ರಾಜಕೀಯ

ಮುಸ್ಲಿಮರ ಶೇ. 4 ರಷ್ಟು ಮೀಸಲಾತಿ ರದ್ದು- ಗುಬ್ಬಿ ರೋಡ್ ಶೋನಲ್ಲಿ ಅಮಿತ್ ಶಾ ಹೇಳಿದ್ದು ಹೀಗೆ..

Nagaraja AB

ಗುಬ್ಬಿ: ಮೇ 10 ರಂದು ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಗುಬ್ಬಿ ವಿಧಾನಸಭಾ ಕ್ಷೇತ್ರದಲ್ಲಿ ಸೋಮವಾರ ಅಬ್ಬರದ ರೋಡ್ ಶೋ ನಡೆಸಿದ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ಮಾರ್ಗದುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಜನರತ್ತ ಕೈ ಬೀಸುತ್ತಾ, ಅವರಿಂದ ಬೆಂಬಲವನ್ನು ಕೋರಿದರು.

ತುಮಕೂರು ಸಂಸದ ಜಿ ಎಸ್ ಬಸವರಾಜ್ ಮತ್ತಿತರ ಮುಖಂಡರೊಂದಿಗೆ ವಿಶೇಷವಾಗಿ ವಿನ್ಯಾಸಗೊಳಿಸಿದ ತೆರೆದ ವಾಹನದಲ್ಲಿ ನಿಂತಿದ್ದ ಅಮಿತ್ ಶಾ ಅವರನ್ನು ರಸ್ತೆ ಬದಿ ಹಾಗೂ ಸಮೀಪದ ಕಟ್ಟಡಗಳ ಮೇಲೆರುವ ಮೂಲಕ ಜನರು ಅದ್ದೂರಿಯಾಗಿ ಸ್ವಾಗತಿಸಿದರು. 

ಸಹಸ್ರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು, ಡೋಲಿನ ಸದ್ದಿನೊಂದಿಗೆ ಬಿಜೆಪಿ ಧ್ವಜ ಹಿಡಿದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಪರ ಘೋಷಣೆ ಮೊಳಗಿಸುತ್ತಾ ತೆರೆದ ವಾಹನದ ಜೊತೆಗೆ ಹೆಜ್ಜೆ ಹಾಕಿದರು. ಈ ಸಂದರ್ಭದಲ್ಲಿ ಮಾತನಾಡಿದ ಅಮಿತ್ ಶಾ, ಬಿಜೆಪಿ ಅಭ್ಯರ್ಥಿಗೆ ಮತ ನೀಡಿ, ಮೋದಿ ನಾಯಕತ್ವದಲ್ಲಿ "ಡಬಲ್ ಇಂಜಿನ್ ಸರ್ಕಾರ" ಅಧಿಕಾರಕ್ಕೆ ಬರುವಂತೆ ಮತ ಚಲಾಯಿಸುವಂತೆ ಜನರನ್ನು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರ್ನಾಟಕಕ್ಕಾಗಿ ಸಾಕಷ್ಟು ಕೆಲಸ ಮಾಡಿದ್ದಾರೆ ಎಂದ ಅವರು, ಬಿಜೆಪಿ ಸರ್ಕಾರವು ಶೇ.4 ರಷ್ಟಿದ್ದ ಮುಸ್ಲಿಂ ಮೀಸಲಾತಿಯನ್ನು ರದ್ದುಗೊಳಿಸಿದ್ದು, ಒಕ್ಕಲಿಗರು, ಲಿಂಗಾಯತರು ಮತ್ತು ಎಸ್‌ಸಿ, ಎಸ್‌ಟಿಗಳ ಕೋಟಾವನ್ನು ಹೆಚ್ಚಿಸಿದೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೆ ಮುಸ್ಲಿಮರ ಮೀಸಲಾತಿ ಜಾರಿಗೆ ತರುತ್ತಾರೆ. ಮತ್ತೆ ಮುಸ್ಲಿಮರಿಗೆ ಶೇ. 4 ರಷ್ಟು ಕೋಟಾ ಬೇಕಾ ಎಂದು ಮತದಾರರನ್ನು ಕೇಳಿದರು. 

ಅಡಿಕೆ ರೈತರ ಅನುಕೂಲಕ್ಕಾಗಿ ಬಿಜೆಪಿ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಎತ್ತಿ ಹಿಡಿದ ಶಾ, ಕರ್ನಾಟಕದಲ್ಲಿ ಡಬಲ್ ಇಂಜಿನ್ ಸರ್ಕಾರ ಅಧಿಕಾರಕ್ಕೆ ಬರುವುದನ್ನು ಖಚಿತಪಡಿಸಿದರೆ ಮೋದಿ ಜಿ ಮತ್ತೊಮ್ಮೆ 2024 ರಲ್ಲಿ ಪ್ರಧಾನಿಯಾಗುತ್ತಾರೆ ಎಂದು ಹೇಳಿದರು. 

SCROLL FOR NEXT