ಸಚಿವ ಆರ್ ವಿ ದೇಶಪಾಂಡೆ (ಸಂಗ್ರಹ ಚಿತ್ರ) 
ರಾಜಕೀಯ

9ನೇ ಬಾರಿಗೆ ಗೆದ್ದರೆ ದಾಖಲೆ; ಮುಖ್ಯಮಂತ್ರಿ ಹುದ್ದೆಗಾಗಿ ಹೋರಾಡುವ ವ್ಯಕ್ತಿ ನಾನಲ್ಲ: ಆರ್‌ವಿ ದೇಶಪಾಂಡೆ

ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ 9 ಬಾರಿ ಗೆದ್ದ ದಾಖಲೆ ನಿರ್ಮಿಸುವ ಗುರಿ ಹೊಂದಿರುವ ಹಿರಿಯ ಕಾಂಗ್ರೆಸ್ ನಾಯಕ ಆರ್‌ವಿ ದೇಶಪಾಂಡೆ, ನಾನು ಮುಖ್ಯಮಂತ್ರಿ ಹುದ್ದೆಗಾಗಿ ಹೋರಾಡುವ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.

ಹಳಿಯಾಳ: ಈ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಕರ್ನಾಟಕದಲ್ಲಿ 9 ಬಾರಿ ಗೆದ್ದ ದಾಖಲೆ ನಿರ್ಮಿಸುವ ಗುರಿ ಹೊಂದಿರುವ ಹಿರಿಯ ಕಾಂಗ್ರೆಸ್ ನಾಯಕ ಆರ್‌ವಿ ದೇಶಪಾಂಡೆ ಇದು ಅವರ ಕೊನೆಯ ಚುನಾವಣೆಯಾಗಿರಬಹುದು ಮತ್ತು ಅವರು ಮುಖ್ಯಮಂತ್ರಿ ಹುದ್ದೆಗಾಗಿ ಹೋರಾಡುವ ವ್ಯಕ್ತಿಯಲ್ಲ ಎಂದು ಹೇಳಿದ್ದಾರೆ.

ರಾಜ್ಯದ ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ದೇಶಪಾಂಡೆ (76) ಸತತ ಒಂಬತ್ತನೇ ಭಾರಿಗೆ ಸ್ಪರ್ಧಿಸುತ್ತಿರುವ ಹಿರಿಯ ನಾಯಕರಾಗಿದ್ದಾರೆ.

ರಾಜ್ಯದಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಗೆಲುವು ಸಾಧಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದಾಖಲೆಯನ್ನು ಸರಿಗಟ್ಟಿದ್ದಾರೆ.

ದೇಶಪಾಂಡೆ ಮೂಲತಃ ಕಾಂಗ್ರೆಸ್ಸಿಗರಲ್ಲ. 1999ರಲ್ಲಿ ಜನತಾ ಪರಿವಾರದಿಂದ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಅಲ್ಲಿಯವರೆಗೆ ಜನತಾ ಪರಿವಾರದಿಂದ ನಾಲ್ಕು ಚುನಾವಣೆಗಳಲ್ಲಿ ವಿಧಾನಸಭೆಗೆ ಆಯ್ಕೆಯಾಗಿದ್ದರು.

ಪಿಟಿಐಗೆ ನೀಡಿದ ಸಂದರ್ಶನದಲ್ಲಿ ದೇಶಪಾಂಡೆ, 'ಖರ್ಗೆ ಮತ್ತು ನಾನು ಎಂಟು ಬಾರಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದೇವೆ. ಈ ಬಾರಿ ಗೆದ್ದರೆ ಸದನದಲ್ಲಿ ದಾಖಲೆಯಾಗಲಿದೆ. ಈವರೆಗೂ, ಒಂಬತ್ತು ಬಾರಿ ಯಾರೂ ಗೆದ್ದಿಲ್ಲ' ಎನ್ನುತ್ತಾರೆ.

