ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿರುವ ರಾಜ್ಯ ಕಾಂಗ್ರೆಸ್ ನಾಯಕರು, ಮುಂಬರುವ ಜನವರಿ ತಿಂಗಳಿನಲ್ಲಿ ಐದು ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಸಮಾವೇಶವನ್ನು ಆಯೋಜಿಸಲು ಮುಂದಾಗಿದೆ.
ಈ ಕುರಿತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಮಾತನಾಡಿ, ಜನವರಿ ಮೊದಲ ವಾರದಲ್ಲಿ 150 ವಿಧಾನಸಭಾ ಕ್ಷೇತ್ರಗಳಲ್ಲಿ ನಾಯಕರು ಚರ್ಚೆ ನಡೆಸಲಿದ್ದು, ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ನಿರುದ್ಯೋಗ ಮತ್ತಿತರ ಸಮಸ್ಯೆಗಳ ಕುರಿತು ದನಿ ಎತ್ತಲಿದ್ದಾರೆಂದು ಹೇಳಿದರು.
ಡಿಸೆಂಬರ್ 30 ರಂದು ವಿಜಯಪುರದಲ್ಲಿ ಕೃಷ್ಣಾ ಯೋಜನೆಗೆ ಸಂಬಂಧಿಸಿದಂತೆ ಸಮಾವೇಶಗಳು ನಡೆಯಲಿದ್ದು, ಜನವರಿ 2 ರಂದು ಹುಬ್ಬಳ್ಳಿಯಲ್ಲಿ ಮಹದಾಯಿ ವಿವಾದ ಕುರಿತು ಸಮಾವೇಶ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಚುನಾವಣೆಯಲ್ಲಿ ಗೆಲ್ಲಲು ವಾಸ್ತು ಮೊರೆ ಹೋದ ಕಾಂಗ್ರೆಸ್: 'ವಾಸ್ತು ಪ್ರಕಾರ' ಕಟ್ಟಡ ಬದಲಾವಣೆಯಿಂದ ಬದಲಾಗಲಿದ್ಯಾ ಸ್ಟಾರ್!
ಮಂಗಳವಾರ ಅಲ್ಪಸಂಖ್ಯಾತ ಸಮುದಾಯದ ಮುಖಂಡರೊಂದಿಗಿನ ಸಭೆ ಕುರಿತು ಮಾಹಿತಿ ನೀಡಿದ ಸಲೀಂ ಅವರು, ಸಭೆಯಲ್ಲಿ ಸಮುದಾಯದ ಕನಿಷ್ಠ 55 ಮುಖಂಡರು ಭಾಗವಹಿಸಿದ್ದರು, ಅಲ್ಲಿ ಅಲ್ಪಸಂಖ್ಯಾತ ಸಮುದಾಯದವರ ಹೆಸರನ್ನು ಮತದಾರರ ಪಟ್ಟಿಯಿಂದ ಅಳಿಸುವ ಬಗ್ಗೆ ಚರ್ಚೆ ನಡೆಸಲಾಯಿತು. ಮುಸ್ಲಿಂರನ್ನು ಮುಖ್ಯಮಂತ್ರಿ ಮಾಡುವ ಕುರಿತು ಯಾವುದೇ ಚರ್ಚೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು.