ರಾಜಕೀಯ

ವಿಧಾನಸಭಾ ಚುನಾವಣೆ: ಹಾಸನ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಲು ಭವಾನಿ ರೇವಣ್ಣ, ಸ್ವರೂಪ್ ಮುಂದು!

Manjula VN

ಹಾಸನ: ಹಾಸನ ಟಿಕೆಟ್ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಮತ್ತು ಅವರ ಸಹೋದರ ಎಚ್‌ಡಿ ರೇವಣ್ಣ ಮುಂದುವರೆದಿದ್ದು, ಇದರ ನಡುವಲ್ಲೇ ಭವಾನಿ ರೇವಣ್ಣ ಹಾಗೂ ಎಚ್‌ಪಿ ಸ್ವರೂಪ್ ಇಬ್ಬರೂ ಒಂದೇ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಭವಾನಿ ರೇವಣ್ಣ ಹಾಗೂ ಸ್ವರೂಪ್ ಇಬ್ಬರೂ ಕ್ರಮವಾಗಿ ಏಪ್ರಿಲ್ 14 ಮತ್ತು ಏಪ್ರಿಲ್ 17 ರಂದು ನಾಮಪತ್ರ ಸಲ್ಲಿಸಲಿದ್ದಾರೆಂದು ತಿಳಿದುಬಂದಿದೆ.

ನಾಮಪತ್ರ ಸಲ್ಲಿಸುವ ವೇಳೆ ಸ್ವರೂಪ್ ಅವರು, ತಮ್ಮ ಬೆಂಬಲಿಗರೊಂದಿಗೆ ಮೆಗಾ ರ್ಯಾಲಿಗಳನ್ನು ನಡೆಸಲು ಚಿಂತನೆ ನಡೆಸುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ಒಕ್ಕಲಿಗರ ಉಪಪಂಗಡವಾದ ದಾಸ ಒಕ್ಕಲಿಗ ಸಮುದಾಯದ 30,000 ಬೆಂಬಲಿಗರನ್ನು ರ್ಯಾಲಿಗೆ ಕರೆತರಲು ಸ್ವರೂಪ್ ಯೋಜಿಸುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಉಭಯ ಬಣಗಳ ನಾಯಕರು ಸರಣಿ ಸಭೆ ನಡೆಸಿ, ಜೆಡಿಎಸ್ ವಲಯದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಕಾರ್ಯತಂತ್ರ ರೂಪಿಸಿದ್ದಾರೆಂದು ತಿಳಿದುಬಂದಿದೆ.

ಭವಾನಿ ಅವರಿಗೆ ಟಿಕೆಟ್ ನೀಡುವುದನ್ನು ವಿರೋಧಿಸಿರುವ ಕುಮಾರಸ್ವಾಮಿ, ಬೃಹತ್ ಸಮಾವೇಶ ನಡೆಸುವ ಮೂಲಕ ಪ್ರತಿಪಕ್ಷಗಳ ಅಭ್ಯರ್ಥಿಗಳಿಗೆ ಹಾಗೂ ಭವಾನಿ ಬಣಕ್ಕೆ ಪ್ರಬಲ ಸಂದೇಶ ರವಾನಿಸುವಂತೆ ಸ್ವರೂಪ್ ಅವರಿಗೆ ಸೂಚಿಸಿದ್ದಾರೆಂದು ತಿಳಿದುಬಂದಿದ್ದು, ಈ ನಡುವೆ ಭವಾನಿ ಕೂಡ ಮೆಗಾ ರ್ಯಾಲಿ ನಡೆಸಲು ಮುಂದಾಗಿದ್ದಾರೆಂದು ವರದಿಗಳು ತಿಳಿಸಿವೆ.

ಹಳೇ ಮೈಸೂರು ಭಾಗದ ಹಾಸನ ಜೆಡಿಎಸ್‌ ಭದ್ರಕೋಟೆ. ಈ ಭದ್ರಕೋಟೆಯಲ್ಲಿ ಕಳೆದ ಚುನಾವಣೆಯಲ್ಲಿ ಪ್ರೀತಂ ಗೌಡ ಕಮಲ ಅರಳಿಸಿದ್ದರು. ಕಮಲ ಅರಳಿದ್ದೇ ತಡ ಪ್ರೀತಂ ಗೌಡರನ್ನು ಈ ಬಾರಿ ಸೋಲಿಸಲು ಜೆಡಿಎಸ್‌ ಪಣ ತೊಟ್ಟಿದೆ. ಆದರೆ ಚುನಾವಣೆಯ ಯುದ್ಧಕ್ಕೆ ಧುಮುಕುವ ಮೊದಲು ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಕಗ್ಗಂಟು ಮುಂದುವರಿದಿದೆ.

SCROLL FOR NEXT