ರಾಜಕೀಯ

ರಾಜ್ಯಾದ್ಯಂತ ಜನರ ಚಿತ್ತ ಬಿಜೆಪಿಯತ್ತ, ಕಮಲ ಅರಳಿಸಲು ಸಜ್ಜು: ಪ್ರಧಾನಿ ಮೋದಿ

Nagaraja AB

ನಂಜನಗೂಡು: ರಾಜ್ಯಾದ್ಯಂತ ಜನರ ಚಿತ್ತ ಬಿಜೆಪಿಯತ್ತ ಹೊರಳಿದ್ದು, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕಮಲ ಅರಳಿಸಲು ಸಜ್ಜಾಗಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ವ್ಯಕ್ತಪಡಿಸಿದ್ದಾರೆ.

ದಕ್ಷಿಣ ಕಾಶಿ ನಂಜನಗೂಡಿನಲ್ಲಿಂದು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾಷಣದುದ್ದಕ್ಕೂ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಯೋಗ, ಆಯುರ್ವೇದ ಅಥವಾ ಭಾರತೀಯ ಮಸಾಲೆಗಳಾಗಲಿ, ಅವುಗಳನ್ನು ಜನಪ್ರಿಯಗೊಳಿಸಲು ಕಾಂಗ್ರೆಸ್ ಎಂದಿಗೂ ಏನನ್ನೂ ಮಾಡಲಿಲ್ಲ. ನಾವು ಈ ದೃಷ್ಟಿಯನ್ನು ಬದಲಾಯಿಸಿದ್ದು, ಫಲಿತಾಂಶವನ್ನು ಎಲ್ಲರೂ ನೋಡುತ್ತಿದ್ದೀರಿ ಎಂದರು.

ಕಾಂಗ್ರೆಸ್ ನಾಯಕರು ಕರ್ನಾಟಕದ ಇತಿಹಾಸ, ಸಂಸ್ಕೃತಿ ಮತ್ತು ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಈ ಮಹಾನ್ ರಾಜ್ಯದ ಶ್ರೀಮಂತ ಕೊಡುಗೆಯನ್ನು ಏಕೆ ಅವಮಾನಿಸಿದ್ದಾರೆ? ಎಂದು ಪ್ರಶ್ನಿಸಿದರು. ಅಲ್ಲದೇ ಕರ್ನಾಟಕವನ್ನು ಅಭಿವೃದ್ಧಿಯಲ್ಲಿ ಇಡೀ ದೇಶದಲ್ಲಿಯೇ ನಂಬರ್ 1 ರಾಜ್ಯವನ್ನಾಗಿ ಮಾಡಲಾಗುವುದು ಎಂದು ಭರವಸೆ ನೀಡಿದರು. 

ಭ್ರಷ್ಟಾಚಾರ ಮತ್ತು ತುಷ್ಟೀಕರಣ ಮಾಡುವ ಕಾಂಗ್ರೆಸ್‌ನಿಂದ ಯುವಕರ ಭವಿಷ್ಯವನ್ನು ರೂಪಿಸಲು ಸಾಧ್ಯವೇ?  ಮೊದಲ ಬಾರಿಗೆ ಮತದಾನ ಮಾಡುವವರು ಈ ಬಗ್ಗೆ ಚಿಂತಿಸಿ. ನಿಮ್ಮ ಪೋಷಕರು ಅನುಭವಿಸಿದ ಕಷ್ಟವನ್ನು ನೀವು ಕೂಡಾ ಪಡಬಾರದೆಂದು ನಿಮ್ಮೆಲ್ಲಾ ಕಷ್ಟಗಳನ್ನು ನಿವಾರಿಸಲು ನಾನಿದ್ದೇನೆ ಎಂದರು.

ಕಾಂಗ್ರೆಸಿಗರಿಗೆ ಸೋಲಿನ ಭೀತಿ ಕಾಡುತ್ತಿದೆ. ಎಷ್ಟರಮಟ್ಟಿಗೆ ಎಂದರೆ ತಮ್ಮ ಸೋಲಿಗೆ ಯಾರನ್ನು ಹೊಣೆಯಾಗಿಸುವುದು ಎಂಬ ಚರ್ಚೆಯಲ್ಲಿ ತೊಡಗಿಕೊಂಡಿದ್ದಾರೆ. ರಾಜ್ಯವನ್ನು ವಿಂಗಡಿಸುವ ವಿಚ್ಛಿದ್ರಕಾರಿ ಮನಸ್ಥಿತಿ ಇರುವ, ವಿದೇಶಿ ಶಕ್ತಿಗಳೊಂದಿಗೆ ಜೊತೆಗೂಡಿ ಭಾರತದ ಸಾರ್ವಭೌಮತ್ವವನ್ನು ಅವಮಾನಿಸುವ ಕಾಂಗ್ರೆಸ್‌ಗೆ ಪ್ರತಿ ಕನ್ನಡಿಗನೂ ತಕ್ಕ ಉತ್ತರ ಕೊಡಲೇಬೇಕು ಎಂದು ಜನತೆಯಲ್ಲಿ ಮನವಿ ಮಾಡಿದರು.

ನಂತರ ನಂಜನಗೂಡಿ ಪ್ರಸಿದ್ಧ ನಂಜುಂಡೇಶ್ವರಿ ದೇವಾಲಯಕ್ಕೆ ತೆರಳಿ ವಿಶೇಷ ಪ್ರಾರ್ಥನೆಯನ್ನು ಪ್ರಧಾನಿ ಮೋದಿ ಸಲ್ಲಿಸಿದರು.

SCROLL FOR NEXT