ರಾಜಕೀಯ

ಕರ್ನಾಟಕ ಬಿಜೆಪಿಯಲ್ಲಿ ಯಡಿಯೂರಪ್ಪನವರು ಸರ್ವೋಚ್ಛ ನಾಯಕ, ನಮ್ಮದು ತಂದೆ-ಮಗನ ಸಂಬಂಧ: ಬಸವರಾಜ ಬೊಮ್ಮಾಯಿ

Sumana Upadhyaya

ಕೊಪ್ಪಳ: ನನ್ನ ಮತ್ತು ಬಿ ಎಸ್ ಯಡಿಯೂರಪ್ಪನವರ ಮಧ್ಯೆ ತಂದೆ-ಮಗನ ಸಂಬಂಧವಿದೆ. ಹೀಗಾಗಿ ಯಾವುದೇ ಕಾರಣಕ್ಕೂ ಅದರಲ್ಲಿ ಅಪಸ್ವರ ಬರಲು ಸಾಧ್ಯವಿಲ್ಲ, ಅವರು ಸರ್ವೋಚ್ಛ ನಾಯಕರು, ಅವರ ಮಾರ್ಗದರ್ಶನದಲ್ಲಿಯೇ ನಮ್ಮ ಪಕ್ಷದ ಕೆಲಸ-ಕಾರ್ಯಗಳು, ಕಾರ್ಯಕ್ರಮಗಳು ನಡೆಯುತ್ತವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಕೊಪ್ಪಳದಲ್ಲಿಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ತಮ್ಮ ಮತ್ತು ಯಡಿಯೂರಪ್ಪನವರ ಸಂಬಂಧ ಹಳಸಿದೆ ಎಂಬ ಸುದ್ದಿ ಶುದ್ಧ ಸುಳ್ಳು, ಹಾಗೇನಾದರೂ ಯಾರಾದರೂ ಅಂದುಕೊಂಡಿದ್ದರೆ ಅವರಿಗೆ ಭ್ರಮನಿರಸನವಾಗಲಿದೆ. ಈ ರೀತಿ ರಾಜ್ಯದ ಜನತೆಯನ್ನು ತಪ್ಪುದಾರಿಗೆಳೆಯುವ ಸುಳ್ಳು ಸುದ್ದಿಯನ್ನು ಹರಡಿಸಲು ಗೊಂದಲ ಸೃಷ್ಟಿಸಲು ಕಾಂಗ್ರೆಸ್‌ ಏನಾದರೂ ಯೋಜನೆ ಮಾಡಿದ್ದರೆ ಮುಂಬರುವ ಚುನಾವಣೆಯಲ್ಲಿ ರಾಜ್ಯದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಆದರೆ ಇಂದು ಕೊಪ್ಪಳ ಕಾರ್ಯಕ್ರಮಕ್ಕೆ ಒಲ್ಲದ ಮನಸ್ಸಿನಿಂದ ಯಡಿಯೂರಪ್ಪನವರು ಹೋಗಿದ್ದಾರೆಯೇ ಎಂಬ ಅನುಮಾನ ಕಾಡುತ್ತಿದೆ. ಕಾರ್ಯಕ್ರಮ ನಡೆಯುವ ಮುನ್ನವಾಗಲಿ, ವೇದಿಕೆಯಾಗಲಿ ಯಡಿಯೂರಪ್ಪನವರು ಸಿಟ್ಟು, ಬೇಸರದಲ್ಲಿರುವಂತೆಯೇ ಕಂಡುಬಂತು. ಗಂಭೀರವಾಗಿ ಯಾರ ಜೊತೆ ಮಾತನಾಡದೆ ಮೌನಕ್ಕೆ ಶರಣಾಗಿದ್ದರು. ಕಾರ್ಯಕ್ರಮ ವೇದಿಕೆಗೆ ಕಾರಿನಲ್ಲಿ ಮುಂದೆ ಯಡಿಯೂರಪ್ಪ, ಹಿಂದಿನ ಸೀಟಿನಲ್ಲಿ ಬೊಮ್ಮಾಯಿ, ನಳಿನ್ ಕುಮಾರ್ ಕಟೀಲ್ ಕುಳಿತು ಒಟ್ಟಿಗೆ ಹೋದರೂ ಯಡಿಯೂರಪ್ಪನವರು ಏನೂ ಮಾತನಾಡದೇ ಮೌನವಾಗಿದ್ದರು. 

SCROLL FOR NEXT