ಹಿರಿಯ ನಾಯಕನಾಗಿದ್ದರೂ ಸಿಎಂ ಹುದ್ದೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಏಕೆ ಸ್ಥಾನ ಪಡೆದಿಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಅತ್ಯಂತ ಶಿಸ್ತಿನ ಮನುಷ್ಯ ಎಂಬ ಕಾರಣಕ್ಕೆ ನಾನು ಯಾವುದೇ ರೇಸ್‌ನಲ್ಲಿ ಇಲ್ಲ. ಸಿಎಂ ಆಗುವ ಆಸೆ ಇರಬಹುದು. ಆದರೆ, ಅದಕ್ಕಾಗಿ ಜಗಳವಾಡಬಾರದು' ಎಂದು ಹೇಳುತ್ತಾರೆ. 

ಮೇ 10 ರಂದು ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಪಕ್ಷವು ಗೆದ್ದರೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಾಂಗ್ರೆಸ್ ಹಿರಿಯ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಪೈಪೋಟಿ ನಡೆಸುತ್ತಿದ್ದಾರೆ ಎಂಬುದನ್ನು ಅವರು ನಿರಾಕರಿಸಿದರು.

'ಅವರಿಗೊಂದು ಆಸೆ ಇದೆ. ನನಗೆ ಆಫರ್ ಬಂದರೆ, ನನಗೂ ಆಸೆ ಇರುತ್ತದೆ. ಆದರೆ, ಆ ಹುದ್ದೆಗಾಗಿ ಹೋರಾಡುವವರಲ್ಲಿ ಕೊನೆಯ ವ್ಯಕ್ತಿ ನಾನಾಗಿರುತ್ತೇನೆ. ರಾಮಕೃಷ್ಣ ಹೆಗಡೆಯಿಂದ ಇಲ್ಲಿಯವರೆಗೆ ಎಂಟು ಮುಖ್ಯಮಂತ್ರಿಗಳೊಂದಿಗೆ ಕೆಲಸ ಮಾಡಿದ್ದೇನೆ. ಬಳ್ಳಾರಿಯಲ್ಲಿ ಗಣಿಗಾರಿಕೆ ಮಾಫಿಯಾ ವಿರುದ್ಧ ಪಾದಯಾತ್ರೆ ನಡೆಸಿದ್ದೇನೆ. ಕ್ರೆಡಿಟ್ ತೆಗೆದುಕೊಳ್ಳಲು ನನಗೆ ಸಾಕಷ್ಟು ವಿಷಯಗಳಿವೆ' ಎಂದು ದೇಶಪಾಂಡೆ ಹೇಳಿದರು.

ಮುಖ್ಯವಾಗಿ ಸಂವಿಧಾನದ ಪ್ರಕಾರ ಸಿಎಂ ಯಾರಾಗಬೇಕು ಎಂಬುದು ಶಾಸಕಾಂಗ ಪಕ್ಷ ಮತ್ತು ಹೈಕಮಾಂಡ್‌ಗೆ ಬಿಟ್ಟ ವಿಚಾರ ಎಂದರು.

'ಬಹುಶಃ ಇದು ನನ್ನ ಕೊನೆಯ ಚುನಾವಣೆಯಾಗಿರಬಹುದು. ದೇವರು ಮತ್ತು ಮತದಾರರು ಸಹಾಯ ಮಾಡಿದರೆ, ಈ ಭಾರಿಯ ಗೆಲವು ದಾಖಲೆಯಾಗಬಹುದು. ರಾಜಕೀಯ ಭಾಷಣವು ತುಂಬಾ ಕೆಳಮಟ್ಟಕ್ಕೆ ಬಿದ್ದಿರುವುದರಿಂದ ಪ್ರಸ್ತುತ ರಾಜಕೀಯಕ್ಕೆ ಹೊಂದಿಕೊಳ್ಳುವುದು ಕಷ್ಟ' ಎಂದು ಅವರು ಹೇಳುತ್ತಾರೆ.

ಹಳಿಯಾಳ ವಿಧಾನಸಭಾ ಕ್ಷೇತ್ರದಿಂದ ದೇಶಪಾಂಡೆ ಸ್ಪರ್ಧಿಸುತ್ತಿದ್ದು, ಬಿಜೆಪಿ ಸುನೀಲ್ ಹೆಗಡೆ ಅವರನ್ನು ಕಣಕ್ಕಿಳಿಸಿದ್ದರೆ, ಎಸ್‌ಎಲ್ ಘೋಟ್ನೇಕರ್ ಜೆಡಿಎಸ್ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದಾರೆ.

