ಮೈಸೂರು: ತೀವ್ರ ಕುತೂಹಲ ಕೆರಳಿಸಿರುವ ಮೈಸೂರು ಜಿಲ್ಲೆ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸೋಲಿಸಿ, ಬಿಜೆಪಿ ಅರಳಿಸುವ ನಿಟ್ಟಿನಲ್ಲಿ ಸಂಸದ ಪ್ರತಾಪ್ ಸಿಂಹ ಕಾರ್ಯೋನ್ಮುಖರಾಗಿದ್ದಾರೆ. ಗುರುವಾರ ಕ್ಷೇತ್ರದ ರಂಗಾಚಾರಿ ಹುಂಡಿ ಮತ್ತು ರಂಗನಾಥಪುರದಲ್ಲಿ ವಿ. ಸೋಮಣ್ಣ ಪರವಾಗಿ ಬಿರುಸಿನ ಮತಯಾಚಿಸಿದರು.
ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ, ಈ ಬಾರಿಯ ಚುನಾವಣೆಯಲ್ಲಿ ಸಿದ್ದರಾಮಯ್ಯರಿಗೆ ಪುಕ್ಕಲುತನ, ಭೀತಿ ಆವರಿಸಿರುವುದರಿಂದ ಸೊಸೆ, ಮೊಮ್ಮಗನನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸುತ್ತಿದ್ದಾರೆ.ಇನ್ನೂ 17 ವರ್ಷ ತುಂಬಿರದ, ಮತದಾನ ಮಾಡಲು ಅರ್ಹರಲ್ಲದ ಮೊಮ್ಮಗನನ್ನು ಚುನಾವಣಾ ಕಾರ್ಯಕ್ಕೆ ಬಳಸಿಕೊಳ್ಳುವ ಸಿದ್ದರಾಮಯ್ಯ ತಮ್ಮ ಉತ್ತರಾಧಿಕಾರಿ ಎಂದು ಜನರಿಗೆ ಸಂದೇಶ ರವಾನಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಹೈವೋಲ್ಟೇಜ್ ಕಣವಾದ ವರುಣಾ: ಸಿದ್ದರಾಮಯ್ಯ ವಿರುದ್ಧ ಸೋಮಣ್ಣ ಸ್ಪರ್ಧೆ, ಪ್ರಚಾರದ ಮೇಲೆ ನಿಗಾವಹಿಸಲು ಆಪ್ತನ ನೇಮಿಸಿದ ಅಮಿತ್ ಶಾ!
ಪ್ರತಾಪ್ ಸಿಂಹ್ ಹೇಳಿಕೆ ಪ್ರಸ್ತಾಪಿಸಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಕಾಂಗ್ರೆಸ್ಗೆ ಸೇರಿದ ಮೇಲೆ ತತ್ವ ಸಿದ್ದಾಂತಗಳನ್ನು ಅಡವಿಟ್ಟ ಸಿದ್ದರಾಮಯ್ಯನವರಿಗೆ ತವರು ಕ್ಷೇತ್ರದಲ್ಲೇ ಭಯ ಕಾಡ್ತಿದೆ. ಮೊಮ್ಮಗನನ್ನು ಮುಂದಿಟ್ಟುಕೊಂಡು ಭಾವನಾತ್ಮಕವಾಗಿ ಮತ ಸೆಳೆಯುವ ಪಯತ್ನ ವರ್ಕ್ಔಟ್ ಆಗುವುದಿಲ್ಲ. ಕುಟುಂಬ ರಾಜಕಾರಣದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಎಂದು ಪ್ರಶ್ನಿಸಿದೆ.