ರಾಜಕೀಯ

ಆ.28ಕ್ಕೆ ದೊಡ್ಡಬಳ್ಳಾಪುರದಲ್ಲಿ ಜನೋತ್ಸವ: ಮುಖ್ಯಮಂತ್ರಿ ಬೊಮ್ಮಾಯಿ

Sumana Upadhyaya

ಬೆಂಗಳೂರು: ಕಳೆದ ತಿಂಗಳು ಜುಲೈಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್‌ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ರದ್ದುಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ಒಂದು ವರ್ಷದ ಜನೋತ್ಸವ ಸಮಾರಂಭ ಇದೇ ತಿಂಗಳು 28ರಂದು ನಡೆಯಲಿದೆ. 

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ವಿಚಾರ ತಿಳಿಸಿದ್ದಾರೆ. ಆಗಸ್ಟ್ 28 ಕ್ಕೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ನಡೆಸಲಾಗುವುದು‌. ಜುಲೈ 28ಕ್ಕೆ ಆಗಬೇಕಿದ್ದ ಜನೋತ್ಸವವನ್ನು ಅನಿವಾರ್ಯ ಕಾರಣಗಳಿಂದ ರದ್ದು ಮಾಡಲಾಗಿತ್ತು. 10 - 15 ದಿನಗಳಿಂದ ಈ ಭಾಗದ ಜನರ ಒತ್ತಾಯ ಹೆಚ್ಚಾಗಿದೆ. ಬೇರೆ ಕಡೆ ಸಮಾವೇಶ ಮಾಡಲು ಜನ ಒಪ್ಪಲಿಲ್ಲ. ನಾವು ಸಾಕಷ್ಟು ತಯಾರಿ ನಡೆಸಿದ್ದು ದೊಡ್ಡಬಳ್ಳಾಪುರದಿಂದಲೇ  ಜನೋತ್ಸವ ಪ್ರಾರಂಭವಾಗಬೇಕು. ಇಲ್ಲಿಂದಲೇ ಜನೋತ್ಸವ ಆರಂಭ ಆಗಲಿ ಆಗಲಿ ಎಂದು ನಮಗಿಂತಲೂ ಹೆಚ್ಚಿನ ದೃಢ ನಿರ್ಧಾರ ಅವರದಾಗಿದೆ. ಅವರ ಉತ್ಸಾಹ ನಿರ್ಣಯಕ್ಕೆ ತಲೆಬಾಗಿ ಈ ತೀರ್ಮಾನಕ್ಕೆ ಬಂದಿದ್ದೇವೆ ಎಂದರು.

ಯಡಿಯೂರಪ್ಪ ಭೇಟಿ ಮಾಡಿದ ಸಿಎಂ: ನಿನ್ನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಒತ್ತಡದ ಕಾರ್ಯಕ್ರಮ, ಸ್ವಾತಂತ್ರ್ಯೋತ್ಸವಕ್ಕೆ ತಯಾರಿ ಮಧ್ಯೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಮಾಡಿದ್ದಾರೆ. 

ಕಾಂಗ್ರೆಸ್ ನಾಯಕರ ಸಿಎಂ ಬದಲಾವಣೆ ಹೇಳಿಕೆ, ಗುಸುಗುಸು ಮಧ್ಯೆ ಈ ಭೇಟಿಗೆ ಹಲವು ರೆಕ್ಕೆಪುಕ್ಕಗಳು ಹುಟ್ಟಿಕೊಂಡಿವೆ. ಆಗಸ್ಟ್ 28ರಂದು ಹಮ್ಮಿಕೊಂಡಿರುವ ಜನೋತ್ಸವ ಸಮಾವೇಶಕ್ಕೆ ಆಹ್ವಾನಿಸಲು ಯಡಿಯೂರಪ್ಪ ಅವರನ್ನು ಸಿಎಂ ಭೇಟಿ ಮಾಡಿರುವುದಾಗಿ ತಿಳಿದುಬಂದಿದೆ. 

ಇನ್ನು ಏಳು ತಿಂಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು ಅದನ್ನು ಗಮನದಲ್ಲಿಟ್ಟುಕೊಂಡು ಜನೋತ್ಸವ ಸಮಾವೇಶವನ್ನು ಬಿಜೆಪಿ ನಡೆಸುವ ಸಾಧ್ಯತೆಯಿದೆ. ಕಾರ್ಯಕ್ರಮದಲ್ಲಿ ಕೇಂದ್ರದ ನಾಯಕರು ಭಾಗವಹಿಸಲಿದ್ದಾರೆ. ಇತ್ತೀಚೆಗೆ ದಾವಣಗೆರೆಯಲ್ಲಿ ಕಾಂಗ್ರೆಸ್ ವತಿಯಿಂದ ನಡೆದ ಸಿದ್ದರಾಮಯ್ಯನವರ ಅಮೃತ ಮಹೋತ್ಸವ ಕಾರ್ಯಕ್ರಮ ಯಶ್ವಸ್ವಿಯಾಗಿದೆ. ಇದಕ್ಕೆ ಕೌಂಟರ್ ಕೊಡಲು ಬಿಜೆಪಿ ಜನೋತ್ಸವ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸುವ ಸಾಧ್ಯತೆಯಿದೆ.

SCROLL FOR NEXT