ಬೆಂಗಳೂರು: ಕಾಂಗ್ರೆಸ್ ಅಭ್ಯರ್ಥಿಯಾಗಲು ಅಧಿಕೃತ ಟಿಕೆಟ್ ಹರಾಜಿಗಿಟ್ಟಿರುವ ಕೆಪಿಸಿಸಿ ಅಧ್ಯಕ್ಷರು, ಟಿಕೆಟ್ ಗಾಗಿಯೇ ಲಕ್ಷಾಂತರ ಕಟ್ಟಿಸಿಕೊಳ್ಳುವ ಮೂಲಕ ಸ್ಥಿತಿವಂತರಿಗೆ ಮಾತ್ರ ಟಿಕೆಟ್ ಎನ್ನುವ ನಿಯಮ ಜಾರಿಗೆ ತಂದಂತಿದೆ. ಸಾಮಾನ್ಯ ಕಾರ್ಯಕರ್ತರ ಪಾಡೇನು? ಎಂದು ಬಿಜೆಪಿ ಪ್ರಶ್ನಿಸಿದೆ.
ಈ ಸಂಬಂಧ ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಪಕ್ಷದ ಟಿಕೆಟ್ಗೆ ಅರ್ಜಿ ಸಲ್ಲಿಸಲು ಲಕ್ಷಾಂತರ ಕಟ್ಟಬೇಕೆಂಬ ಕಟ್ಟಪ್ಪಣೆ ಮಾಡುವ ಮೂಲಕ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಇಲ್ಲ ಎನ್ನುವ ಸಂದೇಶ ಸಾರಿದೆ. ಸಾಮಾನ್ಯ ಕಾರ್ಯಕರ್ತರು ಪೋಸ್ಟರ್ ಅಂಟಿಸಲು ಮಾತ್ರವೇ ಎಂದು ಕೇಳಿದೆ.
ಅರ್ಜಿ ಸಲ್ಲಿಸಲು ದಿನಾಂಕ ನಿಗದಿ ಪಡಿಸಿರುವ ಕೆಪಿಸಿಸಿ ಅಧ್ಯಕ್ಷರು ಅರ್ಜಿ ಸಲ್ಲಿಸದವರಿಗೆ ಟಿಕೆಟ್ ಇಲ್ಲ ಎಂದು ಈಗಲೇ ಘೋಷಣೆ ಮಾಡುವರೇ? ಅಥವಾ ಹೆಚ್ಚಿನ ದುಡ್ಡು ಕೊಡುವವರಿಗೆ ಬ್ಲಾಕ್ನಲ್ಲಿ ಮಾರಿಕೊಳ್ಳುವರೇ? ಎಂದು ಬಿಜೆಪಿ ಪ್ರಶ್ನಿಸಿದೆ.
ಜನರ ಬೆಂಬಲ ಆಮೇಲೆ ತಗೊಳ್ಳಿ ಸಿದ್ದರಾಮಯ್ಯನವರೇ, ಮೊದಲು ಡಿ. ಕೆ. ಶಿವಕುಮಾರ್ ಅವರ ಬೆಂಬಲ ತೆಗೆದುಕೊಳ್ಳಿ, ಡಿ. ಕೆ. ಶಿವಕುಮಾರ್ ಅವರ ಅಭಿಪ್ರಾಯ ಗೆಲ್ಲೋಕೆ ಸಾಧ್ಯವಿಲ್ಲದ ನೀವು, ಜನರ ಬೆಂಬಲ ಹೇಗೆ ಕೇಳ್ತೀರಿ? ಎಂದು ಬಿಜೆಪಿ ಕಿಡಿ ಕಾರಿದೆ.