ರಾಜಕೀಯ

ಬಂದವರಿಗೆಲ್ಲಾ ನಾವು ಇದೇ ಮಾತು ಹೇಳಿ ಕಳಿಸ್ತಿದ್ದೇವೆ, ಈ ಬಾರಿ ನಾವು ಓಟು ಹಾಕುವುದೇ ಇಲ್ಲ: ನಿಖಿಲ್ ಕುಮಾರಸ್ವಾಮಿಗೆ ಮಹಿಳೆಯರ ತರಾಟೆ!

Sumana Upadhyaya

ರಾಮನಗರ: ಕಳೆದ ಬಾರಿ 2019ರ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಷ್ ವಿರುದ್ಧ ಚುನಾವಣೆಗೆ ನಿಂತು ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಸೋತರು. 

ಈ ಬಾರಿ ಅವರು ತಮ್ಮ ತಾಯಿ ಅನಿತಾ ಕುಮಾರಸ್ವಾಮಿ ಶಾಸಕಿಯಾಗಿರುವ ರಾಮನಗರ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಚುನಾವಣೆಗೆ ನಿಲ್ಲುತ್ತಿದ್ದಾರೆ. ಅದಕ್ಕೆ ಕ್ಷೇತ್ರದಲ್ಲಿ ಭಾರೀ ಪ್ರಚಾರ ನಡೆಸುತ್ತಿದ್ದಾರೆ.

ರಾಮನಗರ ಜಿಲ್ಲೆ ಜೆಡಿಎಸ್ ನ ಭದ್ರಕೋಟೆ ಎಂದೇ ಹೇಳಲಾಗುತ್ತಿದೆ. ಆದರೆ ರಾಜಕೀಯದಲ್ಲಿ ಕೆಲವೊಮ್ಮೆ ಮತದಾರರ ಒಲವು ಯಾರ ಕಡೆಗಿರುತ್ತದೆ, ಹೇಗೆ ಮತಗಳು ಹಂಚಿಕೆಯಾಗುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಇಂದು ತಮ್ಮ ಬೆಂಬಲಿಗರೊಂದಿಗೆ ರಾಮನಗರದಲ್ಲಿ ಪ್ರಚಾರಕ್ಕೆ ಹೋಗಿದ್ದ ನಿಖಿಲ್ ಕುಮಾರಸ್ವಾಮಿಗೆ ಸ್ಥಳೀಯರಿಂದ ಅದರಲ್ಲೂ ಮಹಿಳೆಯರು ತರಾಟೆಗೆ ತೆಗೆದುಕೊಂಡಿದ್ದಾರೆ.

ಚರಂಡಿ, ರಸ್ತೆಯ ವ್ಯವಸ್ಥೆಯಿಲ್ಲ, ನಮಗೆ ಕುಡಿಯಲು ನೀರಿನ ವ್ಯವಸ್ಥೆಯಿಲ್ಲ, ಮನೆಯಲ್ಲಿ ಗಂಡಸರಿಲ್ಲ, ಶೌಚಾಲಯ, ಶುಚಿತ್ವದ ಸಮಸ್ಯೆಯಿದೆ. ಮೂಲಭೂತ ಸೌಕರ್ಯಗಳು ಸರಿಯಾಗಿಲ್ಲ. ನಿಮ್ಮ ತಾಯಿಯವರು ಸೌಲಭ್ಯ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆಯೇ ಹೊರತು ಮಾಡಿಕೊಟ್ಟಿಲ್ಲ. ಇಲ್ಲಿಗೆ ಯಾರು ಓಟು ಕೇಳಲು ಬಂದರೂ ಬರಬೇಡಿ ಎಂದು ನಾವು ಹೇಳುತ್ತೇವೆ. ಈ ಬಾರಿ ನಾವು ಯಾರಿಗೂ ಓಟು ಹಾಕುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.

ಅನಿತಾ ಕುಮಾರಸ್ವಾಮಿಯವರು ಬಂದು ಮೂರು ಸಲ ಗುದ್ದಲಿ ಪೂಜೆ ಮಾಡಿಬಿಟ್ಟು ಹೋಗಿದ್ದಾರೆ ಹೊರತು ಕೆಲಸವಾಗಿಲ್ಲ ಎಂದು ಆರೋಪಿಸಿದರು. ಕೊನೆಗೆ ನಿಖಿಲ್ ಕುಮಾರಸ್ವಾಮಿಯವರು ಮಹಿಳೆಯರನ್ನು ಸಮಾಧಾನಪಡಿಸಿದರು. 

SCROLL FOR NEXT