ಮೈಸೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಚುನಾವಣಾ ರಾಜಕೀಯದಿಂದ ನಿವೃತ್ತಿ ಘೋಷಿಸಿದ್ದರೂ, ಮಲೆ ಮಹದೇಶ್ವರ ಬೆಟ್ಟದಲ್ಲಿ ಬುಧವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಯಾತ್ರೆಯ ಉದ್ಘಾಟನಾ ಸಮಾರಂಭದಲ್ಲಿ ಸ್ಟಾರ್ ಪ್ರಚಾರಕರಾಗಿ ಮಿಂಚಿದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತಿತರ ಪ್ರಮುಖ ನಾಯಕರು ವೇದಿಕೆಯಲ್ಲಿದ್ದರೂ ಸಮಾರಂಭದಲ್ಲಿ ಸಾಕಷ್ಟು ಮಂದಿ ಯಡಿಯೂರಪ್ಪ ಪರ ಜೈಕಾರ ಕೂಗಿದರು. ಈ ಕೂಗು ಮುಗಿಲು ಮುಟ್ಟಿವಂತಿತ್ತು. ನಂತರ ಯಡಿಯೂರಪ್ಪ ಅವರೇ ನಡ್ಡಾ ಅವರ ಮಾತುಗಳನ್ನು ಆಲಿಸುವಂತೆ ನೆರೆದಿದ್ದ ಜನರ ಬಳಿ ಮನವಿ ಮಾಡಿಕೊಳ್ಳುವಂತಾಗಿತ್ತು.
ಆದರೂ ಜನರು ಯಡಿಯೂರಪ್ಪ ಪರ ಜೈಕಾರವನ್ನು ಮುಂದುವರೆಸಿದರು. ಈ ವೇಳೆ ಯಡಿಯೂರಪ್ಪ ಅವರು ಭಾಷಣ ಮಾಡುತ್ತಾರೆಂದು ಹೇಳಿ ಸಮಾಧಾನ ಪಡಿಸಲಾಯಿತು.
ಇದನ್ನೂ ಓದಿ: ಯಡಿಯೂರಪ್ಪ ಹಾಸಿಗೆ ಹಿಡಿದಿದ್ದರಾ? ಅಡ್ವಾಣಿ ಅವರಂತೆ ಚುನಾವಣೆ ನಂತರ ಸಂಪೂರ್ಣವಾಗಿ ಬದಿಗೊತ್ತಲಿದೆ: ಎಂಬಿ ಪಾಟೀಲ್
ಬಳಿಕ ಮೈಕ್ ಹಿಡಿದ ಯಡಿಯೂರಪ್ಪ ಅವರು, ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಯಾವುದೇ ನಾಯಕರಿಲ್ಲದ ಕಾಂಗ್ರೆಸ್ ಏಪ್ರಿಲ್/ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಭ್ರಮೆಯಲ್ಲಿದೆ. ಆದರೆ, ನಮ್ಮ ಪಕ್ಷ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಬಲಿಷ್ಠವಾಗಿದೆ ಎಂದು ಹೇಳಿದರು.
ಇದೇ ವೇಳೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯಕ್ರಮಗಳನ್ನು ಜನರ ಮನೆ ಬಾಗಿಲಿಗೆ ಕೊಂಡೊಯ್ಯುವಂತೆ ಪಕ್ಷದ ಕಾರ್ಯಕರ್ತರಿಗೆ ಮನವಿ ಮಾಡಿದರು.