ರಾಜಕೀಯ

ಅಧಿಕಾರಕ್ಕೆ ಬಂದರೆ ಹೊಸ ಗದಗ-ಬೆಟಗೇರಿ ನಿರ್ಮಾಣ: ಜೆಡಿಎಸ್ ಘೋಷಣೆ

Manjula VN

ಗದಗ: ನಿಂತ ನೀರಾಗಿದ್ದ ಗದಗ ಜಿಲ್ಲೆಯಲ್ಲಿ ಜೆಡಿಎಸ್'ಗೆ ಮರು ಜೀವ ದೊರೆತಿದ್ದು, ನಗರದಲ್ಲಿ ಭಾನುವಾರ ಜೆಡಿಎಸ್ ಪಾದಯಾತ್ರೆ ಪ್ರಾರಂಭವಾಗುವ ಮೂಲಕ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತು.

ನಗರದ ವೆಂಕಟೇಶ ಟಾಕೀಸ್ ಹತ್ತಿರದ ಲಕ್ಷ್ಮೀ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಪಾದಯಾತ್ರೆಯಲ್ಲಿ ಜೆಡಿಎಸ್ ನಾಯಕರು, ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದಿದೇ ಆದರೆ, ಕುಡಿಯುವ ನೀರು, ಹೊಸ ಗದಗ-ಬೆಟಗೇರಿ ನಿರ್ಮಾಣ, ಐಷಾರಾಮಿ ರಸ್ತೆಗಳು, ಧೂಳು ಮುಕ್ತ ಮತ್ತು ಗುಂಡಿ ಮುಕ್ತ ರಸ್ತೆಗಳು, ಕೈಗಾರಿಕಾ ಟೌನ್‌ಶಿಪ್ ಅಭಿವೃದ್ಧಿ ಮತ್ತು ರೈತರಿಗೆ ಹೈಟೆಕ್ ಮಾರುಕಟ್ಟೆ ಒದಗಿಸುವ ಭರವಸೆಗಳನ್ನು ನೀಡಿದರು.

ಜೆಡಿಎಸ್ ಮುಖಂಡ ವೆಂಕನಗೌಡ ಗೋವಿಂದಗೌಡರ ಮಾತನಾಡಿ, “ನಾವು 24X7 ಭರವಸೆ ನೀಡುವುದಿಲ್ಲ. ಆದರೆ, 1X1 ಅಂದರೆ ಪ್ರತಿನಿತ್ಯ ಒಂದು ಗಂಟೆ ನೀರು ಸರಬರಾಜು ಮಾಡುತ್ತೇವೆ. ಹೊಸ ಗದಗ-ಬೆಟಗೇರಿಯನ್ನು ನಿರ್ಮಾಣ ಮಾಡುತ್ತೇವೆ. ಪ್ರತಿ ಮನೆಗೂ ಭೇಟಿ ನೀಡಲಾಗುತ್ತಿದ್ದು, ಗದಗದಲ್ಲಿ ಹೊಸ ಬದಲಾವಣೆ ತರಲು ಮತದಾರರಿಂದ ಬೆಂಬಲವನ್ನು ಬಯಸುತ್ತಿದ್ದೇವೆ. ನಮ್ಮ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕರ್ನಾಟಕದ ಬಗ್ಗೆ ಹೊಸ ದೃಷ್ಟಿಕೋನ ಹೊಂದಿದ್ದಾರೆ ಎಂದು ಹೇಳಿದರು.

ಈ ವೇಳೆ ಗದಗ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಅಂದಾನಯ್ಯ ಕುರ್ತಕೋಟಿಮಠ ಮತ್ತಿತರರು ಉಪಸ್ಥಿತರಿದ್ದರು.

SCROLL FOR NEXT