ರಾಜಕೀಯ

ಪಕ್ಷದೊಳಗಿನ ವಿಷಯಗಳನ್ನು ಬಹಿರಂಗವಾಗಿ, ಮಾಧ್ಯಮಗಳ ಮುಂದೆ ಹೇಳಿಕೊಳ್ಳಬೇಡಿ: ಶಾಸಕರುಗಳಿಗೆ ಸಿದ್ದರಾಮಯ್ಯ ಕಿವಿಮಾತು

Sumana Upadhyaya

ಬೆಂಗಳೂರು: ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಕೆಲವು ಅತೃಪ್ತ ಶಾಸಕರು ಮುಖ್ಯಮಂತ್ರಿಗಳಿಗೆ ಸಚಿವರುಗಳ ಕಾರ್ಯವೈಖರಿ ಬಗ್ಗೆ ಪತ್ರ ಬರೆದಿದ್ದು ಭಾರೀ ಸುದ್ದಿಯಾಗಿತ್ತು. ಪಕ್ಷದೊಳಗಿನ ಅಸಮಾಧಾನಿತರ ಸಮಸ್ಯೆಗಳನ್ನು ಕೇಳಲು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯನ್ನು ನಿನ್ನೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದರು.

ಸಭೆಯಲ್ಲಿ ಏನೇನು ವಿಷಯಗಳು ಚರ್ಚೆಯಾದವು?: ಸಭೆಯಲ್ಲಿ ಶಾಸಕರ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮುಖ್ಯವಾಗಿ ಕೇಳಿದ್ದು ಅವರು ಪತ್ರ ಬರೆದಿದ್ದೇಕೆ ಮತ್ತು ಪತ್ರವನ್ನು ಬಹಿರಂಗಗೊಳಿಸಿದ್ದರಿಂದ ಸಾರ್ವಜನಿಕವಾಗಿ ಪಕ್ಷಕ್ಕೆ ಮುಜುಗರವಾಗಿದೆ ಎಂಬ ವಿಷಯ. 

ಮುಖ್ಯಮಂತ್ರಿಗಳೆಂದ ಮೇಲೆ ಕೆಲಸದ ಒತ್ತಡ ಸಾಕಷ್ಟು ಇರುತ್ತದೆ. ಇಡೀ ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳನ್ನು ನೋಡಿಕೊಳ್ಳಬೇಕಾಗುತ್ತದೆ. ಸಾಕಷ್ಟು ಆಡಳಿತಾತ್ಮಕ ಒತ್ತಡವಿದ್ದರೂ ಸಹ ತಿಂಗಳಿಗೊಮ್ಮೆ ಜಿಲ್ಲಾ ಶಾಸಕರುಗಳ ಸಭೆ ಕರೆದು ಅವರ ಕ್ಷೇತ್ರಗಳ ಸಮಸ್ಯೆಗಳನ್ನು ಆಲಿಸುತ್ತೇನೆ, ಸರ್ಕಾರದಿಂದ ಕ್ಷೇತ್ರಗಳಿಗೆ ಆಗಬೇಕಾಗಿರುವ ಕೆಲಸಗಳ ಬಗ್ಗೆ ಮಾಡಿಸಿಕೊಡುತ್ತೇನೆ ಎಂದು ಸಹ ನಿನ್ನೆಯ ಸಭೆಯಲ್ಲಿ ಸಿದ್ದರಾಮಯ್ಯ ಶಾಸಕರಿಗೆ ಭರವಸೆ ನೀಡಿದ್ದಾರೆ.

ಮಾಧ್ಯಮಗಳ ಮುಂದೆ ಹೋಗಬೇಡಿ: ಪಕ್ಷದೊಳಗೆ ಏನೇ ಅಸಮಾಧಾನವಿದ್ದರೂ ಅದನ್ನು ನನ್ನ ಬಳಿ ನೇರವಾಗಿ ಹೇಳಿಕೊಳ್ಳಿ, ಪಕ್ಷದ ವೇದಿಕೆಯೊಳಗೆ ಚರ್ಚೆ ಮಾಡಿ ಬಗೆಹರಿಸಿಕೊಳ್ಳೋಣ. ಅದನ್ನು ಬಹಿರಂಗವಾಗಿ ಮಾಧ್ಯಮಗಳ ಮುಂದೆ ಬಹಿರಂಗಪಡಿಸಬೇಡಿ ಎಂದು ಮುಖ್ಯಮಂತ್ರಿಗಳು ಶಾಸಕರಿಗೆ ಇದೇ ಸಂದರ್ಭದಲ್ಲಿ ಕಿವಿಮಾತು ಹೇಳಿದರು.

