ರಾಜಕೀಯ

ರಾಯರು ನನಗೆ ಎಲ್ಲ ಕೊಟ್ಟಿದ್ದಾರೆ, ಸಂತೋಷವಾಗಿದ್ದೇನೆ, ನಿಶ್ಚಿತವಾಗಿಯೂ ಬೊಮ್ಮಾಯಿ ಅವಧಿ ಪೂರ್ಣಗೊಳಿಸುತ್ತಾರೆ: ಬಿ ಎಸ್ ಯಡಿಯೂರಪ್ಪ

Sumana Upadhyaya

ಮಂತ್ರಾಲಯ: ಇಂದು ಗುರುವಾರ ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಮ್ಮ ಮಕ್ಕಳು, ಕುಟುಂಬಸ್ಥರೊಂದಿಗೆ ಭೇಟಿ ನೀಡಿ ರಾಯರ ದರ್ಶನ ಪಡೆದರು. 

ಪುಣ್ಯಕ್ಷೇತ್ರ ಮಂತ್ರಾಲಯದ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವದ ಅಂಗವಾಗಿ ಇಂದು ಮಂತ್ರಾಲಯದ ಭೇಟಿ ನೀಡಿದ್ದರು. ದೇವರ ದರ್ಶನ ಪಡೆದು ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಎಸ್ ಯಡಿಯೂರಪ್ಪ, ರಾಯರ ಆಶೀರ್ವಾದ ಪಡೆದು ರಾಜ್ಯದ ಉದ್ದಗಲಕ್ಕೂ ಓಡಾಟ ಮಾಡಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಸಂಕಲ್ಪ ಹೊಂದಿದ್ದೇನೆ. ನನ್ನ ಬಯಕೆಯನ್ನು ರಾಯರು ಈಡೇರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ನಮ್ಮ ಪಕ್ಷದ ಮುಖಂಡರೊಡನೆ ರಾಜ್ಯದಾದ್ಯಂತ ಓಡಾಡುತ್ತೇವೆ ಎಂದರು.ರಾಯರು ನನಗೆ ಎಲ್ಲ ಕೊಟ್ಟಿದ್ದಾರೆ, ನೆಮ್ಮದಿಯಿಂದಿದ್ದೇನೆ. ಕೆಲವರು ಈಗಾಗಲೇ ಮುಖ್ಯಮಂತ್ರಿಯಾದೆ ಎಂಬ ಭ್ರಮೆಯಲ್ಲಿ ಬೊಬ್ಬಿರಿಯುತ್ತಿದ್ದಾರೆ. ಅದಕ್ಕೆ ಅವಕಾಶ ಮಾಡಿಕೊಡದೆ ಮತ್ತೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರಲು ರಾಜ್ಯದ ಉದ್ದಗಲಕ್ಕೂ ಓಡಾಡುತ್ತೇವೆ ಎಂದರು.

ರೈತರು ಅತಿವೃಷ್ಟಿಯಿಂದ ತೊಂದರೆಯಲ್ಲಿದ್ದಾರೆ. ಸರ್ಕಾರ ಅವರ ರಕ್ಷಣೆಗೆ ನಿಲ್ಲುತ್ತದೆ. ಕೆರೆಕಟ್ಟೆಗಳು, ಜಲಾಶಯಗಳು ತುಂಬಿದ್ದು ಕೆಲವು ಕಡೆ ತೊಂದರೆಯಾಗಿದ್ದು ಸರ್ಕಾರ ಪರಿಹಾರ ಕೊಡುವ ಕೆಲಸ ಮಾಡುತ್ತದೆ ಎಂದರು.

ಬೊಮ್ಮಾಯಿ ಅವಧಿ ಪೂರ್ಣಗೊಳಿಸುತ್ತಾರೆ: ಮುಖ್ಯಮಂತ್ರಿ ಬೊಮ್ಮಾಯಿಯವರ ಬದಲಾವಣೆ ಆಗುವುದಿಲ್ಲ, ಅವರು ಈ ಅವಧಿ ಪೂರ್ಣಗೊಳಿಸುತ್ತಾರೆ. ಕೇಂದ್ರಕ್ಕೆ ರಾಘವೇಂದ್ರ, ರಾಜ್ಯಕ್ಕೆ ವಿಜಯೇಂದ್ರ’ ಎಂಬ ವಿಚಾರ ಕುರಿತು, ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯದ ಉದ್ದಗಲಕ್ಕೂ ಓಡಾಡುತ್ತಾ ಕೆಲಸ ಮಾಡುತ್ತಿದ್ದಾರೆ. ಅವರು ಮುಂದೇನು ಮಾಡಬೇಕೆಂದು ವರಿಷ್ಠರು ತೀರ್ಮಾನಿಸುತ್ತಾರೆ. ಅಲ್ಲಿಯವರೆಗೂ ನಾವು ಕಾಯುತ್ತೇವೆ, ನಮಗೇನು ಅವಸರವಿಲ್ಲ ಎಂದರು.

SCROLL FOR NEXT