ಶಿವಮೊಗ್ಗ: ನನಗೆ ಮುಸ್ಲಿಮರ ವೋಟ್ ಬೇಕಾಗಿಲ್ಲ, ಮುಸ್ಲಿಮರ ಮನೆ ಬಾಗಿಲಿಗೆ ಹೋಗಿ ಮತ ಕೇಳಲ್ಲ ಎಂದು ಮಾಜಿ ಸಚಿವ ಶಾಸಕ ಕೆ ಎಸ್ ಈಶ್ವರಪ್ಪ ಗುಡುಗಿದ್ದಾರೆ.
ನಿನ್ನೆ ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ, ಹೆಚ್ ಡಿ ಕುಮಾರಸ್ವಾಮಿಯಂಥವರು ಸುಖಾ ಸುಮ್ಮನೆ ಆರ್ಎಸ್ಎಸ್ ಟೀಕಿಸ್ತಾರೆ. ಬಹುತೇಕ ಕಡೆ ನಮಗೆ ಮುಸ್ಲಿಂ ವೋಟ್ ಅಗತ್ಯ ಇಲ್ಲ, ನಾವು ಆ ವೋಟ್ಗಳನ್ನೇ ರಾಜಕಾರಣದಲ್ಲಿ ನೆಚ್ಚಿಕೊಂಡಿಲ್ಲ. ಹಾಗಂತ ಅವರ ಅಭಿವೃದ್ಧಿ ಕೆಲಸಗಳನ್ನು ಮರೆತಿಲ್ಲ, ಮುಸ್ಲಿಂರ ಪರವಾಗಿಯೂ ನಾವು ಕೆಲಸ ಮಾಡುತ್ತೇವೆ. ಆರ್ಎಸ್ಎಸ್ ಟೀಕಿಸಿದ್ರೆ ಸ್ವರ್ಗ ಸಿಗುತ್ತೆ ಅನ್ಕೊಂಡಿದ್ದಾರೆ ಎಂದು ಕಾಂಗ್ರೆಸ್, ಜೆಡಿಎಸ್ ಮೇಲೆ ಈಶ್ವರಪ್ಪ ಗುಡುಗಿದ್ದಾರೆ.
ಇದನ್ನೂ ಓದಿ: ಚಡ್ಡಿಗೆ ಬೆಂಕಿ ಬಿದ್ದರೆ ಈಶ್ವರಪ್ಪನವರ ಬುಡ ಸಿಡಿಯುತ್ತಿರುವುದೇಕೆ? ಚಡ್ಡಿಗೆ ಬಿಜೆಪಿ ಪೇಟೆಂಟ್ ಇದೆಯಾ: ಕಾಂಗ್ರೆಸ್
ಆರ್ ಎಸ್ಎಸ್ ನ್ನು ಟೀಕಿಸಿದರೆ, ಬೈದರೆ ಮುಸ್ಲಿಮರ ವೋಟುಗಳು ನಮಗೆ ಬಂದುಬಿಡುತ್ತವೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ನವರು ಅಂದುಕೊಂಡಿದ್ದಾರೆ. ಅವರ ಲೆಕ್ಕದಲ್ಲಿ ಇರಬಹುದು. ನಾವು ಬಹಳ ಕಡೆ ಮುಸ್ಲಿಮ್ ವೋಟ್ ಗಳನ್ನು ನಂಬಿಕೊಂಡಿಲ್ಲ, ಶಿವಮೊಗ್ಗದಲ್ಲಂತೂ ಇಲ್ಲವೇ ಇಲ್ಲ, ನಮ್ಮ ಅಭಿವೃದ್ಧಿ ಕೆಲಸಗಳಿಗೆ ಜನ ವೋಟ್ ಕೊಡುತ್ತಾರೆ, ಹಾಗೆಂದು ನಾವು ಮುಸ್ಲಿಮರಿಗೂ ಕೆಲಸ ಮಾಡಿಕೊಡುತ್ತೇವೆ ಎಂದರು.