ರಾಜಕೀಯ

ಪ್ರಧಾನಿ ಮೋದಿ ರಾಜ್ಯಕ್ಕೆ ಭೇಟಿ: ಸಿಎಂ ಬೊಮ್ಮಾಯಿ ಸಭೆ, ಅದ್ಧೂರಿ ಸ್ವಾಗತ ಜೊತೆಗೆ ರೋಡ್ ಶೋಗೆ ಸಿದ್ಧತೆ

Lingaraj Badiger

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 20 ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅರಮನೆ ಮೈದಾನದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಕರೆಯಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ರಾಜ್ಯ ಪ್ರವಾಸದ ಕುರಿತ ಪೂರ್ವ ಸಿದ್ಧತೆ ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭಾಗವಹಿಸಿದ್ದರು.

ಪೂರ್ವ ಸಿದ್ಧತಾ ಸಭೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ, “ಪ್ರಧಾನಿಗಳು ಬಹಳ ದಿನಗಳ ನಂತರ ರಾಜ್ಯಕ್ಕೆ ಬರ್ತಿದ್ದಾರೆ. ಅವರು ಬೇರೆ ರಾಜ್ಯಗಳಿಗೆ ಹೋದಾಗ ಅಭೂತಪೂರ್ವ ಬೆಂಬಲ ಸಿಕ್ಕಿದೆ. ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ನಂತರ ಪ್ರವಾಸ ಕೈಗೊಂಡಿದ್ದಾರೆ. ಬಿಜೆಪಿ ಇಲ್ಲದ ಕಡೆಯೂ ದೊಡ್ಡ ಬೆಂಬಲ ಅವರಿಗೆ ಸಿಕ್ಕಿದೆ. ಮೊನ್ನೆ ತಮಿಳುನಾಡಿಗೆ ಹೋಗಿದ್ದಾಗ ಎಷ್ಟೊಂದು ಜನರು ಬೆಂಬಲ ನೀಡಿದ್ರೂ ಎಂಬುದನ್ನು ನೋಡಿದ್ದೇವೆ. ಇದೇ ರೀತಿ ಹಲವು ರಾಜ್ಯಗಳಲ್ಲೂ ಅಭೂತಪೂರ್ವ ಬೆಂಬಲ ಸಿಕ್ಕಿದೆ ಎಂದರು.

ಇದು ಮುಂದಿನ ಲೋಕಸಭಾ ಚುನಾವಣೆಯ ದಿಕ್ಸೂಚಿ. ನಮ್ಮ ರಾಜ್ಯದಲ್ಲಿ ಮುಂದೆ ಚುನಾವಣೆ ಬರ್ತಿದೆ. ಈ ವರ್ಷ ಚುನಾವಣಾ ವರ್ಷ ಕೂಡ. ಅವರ ಈ ಕಾರ್ಯಕ್ರಮವನ್ನು ನಾವು ಸದುಪಯೋಗ ಪಡಿಸಿಕೊಳ್ಳಬೇಕು. ಯಲಹಂಕದಿಂದ ಪ್ರಧಾನಿ ಬರುವಾಗ ಅಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರ್ಯಕರ್ತರಿಂದ ಸ್ವಾಗತ ಕೋರಬೇಕು ಎಂದು ಹೇಳಿದರು.

ಸಾರ್ವಜನಿಕ ಸಭೆಗೆ 50 ರಿಂದ 60 ಸಾವಿರ ಜನ ಸೇರಿಸುವ ಗುರಿ ಹೊಂದಿದ್ದೇವೆ. ಅಲ್ಲಿ ಜನರಿಗೆ ಸರ್ಕಾರದಿಂದ ಅಗತ್ಯ ವ್ಯವಸ್ಥೆ ಆಗುತ್ತದೆ. ಆದರೆ ಜನರನ್ನು ಕರೆಸುವುದು ನಿಮ್ಮ ಜವಬ್ದಾರಿ. ಹೀಗಾಗಿ ಜನರನ್ನು ಸೇರಿಸಿ ಕಾರ್ಯಕ್ರಮ ಯಶಸ್ವಿ ಮಾಡಬೇಕು. ಮತ್ತೆ ಎಲ್ಲಾದರೂ ಒಂದು ಕಡೆ ರೋಡ್ ಶೋಗೂ ಸಿದ್ದತೆ ಆಗಬೇಕು. 18ನೇ ತಾರೀಖಿನ ಒಳಗೆ ಎಲ್ಲ ರೀತಿಯ ಸಿದ್ದತೆ ಆಗಬೇಕು. ಪ್ರಧಾನಿಗಳ ಕಾರ್ಯಕ್ರಮ ಗಂಭೀರವಾಗಿ ತೆಗೆದುಕೊಂಡು, ಶ್ರಮ ವಹಿಸಿ ಜನರನ್ನು ಸೇರಿಸಬೇಕು ಎಂದು ಬೆಂಗಳೂರು ಪಕ್ಷದ ನಾಯಕರಿಗೆ ಸಿಎಂ ಬೊಮ್ಮಾಯಿ ಕರೆ ನೀಡಿದರು.

ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾದ ನಳಿನ್ ಕುಮಾರ ಕಟೀಲ್, ಸಚಿವರಾದ ಆರ್ ಅಶೋಕ್, ವಿ. ಸೋಮಣ್ಣ, ಎಸ್ ಟಿ ಸೋಮಶೇಖರ, ಡಾ. ಅಶ್ವತ್ಥ ನಾರಾಯಣ, ಎಂಟಿಬಿ ನಾಗರಾಜು, ಬೈರತಿ ಬಸವರಾಜ, ಮುನಿರತ್ನ, ಸಂಸದ ತೇಜಸ್ವಿ ಸೂರ್ಯ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಅರುಣಕುಮಾರ ಸೇರಿದಂತೆ ಬೆಂಗಳೂರು ನಗರದ ಶಾಸಕರು ಮತ್ತು ಪ್ರಮುಖ ನಾಯಕರು ಉಪಸ್ಥಿತರಿದ್ದರು.

SCROLL FOR NEXT