ಸಭೆಯಲ್ಲಿ ಕೆಲವು ಶಾಸಕರು ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡುವ ಸಂಬಂಧ ಚರ್ಚಿಸಿದರು. ಇನ್ನು ಕೆಲವರು ವರ್ಗಾವಣೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಮುಖ್ಯಮಂತ್ರಿಗಳಿಗೆ ಪತ್ರ ಬರೆದ ಶಾಸಕರಾದ ಬಿ ಆರ್ ಪಾಟೀಲ್ ಮತ್ತು ಇನ್ನು ಕೆಲವರು ವಿಷಾದ ವ್ಯಕ್ತಪಡಿಸಿ ಪತ್ರ ಬರೆದಿದ್ದರಿಂದ ಪಕ್ಷಕ್ಕೆ ಮುಜುಗರವಾಗುತ್ತದೆ ಎಂದು ಭಾವಿಸಿರಲಿಲ್ಲ ಎಂದರು.

ಶಾಸಕರುಗಳಿಗೆ ಏಕೆ ಲಭ್ಯವಾಗಿರಲಿಲ್ಲ ಎಂದು ಕೇಳಿದಾಗ, ತಾವು ಬಜೆಟ್ ತಯಾರಿ ಮತ್ತು ವಿರೋಧ ಪಕ್ಷ ಸಭೆಯಲ್ಲಿ ಬ್ಯುಸಿಯಾಗಿದ್ದೆ. 5 ಗ್ಯಾರಂಟಿ ಯೋಜನೆಗಳಿಂದ ಸರ್ಕಾರಕ್ಕೆ 58 ಸಾವಿರ ಕೋಟಿ ರೂಪಾಯಿ ಹೊರೆಯಾಗಬಹುದೆಂದು ಅಂದಾಜಿಸಲಾಗಿತ್ತು. ಹೀಗಾಗಿ ಬಜೆಟ್ ನ್ನು ಬಹಳ ಜಾಗ್ರತೆಯಿಂದ ತಯಾರಿಸಬೇಕಾಗಿತ್ತು. 5 ಗ್ಯಾರಂಟಿ ಯೋಜನೆಗಳಿಗೆ ಹಣವನ್ನು ಮೀಸಲಿಡಬೇಕಾಗಿತ್ತು. ಹೀಗಾಗಿ ನಾನೇ ಖುದ್ದು ಬಜೆಟ್ ತಯಾರಿಯಲ್ಲಿ ಆಸಕ್ತಿ ವಹಿಸಿದ್ದೆ. ಬೇರೆ ವಿಷಯಗಳ ಬಗ್ಗೆ ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಅಧಿವೇಶನ ಮಧ್ಯಭಾಗದಲ್ಲಿ ವಿರೋಧ ಪಕ್ಷ ನಾಯಕರ ಸಭೆಯನ್ನು ಕರೆಯಲಾಗಿತ್ತು. ಸಭೆ ಮುಗಿದ ತಕ್ಷಣ ನಮ್ಮ ನಾಯಕರು ಶಾಸಕರು ಮತ್ತು ಸಚಿವರುಗಳ ಸಭೆ ಕರೆಯಲು ನಿರ್ಧರಿಸಿದರು ಎಂದು ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಬಿಜೆಪಿ ಮತ್ತು ಸಂಘ ಪರಿವಾರ ಕಾರ್ಯತಂತ್ರಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅವುಗಳನ್ನು ಸಮರ್ಥವಾಗಿ ಎದುರಿಸಲು ಸಿದ್ದರಾಮಯ್ಯ ಶಾಸಕರಿಗೆ ಕಿವಿಮಾತು ಹೇಳಿದರು. ಲೋಕಸಭಾ ಚುನಾವಣಾ ಅಧಿಸೂಚನೆಗೆ ಕೇವಲ ಏಳು ತಿಂಗಳಷ್ಟೇ ಬಾಕಿಯಿರುವುದರಿಂದ ಇದು ಮುಖ್ಯವಾಗಿದೆ. ಐದು ಖಾತರಿಗಳ ಯಶಸ್ಸಿನಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದಾರೆ. ಪ್ರತಿಯೊಬ್ಬ ಶಾಸಕರು ಜಾಗರೂಕರಾಗಿರಬೇಕು. ಬಿಜೆಪಿಯವರ ಸುಳ್ಳಿನ ಕಪಿಮುಷ್ಟಿಯಾಗಬಾರದು ಎಂದು ಅವರು ಹೇಳಿದರು. 

ಶೇಕಡಾ 96ಕ್ಕಿಂತ ಹೆಚ್ಚು ಜನರು ಎಲ್ಲಾ ಜಾತಿ, ಧರ್ಮ ಮತ್ತು ವರ್ಗಗಳಿಗೆ ಸಂಬಂಧಿಸಿದ ಯೋಜನೆಗಳನ್ನು ಸ್ವಾಗತಿಸಿದ್ದಾರೆ. ಜನರ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಸುಳ್ಳು ಮತ್ತು ನಕಲಿ ವಿಡಿಯೋಗಳನ್ನು ಸೃಷ್ಟಿಸುತ್ತಿದೆ ಎಂಬ ವಿಚಾರ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಚರ್ಚೆಯಾಗಿದೆ. 

SCROLL FOR NEXT