ರಾಜಕೀಯ

ಆರೋಪ ಮಾಡುವ ಮೂಲಕ ತನ್ನ ಪಾಪ ತೊಳೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ: ಸಿಎಂ ಬೊಮ್ಮಾಯಿ

Manjula VN

ಹುಬ್ಬಳ್ಳಿ: ಬೇರೆಯವರ ಮೇಲೆ ಸುಳ್ಳು ಆರೋಪ ಮಾಡುವ ಮೂಲಕ ಅಧಿಕಾರದಲ್ಲಿದ್ದಾಗ ತಾನು ಮಾಡಿದ ಪಾಪವ ತೊಳೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗುರುವಾರ ಹೇಳಿದರು.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರ ಭ್ರಷ್ಟಾಚಾರ ಪ್ರಕರಣದ ಬಗ್ಗೆ ಕಾಂಗ್ರೆಸ್ ನಾಯಕರು ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ, ಆದರೆ ಅವರ ಪಕ್ಷ ಅಧಿಕಾರದಲ್ಲಿದ್ದಾಗ ಇಂತಹ ಹಲವಾರು ಪ್ರಕರಣಗಳು ವರದಿಯಾಗಿವೆ. ಅದನ್ನು ಜನರು ಮರೆತಿಲ್ಲ ಎಂದು ಹೇಳಿದರು.

ಇಂತಹ 59 ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವಹಿಸಿ ತನಿಖೆ ನಡೆಸಲು ರಾಜ್ಯ ಸರ್ಕಾರ ಈಗಾಗಲೇ ಸೂಚಿಸಿದ್ದು, ಸತ್ಯಾಂಶ ಹೊರಬರಲಿದೆ. ಮಾಡಾಳ್ ಅವರ ಪ್ರಕರಣ ನ್ಯಾಯಾಲಯದ ಮುಂದಿದ್ದು, ಪ್ರಕರಣದ ತನಿಖೆಗೆ ಲೋಕಾಯುಕ್ತರಿಗೆ ಮುಕ್ತ ಹಸ್ತವನ್ನು ನೀಡಲಾಗಿದೆ. ನ್ಯಾಯಯುತ ತನಿಖೆಯನ್ನು ಖಚಿತಪಡಿಸಿಕೊಳ್ಳುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು

ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇಗೆ ಕ್ರೆಡಿಟ್‌ ಪಡೆದುಕೊಳ್ಳಲು ಕಾಂಗ್ರೆಸ್ ಯತ್ನಿಸುತ್ತಿರುವ ಕುರಿತ ಪ್ರಶ್ನೆಗೆ ಉತ್ತರಿಸಿ, ಕಾಮಗಾರಿ ಆರಂಭದ ಬಗ್ಗೆ ಹಣ ಬಿಡುಗಡೆ ಬಗ್ಗೆ ದಾಖಲೆಗಳಿವೆ. ಇವರು ಪ್ರಸ್ತಾವನೆ ಕಳುಹಿಸಿದ ಬಗ್ಗೆ ಮಾತನಾಡುತ್ತಾರೆ. ಪ್ರಸ್ತಾವನೆ ಇರುವುದು 20 ವರ್ಷಗಳಿಂದ ಅದು ಇವತ್ತಿನದ್ದಲ್ಲ. ಸಿದ್ದರಾಮಯ್ಯ ಸರ್ಕಾರಕ್ಕಿಂತಲೂ ಮುಂಚೆಯೇ ಪ್ರಸ್ತಾವನೆ ಇತ್ತು. ನೈಸ್ ರೋಡ್ ಪ್ರಸ್ತಾವನೆ ಫೇಲ್ ಆದಾಗ ಇದು ಮತ್ತೆ ಮುನ್ನಲೆಗೆ ಬಂತು. ಇದರ ಇತಿಹಾಸ ಗೊತ್ತಿದ್ದವರಿಗೆ ಗೊತ್ತು. ಎಲ್ಲರೂ ಇತಿಹಾಸ ಮರೆತಿದ್ದಾರೆ ಎಂದು ಕಾಂಗ್ರೆಸ್ ತಿಳಿದಿದೆ ಅಷ್ಟೇ ಎಂದರು.

SCROLL FOR NEXT