ಹಾಸನ: ಒಂದೇ ಕುಟುಂಬದಲ್ಲಿ, ಒಂದೇ ಮನೆಯ ಸದಸ್ಯರು ಬೇರೆ ಬೇರೆ ಪಕ್ಷಗಳಲ್ಲಿರುವುದನ್ನು ನಾವು ಈ ಹಿಂದೆ ನೋಡಿದ್ದೇವೆ, ಕೇಳಿದ್ದೇವೆ. ಹಾಸನದ ಪ್ರಮುಖ ರಾಜಕೀಯ ಮುಖಂಡ ಮಾಜಿ ಸಚಿವ ಎ ಮಂಜು ಅವರ ಸ್ಥಿತಿಯೂ ಹಾಗೆಯೇ ಆಗಿದೆ.
ಅಪ್ಪ ಬಿಜೆಪಿಯಲ್ಲಿದ್ದರೆ ಮಗ ಮಂಥರ್ ಗೌಡ ಈಗ ಕಾಂಗ್ರೆಸ್ ಪಕ್ಷದಿಂದ ಕೊಡಗಿನಲ್ಲಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ. ಇದೇನು ಅಪ್ಪ ಒಂದು ಪಕ್ಷ, ಮಗ ಮತ್ತೊಂದು ಪಕ್ಷ ಎಂದು ಮಾತನಾಡಿಕೊಳ್ಳುವವರ ಬಗ್ಗೆ ಸ್ವತಃ ಎ.ಮಂಜು ಅವರು ಪ್ರತಿಕ್ರಿಯಿಸಿದ್ದಾರೆ. ಪುತ್ರ ಡಾ.ಮಂಥರ್ ಗೌಡ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡುತ್ತಿರುವುದನ್ನು ತಂದೆಯಾಗಿ ಮಂಜು ಅವರು ಸಮರ್ಥಿಸಿಕೊಂಡಿದ್ದಾರೆ.
ಈ ದೇಶದಲ್ಲಿ ಸೋನಿಯಾ ಗಾಂಧಿ ಮತ್ತು ಮನೇಕಾ ಗಾಂಧಿಯವರು ಒಂದೇ ಕುಟುಂಬಕ್ಕೆ ಸೇರಿದವರಾದರೂ ಇಬ್ಬರೂ ಬೇರೆ ಬೇರೆ ಪಕ್ಷದಲ್ಲಿದ್ದಾರೆ. ದೇವೇಗೌಡ ಕುಟುಂಬದಲ್ಲಿರುವವರು ಹೊರಗಿನಿಂದ ಜಾತ್ಯತೀತ ಜನತಾದಳ ಎಂದು ಇದ್ದಾರಷ್ಟೆ. ಎಲ್ಲಾ ಪಕ್ಷದಲ್ಲಿಯೂ ಇದ್ದಾರೆ, ಅದು ಎಲ್ಲರಿಗೂ ಗೊತ್ತಿದೆ, ಯಾರೂ ಹೇಳುವುದಿಲ್ಲ. ಇಲ್ಲಿ ಒಳಒಪ್ಪಂದದ ಚುನಾವಣೆ ಮಾಡುತ್ತಾರಷ್ಟೆ ಎಂದರು.
ಇದನ್ನೂ ಓದಿ: JDS ಸೇರಿದ ಒಂದೇ ದಿನದಲ್ಲಿ ಸಿದ್ದರಾಮಯ್ಯ ಆಪ್ತ ಮಂಜೇಗೌಡಗೆ ಪರಿಷತ್ ಟಿಕೆಟ್; ಹಾಲಿ ಸದಸ್ಯ ಸಂದೇಶ್ ನಾಗರಾಜ್ ಗೆ ಮುಖಭಂಗ
ನಮ್ಮ ಜಿಲ್ಲೆಯಲ್ಲಿ ಒಳಒಪ್ಪಂದದ ಚುನಾವಣೆಯಾಗಲು ನಾವು ತಯಾರಿಲ್ಲ, ಈ ಕ್ಷೇತ್ರದಲ್ಲಿ ಡಾ ಮಂಥರ್ ಗೌಡ ಅಭ್ಯರ್ಥಿಯಾಗಬೇಕಿತ್ತು. ಕಾರಣಾಂತರದಿಂದ ಟಿಕೆಟ್ ತಪ್ಪಿ ಹೋಗಿದೆ, ಏಕೆ ತಪ್ಪಿಹೋಗಿದೆ ಎಂದು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ ಎಂದರು.
ಸೌಹಾರ್ದಯುತವಾಗಿ ವೈಯಕ್ತಿಕ ಕಾರಣಗಳಿಗೆ ನಾವು ಮೂರೂ ಪಕ್ಷದವರು ಭೇಟಿಯಾಗುತ್ತಿರುತ್ತೇವೆ, ಆದರೆ ನಾನು ಹಾಸನದಲ್ಲಿ ಯಾವುದೇ ಒಳಒಪ್ಪಂದ ಮಾಡಿಕೊಳ್ಳುವುದಿಲ್ಲ, ನೇರವಾದ ರಾಜಕಾರಣ ಮಾಡುವವನು ನಾನು ಎಂದರು.