರು ಅಭಿಪ್ರಾಯವನ್ನು ವ್ಯಕ್ತಪಡಿಸಿರಬಹುದೇ ಹೊರದು ಯಾರೂ ವಿರೋಧ ಮಾಡಿಲ್ಲ. ಸ್ಥಳೀಯ ಮುಖಂಡರ ಅಭಿಪ್ರಾಯವನ್ನು ಕ್ರೋಡೀಕರಿಸಿಯೇ ಕೊಂಡಯ್ಯರಿಗೆ ಟಿಕೆಟ್ ನೀಡಲಾಗಿದೆ. ಅವರು ಹಿರಿಯರು. ಸೋನಿಯಾ ಗಾಂಧಿ ಅವರಿಗಾಗಿ ಸಂಸತ್ ಸ್ಥಾನ ತ್ಯಾಗ ಮಾಡಿದ್ದವರು. ಹೀಗಾಗಿ ಅವರಿಗೆ ಟಿಕೆಟ್ ನೀಡಲಾಗಿದೆ ಎಂದು ಹೇಳಿದರು.

ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಗುಡಿಗಿದ ಅವರು, ಗುತ್ತಿಗೆದಾರರಿಂದ ಪ್ರಧಾನಿ ಮೋದಿಗೆ ಪತ್ರ ಹೋದ ವಿಚಾರ ಗಂಭೀರವಾಗಿ ಪರಿಗಣಿಸುವಂಥದ್ದು. ಈ ಬಗ್ಗೆ ಉನ್ನತ ಮಟ್ಟದ ತನಿಖೆಯಾಗಬೇಕು. ನಾವು ಕೂಡ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ' ಎಂದರು.

'ಕಾಂಗ್ರೆಸ್ಸಿನಲ್ಲಿ ಯಾವುದೇ ಬಣಗಳಿಲ್ಲ. ಇರುವುದು ಕಾಂಗ್ರೆಸ್ ಒಂದೇ. ಬಿಜೆಪಿ ಮುಖಂಡರಿಗೆ ನಮ್ಮ ಬಗ್ಗೆ ಮಾತನಾಡದಿದ್ದರೆ ನಿದ್ದೆ ಬರುವುದಿಲ್ಲ. ಹೀಗಾಗಿ ಪ್ರತಿನಿತ್ಯ ನಮ್ಮ ಬಗ್ಗೆ ಅವರೇ ಪ್ರಚಾರ ಮಾಡುತ್ತಾರೆ' ಎಂದೂ ಲೇವಡಿ ಮಾಡಿದರು.

ಮಳೆಯಿಂದ ತತ್ತರಿಸಿದವರಿಗೆ ಮೊದಲು ಸರ್ಕಾರ ಪರಿಹಾರ ನೀಡಬೇಕು‌. ಹಣ ಬಿಡುಗಡೆ ಮಾಡಬೇಕು‌. ಕಾಂಗ್ರೆಸ್ ನಿಂದ ಕೂಡ ರೈತರು ಮತ್ತು ಜನರ ನೋವು ಕೇಳುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

SCROLL FOR NEXT