ರಾಜಕೀಯ

ಕುಮಾರಸ್ವಾಮಿ ಮತ್ತೆ ಸಿಎಂ ಆಗುವುದು ಸೂರ್ಯ ಚಂದ್ರರಷ್ಟೇ ಸತ್ಯ; ಮಾಜಿ ಶಾಸಕರು ಏನು ಮಾಡಿದರೂ ಎಚ್.ಡಿ.ಕೆ ಯನ್ನು ಅಲುಗಾಡಿಸಲಾಗದು!

Shilpa D

ಚನ್ನಪಟ್ಟಣ: ಜಗತ್ತಿನಲ್ಲಿ ಸೂರ್ಯಚಂದ್ರರಿರುವುದು ಎಷ್ಟುಸತ್ಯವೋ ಮುಂದಿನ ಬಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದೂ ಕೂಡ ಅಷ್ಟೇ ಸತ್ಯ. ಯಾರೂ ಏನೇ ಕುತಂತ್ರ ಮಾಡಿದರೂ ಕುಮಾರಣ್ಣ ಈ ಬಾರಿ ಇಪ್ಪತ್ತಲ್ಲ ಐವತ್ತು ಸಾವಿರ ಮತಗಳ ಲೀಡ್‌ ಪಡೆದು ಜಯಭೇರಿ ಬಾರಿಸಲಿದ್ದಾರೆ ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ  ಹೇಳಿದ್ದಾರೆ.

ಚನ್ನಪಟ್ಟಣ ತಾಲೂಕಿನ ಕೂಡ್ಲೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರೈತರ ಸಾಲ ಮನ್ನಾ ಮಾಡಿ ರೈತರ ಅಭಿವೃದ್ಧಿಗಾಗಿ ಶ್ರಮಿಸುತ್ತಿದ್ದ ಕುಮಾರಸ್ವಾಮಿಯವರ ಸರ್ಕಾರವನ್ನು ಕೆಲವರೊಂದಿಗೆ ಸೇರಿ ಇಲ್ಲಿನ ಮಾಜಿ ಶಾಸಕರೊಬ್ಬರು ಕೆಡವಿದರು. ಅದರೆ, ಮುಂದಿನ ಬಾರಿ ಎಚ್‌ಡಿಕೆ ಮತ್ತೊಮ್ಮೆ ರಾಜ್ಯದ ಸಿಎಂ ಆಗಲಿದ್ದು, ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ಗೆ  ಪರೋಕ್ಷವಾಗಿ ಟಾಂಗ್‌ ನೀಡಿದರು.

ತಮ್ಮ ಭಾಷಣದುದ್ದಕ್ಕೂ ಯೋಗೇಶ್ವರ್‌ ಅವರ ಹೆಸರು ಹೇಳದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ ನಿಖಿಲ್‌ ಕುಮಾರಸ್ವಾಮಿ, ಕೆಲವರು ಕುಮಾರಸ್ವಾಮಿ ಅವರನ್ನು ಸೋಲಿಸುತ್ತೇವೆ ಎಂಬ ಭ್ರಮೆಯಲ್ಲಿದ್ದಾರೆ.ತಮ್ಮ ಕೆಲಸದಿಂದಾಗಿ ಕುಮಾರಸ್ವಾಮಿ ಅವರು ಜನರ ಮನಸ್ಸಿನಲ್ಲಿ ನೆಲೆನಿಂತಿದ್ದಾರೆ. ಈ ತಾಲೂಕಿನ ಜನರ ಹೃದಯಲ್ಲಿ ನೆಲೆ ನಿಂತಿರುವ ಕುಮಾರಸ್ವಾಮಿ ಅವರನ್ನು ಸೋಲಿಸುವುದು ಕೇವಲ ಭ್ರಮೆ. ಕಾರ್ಯಕರ್ತರ ಶಕ್ತಿ, ಜನರ ಪ್ರೀತಿ ಇರುವವರೆಗೆ ಮಾಜಿ ಶಾಸಕರು ಮಾಡುವ ಪ್ರಯತ್ನಗಳು ವಿಫಲವಾಗುತ್ತವೆ ಎಂದರು.

ಜನಪರ ಸರಕಾರವನ್ನು ಬೀಳಿಸಿ 40 ಪರ್ಸೆಂಟ್‌ ಸರಕಾರವನ್ನು ಅಧಿಕಾರಕ್ಕೆ ತಂದವರು ಏನು ಮಾಡಿದರೂ ಮುಂದಿನ ಚುನಾವಣೆಯಲ್ಲಿ ನನ್ನ ತಂದೆ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸೋಲಿಸಲು ಸಾಧ್ಯವಾಗದು. ರೈತರು ಮತ್ತು ನೊಂದವರ ಪರವಾಗಿ ಕೆಲಸ ಮಾಡುತ್ತಿದ್ದ, ಅಭಿವೃದ್ಧಿಪರವಾಗಿದ್ದ ನನ್ನ ತಂದೆಯ ಸರಕಾರವನ್ನು ವಾಮ ಮಾರ್ಗದಿಂದ ಬೀಳಿಸಿದರು ಎಂದು ಆರೋಪಿಸಿದರು.

SCROLL FOR NEXT