ರಾಜಕೀಯ

ಮರಳು ಮಾಫಿಯಾದಿಂದ ಜೀವ ಬೆದರಿಕೆ: ಸೂಕ್ತ ಭದ್ರತೆಗೆ ಜೆಡಿಎಸ್ ಶಾಸಕಿ ಮನವಿ

Nagaraja AB

ಬೆಂಗಳೂರು: ಅಕ್ರಮ ಮರಳು ಮಾಫಿಯಾದಿಂದ ತಮಗೆ ಬೆದರಿಕೆ ಇದೆ ಎಂದು ದೇವದುರ್ಗ ಜೆಡಿಎಸ್ ಶಾಸಕಿ ಕರೆಮ್ಮ ನಾಯಕ್ ಗುರುವಾರ ವಿಧಾನಸಭೆಯಲ್ಲಿ ಅಳಲು ತೋಡಿಕೊಂಡರು. ತಮ್ಮ ಮೇಲೆ ಲಾರಿ ಹರಿದು ಸಾಯಿಸುತ್ತೇನೆ. ತದನಂತರ ಆರು ತಿಂಗಳಲ್ಲಿ ಉಪಚುನಾವಣೆ ನಡೆಯಲಿದೆ ಎಂದು ಮಾಜಿ ಶಾಸಕರು ತಪ್ಪು ಸಂದೇಶವನ್ನು ಕಳುಹಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಇತ್ತೀಚೆಗಷ್ಟೇ ನನ್ನ ಇಪ್ಪತ್ತೊಂದು ವರ್ಷದ ಸೋದರಳಿಯ ಅಣ್ಣನ ಮಗನ ಮೇಲೆ ಮಾಫಿಯಾ ದಾಳಿ ನಡೆದಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಆರೋಪಿಸಿದ ಅವರು, ಕ್ಷೇತ್ರದಲ್ಲಿ ಅಕ್ರಮ ಮರಳು ಗಣಿಗಾರಿಕೆ, ಮಟ್ಕಾ ಜೂಜು, ಅಕ್ರಮ ಮದ್ಯ ಮಾರಾಟ ದಂಧೆ ಜೋರಾಗಿದೆ. ಸಂಬಂಧಪಟ್ಟ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ದೂರಿದರು. 

ಪೊಲೀಸರು ಶಾಸಕರಿಗೆ ಸೂಕ್ತವಾದ ಗೌರವ ಮತ್ತು ಪ್ರೋಟೋಕಾಲ್ ಸಹ ನೀಡುತ್ತಿಲ್ಲ ಎಂದು ಹೇಳಿದ ಅವರು, ಸರಕಾರ ತನಗೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು. ಇತ್ತೀಚೆಗೆ ಯಾರೋ ಅನಾಮಧೇಯ ವ್ಯಕ್ತಿಗಳು ವಿಧಾನಸಭೆಯೊಳಗೆ ನುಗ್ಗಿ ತಮ್ಮ ಆಸದಲ್ಲಿ ಕುಳಿತ ಬಗ್ಗೆಯೂ ಅವರು ಕಳವಳ ವ್ಯಕ್ತಪಡಿಸಿದರು. ಸರಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಿದ್ದು, ಅಗತ್ಯ ಕ್ರಮ ಕೈಗೊಳ್ಳಲು ಗೃಹ ಸಚಿವರೊಂದಿಗೆ ಮಾತುಕತೆ ನಡೆಸಲಿದೆ ಎಂದು ಸ್ಪೀಕರ್ ಯು ಟಿ ಖಾದರ್ ಶಾಸಕರಿಗೆ ಭರವಸೆ ನೀಡಿದರು.

SCROLL FOR NEXT