ಮಂತ್ರಾಲಯ (ಆಂಧ್ರ ಪ್ರದೇಶ): ಕರ್ನಾಟಕದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ನಾಯಕ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರು ಕುಟುಂಬ ಸಮೇತ ಇಂದು ಗುರುವಾರ ಆಂಧ್ರಪ್ರದೇಶದಲ್ಲಿರುವ ಮಂತ್ರಾಲಯ ಸನ್ನಿಧಿಗೆ ಕುಟುಂಬ ಸಮೇತ ಭೇಟಿ ನೀಡಿ, ರಾಘವೇಂದ್ರ ಸ್ವಾಮಿಗಳ ಆರಾಧನೆ ಮಹೋತ್ಸವದಲ್ಲಿ ಪಾಲ್ಗೊಂಡರು.
ರಾಯರ ದರ್ಶನ ಪಡೆದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ವದಂತಿ ಬಗ್ಗೆ ಮಾತನಾಡಿದರು.
ಯಾರೋ ಹೇಳಿದ ತಕ್ಷಣ ಮುಖ್ಯಮಂತ್ರಿ ಬದಲಾವಣೆ ಆಗುವುದಿಲ್ಲ. ಮುಖ್ಯಮಂತ್ರಿ ಬದಲಾವಣೆ ಮಾತುಗಳು ಕೇವಲ ಊಹಾಪೋಹಗಳು. ರಾಷ್ಟ್ರೀಯ ನಾಯಕರು, ರಾಜ್ಯಾಧ್ಯಕ್ಷರೂ ಈ ವಿಚಾರದಲ್ಲಿ ಹೇಳಿದ್ದಾರೆ. ಬರುವ ಚುನಾವಣೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ನೇತೃತ್ವದಲ್ಲಿ ಎದುರಿಸುತ್ತೇವೆ ಎಂಬ ವಿಶ್ವಾಸ ನನಗಿದೆ ಎಂದರು.
ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ರಾಜ್ಯಪ್ರವಾಸ ಮಾಡುತ್ತಿದ್ದೇನೆ. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲಾಗುತ್ತಿದೆ. ಕಾರ್ಯಕರ್ತರ ಸಂಘಟನೆ ಬಲಗೊಳಿಸುತ್ತಿದ್ದೇವೆ. ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಯಡಿಯೂರಪ್ಪ ನೇತೃತ್ವದಲ್ಲಿ ಮೂರು ಪ್ರತ್ಯೇಕ ತಂಡಗಳು ರಾಜ್ಯ ಪ್ರವಾಸ ನಡೆಸಲಿವೆ. ಈ ಬಗ್ಗೆ ರಾಜ್ಯ ನಾಯಕರು ಮತ್ತು ವರಿಷ್ಠರು ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಗುರುರಾಯರ ಕ್ಷೇತ್ರದಲ್ಲಿ 351ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಎರಡು ವರ್ಷ ಕೊರೊನಾ ಪಿಡುಗು ಇದ್ದ ಕಾರಣ ಸಂಭ್ರಮದಿಂದ ಆರಾಧನಾ ಮಹೋತ್ಸವ ಆಚರಿಸಲು ಸಾಧ್ಯವಾಗಿರಲಿಲ್ಲ. ತಂದೆಯವರು ನನಗೆ ಗುರು ರಾಘವೇಂದ್ರ ರಾಯರ ಹೆಸರಿನ ನಾಮಕರಣ ಮಾಡಿದ್ದಾರೆ. ನನ್ನ ತಮ್ಮನಿಗೆ ರಾಯರ ಗುರುಗಳಾದ ವಿಜಯೇಂದ್ರರ ಹೆಸರಿಡಲಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಮತ್ತು ದೇಶದಲ್ಲಿ ಅತಿವೃಷ್ಟಿ, ಅನಾವೃಷ್ಟಿ ಸಮಸ್ಯೆ ಕಾಣಿಸಿಕೊಂಡಿದೆ. ದೇವರು ಸಮವಾದ ಫಲ ಕೊಟ್ಟಾಗ, ಪ್ರಕೃತಿ ಅನುಗ್ರಹಿಸಿದಾಗ ರೈತ ಸ್ವಾಭಿಮಾನದಿಂದ ಬದುಕಲು ಸಾಧ್ಯವಾಗುತ್ತದೆ. ಸಾಕಷ್ಟು ಮಳೆಯಾಗಿ, ಬೆಳೆನಾಶವಾಗಿದೆ. ರೈತರು ಸ್ವಾಭಿಮಾನದಿಂದ ಬದುಕು ನಡೆಸುವಂಥ ವರವನ್ನು ರಾಯರು ಕರುಣಿಸಲಿ ಎಂದು ಕೋರಿದರು.