ಬೆಂಗಳೂರು: ಅಯೋಧ್ಯೆ ಶ್ರೀರಾಮನ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಆಹ್ವಾನಿಸಲಾಗಿದೆ. ರಾಮ ದೇಗುಲ ಅಭಿವೃದ್ಧಿ ಕಮಿಟಿಯ ಅಧ್ಯಕ್ಷ ಎನ್.ಮಿಶ್ರಾ, ಆರ್.ಎಸ್.ಎಸ್ ಹಿರಿಯ ನಾಯಕರಾದ ರಾಮ್ ಲಾಲ್ ಹಾಗೂ ವಿಹೆಚ್ ಪಿಯ ಹಿರಿಯ ನಾಯಕರಾದ ಅಲೋಕ್ ಕುಮಾರ್ ದೆಹಲಿಯ ಹೆಚ್ಡಿಡಿ ನಿವಾಸದಲ್ಲಿ ದೇವೇಗೌಡರನ್ನು ಭೇಟಿ ಮಾಡಿ ಆಹ್ವಾನ ನೀಡಿದ್ದಾರೆ. ಈ ವಿಚಾರವನ್ನು ಟ್ವೀಟ್ ಮೂಲಕ ದೇವೇಗೌಡರು ಹಂಚಿಕೊಂಡಿದ್ದಾರೆ.
ಅಯೋಧ್ಯೆಯ ರಾಮಮಂದಿರ ದೇಗುಲದ ಉದ್ಘಾಟನೆಗೆ ನನ್ನನ್ನು ಆಹ್ವಾನಿಸಲಾಗಿದೆ. ಆಹ್ವಾನ ಸ್ವೀಕರಿಸಿದ ನನಗೆ ತುಂಬಾ ಸಂತೋಷ ಆಗಿದೆ ಎಂದು ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ. ಅರ್ಧ ಶತಮಾನಕ್ಕೂ ಹೆಚ್ಚು ಕಾಲ ಅತ್ಯಂತ ಜಾತ್ಯತೀತ ನಾಯಕ ಎಂದು ಪರಿಗಣಿಸಲ್ಪಟ್ಟ ದೇವೇಗೌಡರು ಈಗ ಕೇಸರಿ ಪಾಳೆಯದ ಮಿತ್ರರಾಗಿ ರೂಪಾಂತರಗೊಂಡಿದ್ದಾರೆ. ಮುಂದಿನ ಜನ್ಮದಲ್ಲಿ ಮುಸಲ್ಮಾನನಾಗಲು ಇಚ್ಛಿಸುತ್ತೇನೆ ಎಂದು ಹೇಳುತ್ತಿದ್ದ ಗೌಡರು ಈಗ ಅಂತಹ ಆಲೋಚನೆಗಳನ್ನು ತಮ್ಮೊಳಗೆ ಅದುಮಿ ಇಟ್ಟುಕೊಳ್ಳಬೇಕಾಗಬಹುದು.
ದೇವೇಗೌಡರು ಯುಪಿ, ಪಂಜಾಬ್ ಮತ್ತು ಈಶಾನ್ಯದಲ್ಲಿ ಬೆಂಬಲಿಗರನ್ನು ಹೊಂದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ, ಸಮಾರಂಭದಲ್ಲಿ ಭಾಗವಹಿಸುವ ಸ್ಥಾನ ಪಡೆದ ಏಕೈಕ ನಾಯಕ ಅವರು. ಕೇವಲ ಬ್ರಾಹ್ಮಣ-ಬನಿಯಾ ಪಕ್ಷವಲ್ಲ ಎಂದು ಬಿಜೆಪಿ ಹೇಳಿಕೊಳ್ಳಲು ಇದು ಸಹಾಯ ಮಾಡುತ್ತದೆ ಎಂದು ದೇವೇಗೌಡರ ಆತ್ಮಚರಿತ್ರೆ ಬರೆದಿರುವ ಲೇಖಕ ಸುಗತ ಶ್ರೀನಿವಾಸರಾಜು ಅಭಿಪ್ರಾಯ ಪಟ್ಟಿದ್ದಾರೆ.
ಎಸ್.ಎಂ ಕೃಷ್ಣ ನಂತರ ಮತ್ತೊಬ್ಬ ಒಕ್ಕಲಿಗ ಪ್ರಭಾವಿ ನಾಯಕರಾದ ದೇವೇಗೌಡರು ಬಿಜೆಪಿ ಸೇರಿದ್ದಾರೆ, ಹೀಗಾಗಿ ಅವರು ಸಂಘ ಪರಿವಾರದ ಎಲ್ಲಾ ನಡವಳಿಗಳನ್ನು ಬಹಿರಂಗವಾಗಿ ಅನುಮೋದಿಸಿದ್ದಾರೆ ಎಂದು ರಾಜಕೀಯ ವಿಶ್ಲೇಶಕ ಬಿ.ಎನ್ ಮೂರ್ತಿ ಹೇಳಿದ್ದಾರೆ.
