ರಾಜಕೀಯ

ಕೊಪ್ಪಳ ಕಾರ್ಯಕ್ರಮಕ್ಕೆ ಹೋಗುವ ಸ್ಥಿತಿಯಲ್ಲಿರಲಿಲ್ಲ, ಆದರೆ ಹೋಗಲೇಬೇಕು ಎಂಬ ಪರಿಸ್ಥಿತಿ ಬಂದಿರುವುದರಿಂದ ಹೋಗುತ್ತಿದ್ದೇ ನೆ: ಬಿ ಎಸ್ ಯಡಿಯೂರಪ್ಪ

Sumana Upadhyaya

ಬೆಂಗಳೂರು: ಕೊಪ್ಪಳದಲ್ಲಿ ನಡೆಯಲಿರುವ ಬಿಜೆಪಿ ಕಚೇರಿ ಉದ್ಘಾಟನಾ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತೆರಳುತ್ತಿದ್ದಾರೆ. ಬಿಜೆಪಿಯಲ್ಲಿ ಭಿನ್ನಮತವಿದೆ, ಯಡಿಯೂರಪ್ಪನವರನ್ನು ಬಿಜೆಪಿ ನಾಯಕರು ಮೂಲೆಗುಂಪು ಮಾಡುತ್ತಿದ್ದಾರೆ ಎಂದು ಮಾಧ್ಯಮಗಳಲ್ಲಿ ವ್ಯಾಪಕವಾಗಿ ಸುದ್ದಿಯಾಗಿದೆ.

ಈ ಬಗ್ಗೆ ಇಂದು ಕೊಪ್ಪಳಕ್ಕೆ ತೆರಳುವ ಮುನ್ನ ಸುದ್ದಿಗಾರರ ಜೊತೆ ಮಾತನಾಡಿದ ಯಡಿಯೂರಪ್ಪ, ಬಿಜೆಪಿ ಜೊತೆಗಿನ ಮುನಿಸು ವಿಚಾರವನ್ನು ತಳ್ಳಿ ಹಾಕಿದ್ದಾರೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನಾವು ಒಗ್ಗಟ್ಟಾಗಿದ್ದೇವೆ. ನನಗೆ ನನ್ನದೇ ಆದ ಶಕ್ತಿ ಇದೆ. ನಾನು ಪಕ್ಷ ಕಟ್ಟಿ ಬೆಳೆಸಿದ್ದೇನೆ ಎಂದಿದ್ದಾರೆ.

ರಾಷ್ಟ್ರೀಯ ಅಧ್ಯಕ್ಷರು ಜೆ ಪಿ ನಡ್ಡಾ ಕೊಪ್ಪಳಕ್ಕೆ ಬರುತ್ತಿದ್ದಾರೆ. ಪಕ್ಷದ ಕಾರ್ಯಕ್ರಮಕ್ಕೆ ನಾನು ಹೋಗುತ್ತಿದ್ದೇನೆ, ನಿನ್ನೆ ಬೇರೆ ಕಾರಣಕ್ಕೆ ಇವತ್ತು ಹೋಗುವ ಸ್ಥಿತಿಯಲ್ಲಿರಲಿಲ್ಲ. ಇಲ್ಲೇ ಇರಬೇಕಾಗಿತ್ತು. ಆದರೆ ಬರಲೇಬೇಕು ಎಂದು ಒತ್ತಾಯ ಮಾಡಿರುವುದರಿಂದ ಪರಿಸ್ಥಿತಿ ಬಂದಿರುವುದರಿಂದ ಕೊಪ್ಪಳಕ್ಕೆ ಹೋಗುತ್ತಿದ್ದೇನೆ, ಅಲ್ಲಿ ಮುಖ್ಯಮಂತ್ರಿಗಳೂ ಬರುತ್ತಿದ್ದಾರೆ ಎಂದರು.

ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯ, ಗೊಂದಲಗಳಿಲ್ಲ, ಇದೆಲ್ಲ ಮಾಧ್ಯಮಗಳು ಸೃಷ್ಟಿಸಿರುವ ವದಂತಿಯಷ್ಟೆ. ನಾವೆಲ್ಲಾ ಒಂದಾಗಿ ಒಟ್ಟಾಗಿದ್ದೇವೆ, ನಮ್ಮ ಮುಂದಿರುವ ಗುರಿಯೊಂದೇ ಅದು 2023ರ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿ ಗೆಲ್ಲುವುದು ಎಂದರು. 

ರಾಜ್ಯದ ಉದ್ದಗಲಕ್ಕೂ ಓಡಾಡಿ ಪಕ್ಷದ ಗೆಲುವಿಗೆ ಬೇಕಾದ ಶ್ರಮ ಹಾಕುತ್ತೇವೆ, ರಾಜ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಪರವಾದ ವಾತಾವರಣವಿದೆ. ಅಮಿತ್ ಶಾ, ಜೆ ಪಿ ನಡ್ಡಾ ಅವರ ನೇತೃತ್ವದಲ್ಲಿ ರಾಜ್ಯದಲ್ಲಿ ಹೆಚ್ಚು ಅಭಿವೃದ್ಧಿಪರ ಕಾರ್ಯಕ್ರಮಗಳು ನಡೆಯುತ್ತಿದೆ. ಇದೆಲ್ಲದರ ಪರಿಣಾಮ ಬಿಜೆಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರುತ್ತದೆ ಎಂದರು.

ಬಿಜೆಪಿಯ ಎಲ್ಲಾ ಕಾರ್ಯಕ್ರಮಗಳಿಗೂ ನಾವು ಹೋಗುತ್ತಿರುತ್ತೇನೆ. ಸರ್ಕಾರದ ಕಾರ್ಯಕ್ರಮಗಳಿದ್ದಾಗ ನಾನು ಹೋಗುವುದು ಸರಿಯಲ್ಲ, ಅದು ಬಿಟ್ಟು ಪಕ್ಷದ ಕಾರ್ಯಕ್ರಮಗಳಿಗೆಲ್ಲಾ ನಾನು ಹೋಗುತ್ತೇನೆ. ಸಾರ್ವಜನಿಕ ಸಭೆ-ಸಮಾರಂಭಗಳಿಗೆ ನನ್ನನ್ನು ಕರೆಯಬೇಕಾಗಿಲ್ಲ, ನನ್ನ ಕರ್ತವ್ಯವೆಂದು ನಾನು ಹೋಗುತ್ತೇನೆ. ಪಕ್ಷವನ್ನು ಬಲಪಡಿಸಲು ನಾನು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ ಎಂದರು.

ಯಾರು ಯಾರನ್ನೂ ಮುಗಿಸಲು, ಮೂಲೆಗುಂಪು ಮಾಡಲು ಸಾಧ್ಯವಿಲ್ಲ, ರಾಜ್ಯ ಬಿಜೆಪಿಯಲ್ಲಿ ನನ್ನದೇ ಆದ ಶಕ್ತಿಯಿದೆ. ಪಕ್ಷ ಬಲಪಡಿಸಿದ್ದೇನೆ, ಅಧಿಕಾರಕ್ಕೆ ತರಲು ಶ್ರಮ ಹಾಕಿದ್ದೇನೆ. ಇದು ರಾಜ್ಯದ ಜನತೆಗೆ ಗೊತ್ತಿದೆ, ಯಾವುದೇ ಗೊಂದಲವಿಲ್ಲ ಎಂದು ಸ್ಪಷ್ಟಪಡಿಸಿದರು. 

SCROLL FOR NEXT