ಆಮ್ ಆದ್ಮಿ ಪಕ್ಷ ಗುರುದೀಪ್ ಸಿಂಗ್ ಸಂಧು ಅವರನ್ನು ಕಣಕ್ಕಿಳಿಸಿದೆ. 1.75 ಲಕ್ಷ ಮತದಾರರನ್ನು ಹೊಂದಿರುವ ಹಳಿಯಾಳ ವಿಧಾನಸಭಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಮರಾಠಿ ಭಾಷಿಕ ಜನಸಂಖ್ಯೆಯೇ ನಿರ್ಣಾಯಕ.

ಕಾಂಗ್ರೆಸ್‌ನಿಂದ ಜೆಡಿಎಸ್ ಸೇರಿರುವ ಮಾಜಿ ಎಂಎಲ್‌ಸಿ ಘೋಟ್ನೇಕರ್ ಅವರು ಮರಾಠಾ ಜನಾಂಗದವರಾಗಿದ್ದು, ಮತದಾರರು ಯಾರತ್ತ ಒಲವು ತೋರಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಬಿಜೆಪಿ ಕೂಡ ದೇಶಪಾಂಡೆ ಅವರನ್ನು ಸೋಲಿಸಲು ಹರಸಾಹಸ ಮಾಡುತ್ತಿದೆ.

ನನ್ನ ಎಲ್ಲಾ ಚುನಾವಣೆಗಳಲ್ಲಿ ಮರಾಠರು ನನ್ನನ್ನು ಬೆಂಬಲಿಸಿದ್ದಾರೆ. ಈ ಹಿಂದೆ ಮರಾಠಾ ಅಭ್ಯರ್ಥಿಗಳು ಈ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ, ಅವರು ಖಂಡಿತವಾಗಿಯೂ ಕಾಂಗ್ರೆಸ್‌ಗೆ ಮತ ಹಾಕುತ್ತಾರೆ ಮತ್ತು ನಾನು ಮಾಡಿದ ಕೆಲಸಕ್ಕೆ ಮತ ಹಾಕುತ್ತಾರೆ ಎಂದು ನನಗೆ ವಿಶ್ವಾಸವಿದೆ. ಕಾಂಗ್ರೆಸ್ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಲಿದೆ ಎಂದು ದೇಶಪಾಂಡೆ ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನರವಾಣೆ ಪುಸ್ತಕಕ್ಕೆ ಹೆದರಿ ಮೋದಿ ಲೋಕಸಭೆಗೆ ಗೈರು, ಭದ್ರತಾ ಕಾರಣದಿಂದ ಅಲ್ಲ: ರಾಹುಲ್ ಗಾಂಧಿ

'ಮತದಾರರ ತೀವ್ರ ಪರಿಷ್ಕರಣೆ ವಿಚಾರದಲ್ಲಿ ಯಾವುದೇ ರೀತಿಯ ಅಡಚಣೆಗೆ ಅವಕಾಶ ನೀಡಲ್ಲ': ಮಮತಾ ಸರ್ಕಾರಕ್ಕೆ 'ಸುಪ್ರೀಂ' ಶಾಕ್

Sensex 485, Nifty 173 ಅಂಕ ಏರಿಕೆ, ಟೈಟನ್ ಷೇರು ಮೌಲ್ಯ ಶೇ.3%, ಅಲ್ಟ್ರಾಟೆಕ್ ಷೇರು ಮೌಲ್ಯ ಶೇ.2%ರಷ್ಟು ಏರಿಕೆ!

ಮೆಟ್ರೋ ಪ್ರಯಾಣ ದರ ಏರಿಕೆ ತಡೆದಿದ್ದು ನಾವೇ, ಕೇಂದ್ರ ಸರ್ಕಾರದ ಪಾತ್ರ ಇಲ್ಲ: DCM DK Shivakumar

ಸಂಸತ್ತಿನಲ್ಲಿ ಕೋಲಾಹಲ: ರಾಜ್ಯಸಭೆಯಲ್ಲಿ ಪ್ರತಿಪಕ್ಷಗಳಿಂದ ಸಭಾತ್ಯಾಗ; ಲೋಕಸಭೆ ನಾಳೆಗೆ ಮುಂದೂಡಿಕೆ

SCROLL FOR NEXT