ಸುಮಾರು 40 ವರ್ಷಗಳ ಕಾಲ ಜನತಾ ಪರಿವಾರದಲ್ಲಿದ್ದು, ಈಗ ಕಾಂಗ್ರೆಸ್ನಲ್ಲೇ ಇರುವ ಮಾಜಿ ಎಂಎಲ್ಸಿ ರಮೇಶ್ಬಾಬು, ಮಾತನಾಡಿ ಈಗ ಅವರ ಸಿದ್ಧಾಂತ ಮತ್ತು ರಾಜನೀತಿ ಎಲ್ಲಿದೆ? ಅವರ ನೈಜ ವ್ಯಕ್ತಿತ್ವವನ್ನು ಅನುಕೂಲತೆಗಾಗಿ ಬಲಿಪೀಠದಲ್ಲಿ ಬಲಿಕೊಡಲಾಗಿದೆ. ಈ ನಿರ್ಧಾರದಿಂದಾಗಿ ಅವರಿಗೆ ವೈಯಕ್ತಿಕವಾಗಿ ಕೆಲವು ಪ್ರಯೋಜನಗಳು ಲಭಿಸಿವೆ. ಆದರೆ ಸರಳ ನಿವೃತ್ತಿಯು ಅವರಿಗೆ ಹೆಚ್ಚಿನ ಗೌರವವನ್ನು ನೀಡಬಹುದೆಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.
ಬಿಜೆಪಿ ಜತೆಗಿನ ಮೈತ್ರಿ ಬಳಿಕ ಪಕ್ಷ ತೊರೆದಿರುವ ಜೆಡಿಎಸ್ ರಾಷ್ಟ್ರೀಯ ಮಾಜಿ ಉಪಾಧ್ಯಕ್ಷ ಶಫೀವುಲ್ಲಾ ಸಾಹೇಬ್ ಮಾತನಾಡಿ, 25 ವರ್ಷಗಳಿಂದ ಜೆಡಿಎಸ್ ನಲ್ಲಿದ್ದು ಗೌಡರನ್ನು ವೈಯಕ್ತಿಕವಾಗಿ ಬಲ್ಲೆ. ಈ ಎಲ್ಲಾ ಘಟನೆಗಳಿಂದ ನಾನು ದುಃಖಿತನಾಗಿದ್ದೇನೆ ಮತ್ತು ಬಿಜೆಪಿಯೊಂದಿಗೆ ಮೈತ್ರಿ ಇಲ್ಲದಿದ್ದರೇ ಗೌಡರು ಚೆನ್ನಾಗಿರುತ್ತಿದ್ದರು.
ಲೋಹಿಯಾ, ಜೆಪಿ ಮತ್ತು ಜಾತ್ಯತೀತ ತತ್ವಗಳನ್ನು ಅನುಸರಿಸುವ ಅವರು ನನಗೆ ಮತ್ತು ದೇಶಾದ್ಯಂತ ಅನೇಕರಿಗೆ ಮಾರ್ಗದರ್ಶಕ ಶಕ್ತಿಯಾಗಿದ್ದರು. ಅವರು ತಮ್ಮ ಆತ್ಮಸಾಕ್ಷಿ ಜೊತೆ ಈ ಮೈತ್ರಿಗೆ ಹೋಗಿಲ್ಲ ಎಂದು ನನಗೆ ತೋರುತ್ತದೆ. ಜಾತ್ಯತೀತ ತತ್ವಗಳನ್ನು ವರಿಸಿ ವರ್ಷಗಳೇ ಕಳೆದಿರುವ ಈ ವಯಸ್ಸಿನಲ್ಲಿ ಈ ರೀತಿ ಮಾಡುತ್ತಿರುವುದು ಅಚ್ಚರಿ ಮೂಡಿಸಿದೆ.
ಯಾವುದೋ ಕಾಣದ ಕೈಗಳ ಒತ್ತಡವು ಅವರನ್ನು ಈ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಮಾಡಿದೆ ಎಂದು ತೋರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಜೆಡಿಎಸ್ಗೆ ಶೇ.20ರಿಂದ ಕೇವಲ ಶೇ.14ಕ್ಕೆ ಪಕ್ಷದವರ ಬೆಂಬಲ ಕುಸಿದಿದ್ದು, ಲೋಕಸಭೆ ಚುನಾವಣೆಯಲ್ಲಿ ಪಕ್ಷ ಯಾವ ರೀತಿಯಲ್ಲಿ ಮುನ್ನಡೆ ಸಾಧಿಸಿದೆ ಎಂಬುದನ್ನು ಬಹಿರಂಗಪಡಿಸಲಿದೆ.